Asianet Suvarna News Asianet Suvarna News

ಮೋದಿ 2.0: ಸಂಕಷ್ಟದಲ್ಲಿ ಸಿಕ್ಕ ಅತಿಮಾನುಷ ನಾಯಕ!

ಮೋದಿ 2.0 ಸರ್ಕಾರದ ಮೊದಲ ವರ್ಷ| ಕೊರೋನಾ ನಂತರದ ಆರ್ಥಿಕ ಸಂಕಷ್ಟದಲ್ಲೂ ವಿಶ್ವವನ್ನು ಭಾರತ ಮುನ್ನಡೆಸಬಹುದು| ಸಂಕಷ್ಟದಲ್ಲಿ ಸಿಕ್ಕ ಅತಿಮಾನುಷ ನಾಯಕತ್ವ!

Interview with Mp Rajeev Chandrasekhar on PM Narendra Modi govt 2 completing year
Author
Bangalore, First Published May 30, 2020, 3:44 PM IST

- ರಾಜೀವ್‌ ಚಂದ್ರಶೇಖರ್‌, ರಾಜ್ಯಸಭಾ ಸದಸ್ಯ

ನಾವು ದುರ್ಬಲ ನಾಯತ್ವದ ಬದಲಾಗಿ ಇಂದು ಉತ್ತಮ ನಾಯಕನನ್ನು ಹೊಂದಿದ್ದೇವೆ. ಮೊದಿ ಅವರು ತಮ್ಮ ಆತ್ಮನಿರ್ಭರ ಭಾರತದ ಕನಸನ್ನು ಮುಂದಿಟ್ಟಿದ್ದಾರೆ. ಈ ಮೂಲಕ ತಾವು ಕೊರೋನಾ ಸಂಕಷ್ಟದ ಹೊರತಾಗಿಯೂ ಬೇರೆ ವಿಷಯದ ಬಗ್ಗೆ ಹೊಂದಿರುವ ಕಾಳಜಿಯನ್ನು ದೇಶಕ್ಕೆ ತೋರಿಸಿಕೊಟ್ಟಿದ್ದಾರೆ. ತನ್ಮೂಲಕ ಬದಲಾಗುತ್ತಿರುವ ವಿಶ್ವ ಸನ್ನಿವೇಶದಲ್ಲಿ ದೇಶವನ್ನು ಹೊಸ ಸಂಪದ್ಭರಿತ ಅವಕಾಶಗಳತ್ತ ಮುನ್ನಡೆಸುತ್ತಿದ್ದಾರೆ.

ಇಡೀ ವಿಶ್ವ, ಭಾರತ ಮತ್ತು ಕರ್ನಾಟಕ ಚೀನಾದಿಂದ ಉದ್ಭವಿತ ಕೊರೋನಾ ಪಿಡುಗಿನ ವಿರುದ್ಧ ಹೋರಾಟ ನಡೆಸುತ್ತಿರುವಾಗಲೇ ನಾವು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ 2ನೇ ಅವಧಿಯ ಮೊದಲ ವರ್ಷವನ್ನೂ ಪೂರ್ಣಗೊಳಿಸುತ್ತಿದ್ದೇವೆ.

2019ರ ಮೇ 30ರಂದು ಮೋದಿ ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಈ ಭಾರಿ ಅವರು ಅಭೂತ ಬಹುಮತದೊಂದಿಗೆ ಗೆಲುವು ಸಾಧಿಸಿದ್ದರು. ಅದು ಇತ್ತೀಚಿನ ಇತಿಹಾಸದಲ್ಲೇ ಯಾವುದೇ ನಾಯಕರೊಬ್ಬರಿಗೆ ಸಿಕ್ಕ ನಿರ್ಣಾಯಕ ಮತ್ತು ಕಳೆದ 3 ದಶಕಗಳಲ್ಲೇ ಯಾವುದೇ ರಾಜಕೀಯ ಪಕ್ಷ ಮತ್ತು ನಾಯಕರೊಬ್ಬರಿಗೆ ಸಿಕ್ಕ ಅತ್ಯಂತ ಸ್ಪಷ್ಟಬಹುಮತ. 61 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದ ಈ ಚುನಾವಣೆಯ ಫಲಿತಾಂಶ ಮೋದಿ ಅವರ ಮೊದಲ 5 ವರ್ಷದ ಕಠಿಣ ಪರಿಶ್ರಮದ ನಾಯಕತ್ವಕ್ಕೆ ಸಿಕ್ಕ ಸಮರ್ಥನೆಯಾಗಿತ್ತು. ಈ ಗೆಲುವು ಅವರ ಬೆಂಬಲಿಗರಿಗೆ ಇನ್ನೂ ಹೆಚ್ಚು ತೃಪ್ತಿ ತಂದುಕೊಟ್ಟಿದ್ದಕ್ಕೆ ಮತ್ತೊಂದು ಕಾರಣವೆಂದರೆ, ವಿವಿಧ ವಿರೋಧ ಪಕ್ಷಗಳು ಮತ್ತು ದೆಹಲಿಯ ಗಣ್ಯರು ದ್ವೇಷಪೂರಿತ ಸುಳ್ಳಿನ ಪ್ರಚಾರ ನಡೆಸಿದ ಹೊರತಾಗಿಯೂ ಮೋದಿ ದಾಖಲೆಯ ಜನಪ್ರಿಯತೆ ಪಡೆದುಕೊಂಡಿದ್ದು.

ಮಹಿಳಾ ಉದ್ಯಮಿಗಳ ಪರ ರಾಜೀವ್ ಚಂದ್ರಶೇಖರ್ ವಕಾಲತ್ತು. ವಿತ್ತ ಸಚಿವರಿಗೆ ಸಲಹೆಗಳು

ಕರ್ನಾಟಕದ ಜನತೆ ಕೂಡಾ ಬಿಜೆಪಿಯನ್ನು ಅಭೂತಪೂರ್ವವಾಗಿ ಬೆಂಬಲಿಸುವ ಮೂಲಕ 28ರಲ್ಲಿ 25 ಸ್ಥಾನ ಗೆಲ್ಲುವಂತೆ ಮಾಡಿದರು. ಬಹುತೇಕ ರಾಜ್ಯಗಳಲ್ಲಿ ಇದೇ ರೀತಿಯ ಫಲಿತಾಂಶ ಪ್ರಕಟಗೊಂಡಿತ್ತು. ಜನತೆ ನಮ್ಮ ಪ್ರಧಾನಿಯನ್ನು ದೃಢವಾಗಿ ಬೆಂಬಲಿಸಿದ್ದರು ಮತ್ತು ಕಾಂಗ್ರೆಸ್‌ ಹಾಗೂ ಅದರ ಮಿತ್ರಪಕ್ಷಗಳು ಮುಂದಿಟ್ಟಿದ್ದ ವಿಭಜನಕಾರಿ ಮತ್ತು ಸುಳ್ಳಿನ ಸರಮಾಲೆ ತಿರಸ್ಕರಿಸಿದ್ದರು.

5 ವರ್ಷಕ್ಕೆ ನರೇಂದ್ರ ಮೋದಿ ಗುರಿ

ಮೋದಿ ತಮ್ಮ ಎರಡನೇ ಅವಧಿಯನ್ನು ಸ್ಪಷ್ಟಉದ್ದೇಶದೊಂದಿಗೆ ಆರಂಭಿಸಿದ್ದರು - ಸಂಸತ್ತಿನ ಮೊದಲ ಅಧಿವೇಶನದಲ್ಲಿ ರಾಷ್ಟ್ರಪತಿಗಳು ಸರ್ಕಾರದ ಗುರಿಯನ್ನು ಮುಂದಿಡುವುದರೊಂದಿಗೆ ಈ ರೀತಿ ಪ್ರಸ್ತಾಪಿಸಿದ್ದರು...

‘ಹೊಸ ಭಾರತದ ಕಲ್ಪನೆಯು ಕೇರಳದ ಪ್ರಸಿದ್ಧ ಧರ್ಮಗುರು, ಕವಿ, ಸಮಾಜ ಸುಧಾರಕ ಶ್ರೀ ನಾರಾಯಣ ಗುರು ಅವರ ಉದಾತ್ತ ಗುಣಗಳಿಂದ ಪ್ರಭಾವಿತವಾಗಿದೆ: ‘ಜಾತಿ-ಭೇದಂ ಮತ-ದ್ವೇಷಂ ಏದುಮಿಲ್ಲಾದೇಸರ್ವರುಂ

ಸೋದರತ್ವೇನವಾಳುನ್ನ ಮಾತೃಕಾಸ್ಥಾನ ಮಾನ್ನಿತ್‌’

ಅಂದರೆ, ಎಲ್ಲಿ ಜನರು ಸೋದರರಂತೆ, ಜಾತಿ ಮತ್ತು ಧರ್ಮಭೇದ ಮರೆತು ಒಂದಾಗಿ ನೆಲೆಸುತ್ತಾರೊ ಅದೇ ಆದರ್ಶ ಸ್ಥಳ.

ಹೊಸ ಭಾರತದ ಈ ಹಾದಿಯಲ್ಲಿ ಗ್ರಾಮೀಣ ಭಾರತವು ಮತ್ತಷ್ಟುಸಶಕ್ತಗೊಳ್ಳಲಿದೆ ಮತ್ತು ನಗರ ಭಾರತವನ್ನು ಮತ್ತಷ್ಟುಸಬಲೀಕರಣಗೊಳಿಸಲಿದೆ;

ಹೊಸ ಭಾರತದ ಈ ಹಾದಿಯಲ್ಲಿ, ಭಾರತದ ಉದ್ಯಮಿಗಳು ಹೊಸ ಔನ್ನತ್ಯ ಸಾಧಿಸಲಿದ್ದಾರೆ ಮತ್ತು ಯುವ ಭಾರತೀಯರ ಕನಸೂ ಸಾಕಾರಗೊಳ್ಳಲಿದೆ;

ಹೊಸ ಭಾರತದ ಈ ಹಾದಿಯಲ್ಲಿ, ಎಲ್ಲಾ ವ್ಯವಸ್ಥೆಗಳು ಪಾರದರ್ಶಕಗೊಳ್ಳಲಿವೆ ಮತ್ತು ಪ್ರಾಮಾಣಿಕ ಭಾರತೀಯನ ಗೌರವ ಇನ್ನಷ್ಟುಎತ್ತರಕ್ಕೇರಲಿದೆ;

ಹೊಸ ಭಾರತದ ಈ ಹಾದಿಯಲ್ಲಿ, 21ನೇ ಶತಮಾನಕ್ಕೆ ಮೂಲಸೌಕರ್ಯ ನಿರ್ಮಿಸಲಾಗುವುದು ಮತ್ತು ಶಕ್ತಿಶಾಲಿ ಭಾರತ ನಿರ್ಮಾಣಕ್ಕೆ ಅಗತ್ಯವಾದ ಸಂಪನ್ಮೂಲ ಕ್ರೋಡೀಕರಿಸಲಾಗುವುದು.

ಕೊರೋನೋತ್ತರ ಜಗತ್ತಲ್ಲಿ ಏನು ಬದಲಾಗಬೇಕು?

1 ವರ್ಷದಲ್ಲಿ ಕರ್ನಾಟಕಕ್ಕೆ ನೀಡಿದ್ದೇನು?

ಈ ಒಂದು ವರ್ಷದಲ್ಲಿ ಕರ್ನಾಟಕದ ಜನತೆ ಕೊನೆಗೂ ತಾವು 2018ರಲ್ಲಿ ತಾವು ಯಾವ ಸರ್ಕಾರಕ್ಕೆ ಮತ ಹಾಕಿದ್ದರೋ ಅದನ್ನು ಪಡೆದುಕೊಂಡರು. ಅದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಸಿದುಕೊಂಡ ಜನಮತವಾಗಿತ್ತು. ಅದಕ್ಕೂ ಹೆಚ್ಚಾಗಿ ಕರ್ನಾಟಕ, ಕೇಂದ್ರದಲ್ಲಿನ ಮೋದಿ ಅವರ ಸರ್ಕಾರದಿಂದ ಬಹಳಷ್ಟುಲಾಭವನ್ನು ಪಡೆದುಕೊಂಡಿತು.

1. 2019-20ರಲ್ಲಿ ಕೇಂದ್ರ ಸರ್ಕಾರಿಂದ ನೆರವಿನ ರೂಪದ ಒಟ್ಟು ಕೇಂದ್ರೀಯ ಅನುದಾನ ಮತ್ತು ಕೇಂದ್ರದಿಂದ ಬಂದ ಇತರೆ ವರ್ಗಾವಣೆ: 17,249 ಕೋಟಿ ರು.ಗಳು.

2. 2019-20ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಗಳಿಗೆ ನೀಡಿದ ಅನುದಾನ - 10,079.06 ಕೋಟಿ ರು.ಗಳು.

3. ಕೇಂದ್ರ ಸರ್ಕಾರದಿಂದ ಪ್ರವಾಹ ಪರಿಹಾರ ನೆರವು - 1869 ಕೋಟಿ ರು.ಗಳು.

4. ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಲ್ಲಿ ಕರ್ನಾಟಕದ ಫಲಾನುಭವಿಗಳ ಸಂಖ್ಯೆ - 49,12,445

5. ಕರ್ನಾಟಕದಲ್ಲಿ ಮೂಲಸೌಕರ್ಯ ಅಭಿವೃದ್ಧಿ

- ಕಲಬುರಗಿ ವಿಮಾನ ನಿಲ್ದಾಣ ಉದ್ಘಾಟನೆ, ಶಿವಮೊಗ್ಗ ವಿಮಾನ ನಿಲ್ದಾಣ ಅಭಿವೃದ್ಧಿ.

- 18600 ಕೋಟಿ ರು. ವೆಚ್ಚದಲ್ಲಿ ಬೆಂಗಳೂರಿನಲ್ಲಿ 148 ಕಿ.ಮೀ. ಉದ್ದದ ಉಪನಗರ ರೈಲು ಯೋಜನೆ ಘೋಷಣೆ.

- ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಹೆಚ್ಚಿನ ನೆರವು.

- ಹೊಸ ರೈಲ್ವೆ ಮಾರ್ಗಗಳಿಗೆ 3085 ಕೋಟಿ ರು. ಘೋಷಣೆ.

ಬೆಳಗಾವಿ- ಧಾರವಾಡ

ಮೈಸೂರು- ಕುಶಾಲನಗರ

ಶಿಕಾರಿಪುರ- ರಾಣೆಬೆನ್ನೂರು

- ಕೋಲಾರದಲ್ಲಿ 495 ಕೋಟಿ ರು. ವೆಚ್ಚದಲ್ಲಿ ರೈಲ್ವೆ ವರ್ಕ್ಶಾಪ್‌.

- 2022ರೊಳಗೆ ಕರ್ನಾಟಕದಲ್ಲಿ ಎಲ್ಲಾ ಮಾರ್ಗಗಳ ಡಬ್ಲಿಂಗ್‌ ಮತ್ತು ವಿದ್ಯುದೀಕರಣದ ನಿರ್ಧಾರ.

- ಬೆಂಗಳೂರು ಮತ್ತು ಹುಬ್ಬಳ್ಳಿ ನಗರಗಳ ನಡುವಿನ ಸಂಚಾರದ ಅವಧಿ 5 ಗಂಟೆ ಕಡಿತ.

ಆರ್ಥಿಕ ಪುನಶ್ಚೇತನಕ್ಕೆ ಆರ್‌ಸಿ 16 ಸಲಹೆ!

1 ವರ್ಷದಲ್ಲಿ ದೇಶಕ್ಕೆ ನೀಡಿದ್ದೇನು?

ರಾಷ್ಟ್ರೀಯ ಮಟ್ಟದಲ್ಲಿ ಕೂಡಾ ನರೇಂದ್ರ ಮೋದಿ ಸರ್ಕಾರ ಒಂದು ವರ್ಷದ ಆಡಳಿತದಲ್ಲಿ ಹಿಂದಿನ ಸರ್ಕಾರಗಳು ದಶಕಗಳಿಂದಲೂ ಮಾಡಲಾಗದ ಸಾಧನೆ ಮಾಡಿತು - ಸಂವಿಧಾನದ 370ನೇ ವಿಧಿ ರದ್ದು, ಹೊಸ ರಾಜ್ಯವಾಗಿ ಲಡಾಖ್‌ ರಚನೆ, ಪೌರತ್ವ ತಿದ್ದುಪಡಿ ಕಾಯ್ದೆ, ರಾಮಮಂದಿರ ವಿಷಯ ಸೌಹಾರ್ದಯುತವಾಗಿ ಬಗೆಹರಿಸಿದ್ದು, ಐಬಿಸಿ ಕಾಯ್ದೆಗೆ ತಿದ್ದುಪಡಿ, ಉಗ್ರವಾದದ ವಿರುದ್ಧ ಕಠಿಣ ನೀತಿ, ಅಮೆರಿಕ ಅಧ್ಯಕ್ಷರ ಜೊತೆಗಿನ ಐತಿಹಾಸಿಕ ಸಭೆ ಇತ್ಯಾದಿಗಳು. ಮೋದಿ ಸರ್ಕಾರ ಭಾರತದ ಜನತೆಗೆ ಕೊಟ್ಟಭರವಸೆಗಳನ್ನು ಈಡೇರಿಸಲು ಕೊಂಚವೂ ಸಮಯ ವ್ಯರ್ಥ ಮಾಡಲಿಲ್ಲ. ಆರ್ಥಿಕ ವಿಷಯದಲ್ಲಿ ನೋಡುವುದಾದರೆ, ಈ ವರ್ಷ 50 ಶತಕೋಟಿ ಡಾಲರ್‌ ಎಫ್‌ಡಿಐ ಹರಿದುಬಂದಿದ್ದು, ಹೂಡಿಕೆಯಲ್ಲಿ ಕಳೆದ ವರ್ಷಕ್ಕಿಂತ ಗಣನೀಯ ಸಾಧನೆಗೈಯಲಾಗಿದೆ.

ಕೊರೋನಾ ಎದುರಿಸಲು ಅದ್ಭುತ ಸಂಕಲ್ಪ

ಪ್ರಸಕ್ತ ದಶಮಾನದ ಮೊದಲ ವರ್ಷದಲ್ಲೇ ಕಾಣಿಸಿಕೊಂಡ ಜಾಗತಿಕ ಕೊರೋನಾ ವೈರಸ್‌ ಪಿಡುಗು ಮೋದಿ ಅವರ ನಾಯಕತ್ವದಲ್ಲಿ ಪ್ರಮುಖ ಸ್ಥಾನ ಪಡೆಯಿತು. ಇದು ಸರ್ಕಾರ ಮತ್ತು ಜನರ ಪಾಲಿಗೆ ಅಭೂತಪೂರ್ವ ಸವಾಲಾಗಿ ಎದುರಾಗಿತ್ತು. ಹಿಂದೆಂದೂ ಕೇಳರಿಯದ ಈ ಪಿಡುಗು ತಾತ್ಕಾಲಿಕವಾಗಿಯಾದರೂ, ಕಳೆದ 5 ವರ್ಷ ಮತ್ತು ನಂತರದ 6 ತಿಂಗಳಲ್ಲಿ ಸಾಧಿಸಿದ ಆರ್ಥಿಕ ಪ್ರಗತಿಗೆ ತಡೆಯೊಡ್ಡಿದೆ. ಜನರಿಗೆ ಮತ್ತು ಆರ್ಥಿಕತೆಗೆ ಕೊರೋನಾ ನೀಡಿರುವ ಶಾಕ್‌ ಅತ್ಯಂತ ಕಠೋರವಾದುದು.

ಆದರೆ ಸಂಕಷ್ಟದ ಇಡೀ ಹಾದಿಯಲ್ಲಿ, ನರೇಂದ್ರ ಮೋದಿ ನಾಯಕತ್ವ ಮತ್ತೊಮ್ಮೆ ಒರೆಗೆ ಹಚ್ಚಲ್ಪಟ್ಟಿತು. ಈ ಹೋರಾಟಕ್ಕೆ ಪ್ರತಿ ನಾಗರಿಕರನ್ನೂ ಸಜ್ಜುಗೊಳಿಸುವ ಮೂಲಕ ವೈರಸ್‌ ವಿರುದ್ಧ ಇಡೀ ದೇಶ ಒಂದಾಗಿ ಹೋರಾಟ ಮಾಡುವಂತೆ ಮೋದಿ ನೋಡಿಕೊಂಡರು.

- ಸಂಕಷ್ಟಮಯ ಲಾಕ್‌ಡೌನ್‌ ಸಮಯದಲ್ಲಿ ದೇಶದ 140 ಕೋಟಿ ಜನರನ್ನು ಅತ್ಯಂತ ಸಂಯಮದಿಂದ ಮುನ್ನಡೆಸಿದರು. ಲಾಕ್‌ಡೌನ್‌ ಕಷ್ಟಕರವಾದುದಾಗಿತ್ತು ಆದರೂ ಅದು ಅನಿವಾರ್ಯವಾಗಿತ್ತು. ಏಕೆಂದರೆ ಅದು ಕೇಂದ್ರ ಮತ್ತು ರಾಜ್ಯಗಳಿಗೆ ಅಮೂಲ್ಯ ಸಮಯಾವಕಾಶವನ್ನು ಒದಗಿಸಿತ್ತು.

ಹರ್ಜಿತ್ ಸಿಂಗ್‌ಗೆ ಸಂಸದ ರಾಜೀವ್ ಚಂದ್ರಶೇಖರ್, ಆಂಧ್ರ ಪೊಲೀಸ್ ಸೆಲ್ಯೂಟ್

- ಹಲವು ರಾಜ್ಯಗಳಲ್ಲಿ ದುಸ್ಥಿತಿಯಲ್ಲಿದ್ದ ಆರೋಗ್ಯ ಮೂಲಸೌಕರ್ಯ ವ್ಯವಸ್ಥೆ ಸರಿಪಡಿಸಲು, ಕೋವಿಡ್‌ ಬಗ್ಗೆ ನಮ್ಮ ಜನರಲ್ಲಿ ಅರಿವು ಮೂಡಿಸಲು ಮತ್ತು ಸೋಂಕು ಎದುರಿಸಲು ದೃಢ ನಿಶ್ಚಯ ಮಾಡಲು ಸಮಯ ಸಿಕ್ಕಿತ್ತು.

ಮೋದಿ ಪ್ರಯತ್ನಗಳು ಅತಿಮಾನುಷ

ಲಾಕ್‌ಡೌನ್‌ ಘೋಷಣೆವರೆಗೆ ಮತ್ತು ಲಾಕ್‌ಡೌನ್‌ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವೈಯಕ್ತಿಕವಾಗಿ ಮಾಡಿದ ಪ್ರಯತ್ನಗಳು ಅತಿಮಾನುಷ. ಇತರೆ ಯಾವುದೇ ಸಾಮಾನ್ಯ ವ್ಯಕ್ತಿಯನ್ನು ಇಂಥ ಸನ್ನಿವೇಶಗಳು ಮಣಿಸಿಬಿಡುತ್ತಿದ್ದವು. ನಿತ್ಯವೂ ಅಡೆತಡೆಯಿಲ್ಲದ ಮತ್ತು ಸತತವಾಗಿ ಒಂದಾದ ಮೇಲೊಂದರಂತೆ ಆರೋಗ್ಯ ಕ್ಷೇತ್ರದ ತಜ್ಞರು, ಅಧಿಕಾರಿಗಳು, ಸಚಿವರು, ಮುಖ್ಯಮಂತ್ರಿಗಳ ಜೊತೆ, ವಿಶ್ವ ನಾಯಕರ ಜೊತೆ ಸಮಾಲೋಚನೆ, ಜನರು ಮತ್ತು ಮಾಧ್ಯಮಗಳೊಂದಿಗೆ ಸಂವಾದ ಮತ್ತು ಅದೇ ಸಮಯದಲ್ಲಿ ದೇಶದ ಇತರೆ ವಿಷಯಗಳ ಬಗ್ಗೆಯೂ ಗಮನ ಹರಿಸುವ ಮೋದಿ ಅವರ ಕಾರ್ಯವೈಖರಿ, ನನ್ನಂಥ ಕಾರ್ಯವ್ಯಸನಿಗಳೂ ಹುಬ್ಬೇರಿಸುವಂತೆ ಮಾಡಿದೆ ಮತ್ತು ಇಡೀ ವಿಶ್ವಸಮುದಾಯದ ಮೆಚ್ಚುಗೆಗೂ ಪಾತ್ರವಾಗಿದೆ.

ಮೋದಿ ಸರ್ಕಾರ ತನ್ನ ಮೊದಲ ಅವಧಿಯಲ್ಲಿ ಕೈಗೊಂಡ ಹಲವು ನಿರ್ಧಾರಗಳು ವೈರಸ್‌ ವಿರುದ್ಧದ ಹೋರಾಟ ಮತ್ತು ಲಾಕ್‌ಡೌನ್‌ ಅವಧಿಯಲ್ಲಿ ದೇಶಕ್ಕೆ ಬಹುವಾಗಿ ಲಾಭ ಮಾಡಿಕೊಟ್ಟವು. ಕೊರೋನಾ ಪಿಡುಗಿನಿಂದ ಆಘಾತಕ್ಕೆ ತುತ್ತಾಗಿದ್ದ ಬಡವರು ಮತ್ತು ದುರ್ಬಲ ವರ್ಗದವರಿಗೆ ತಕ್ಷಣವೇ ಆರ್ಥಿಕ ನೆರವು ನೀಡಲು ಸಹಾಯ ಮಾಡಿದ್ದು ಮೋದಿ ಅವರೇ ಜಾರಿಗೆ ತಂದ ಜನಧನ್‌ ಖಾತೆಗಳು. ಜನಧನ್‌ ಯೋಜನೆ, ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆ, ಸಾರ್ವಜನಿಕ ಪಡಿತರ ವ್ಯವಸ್ಥೆ ಮತ್ತು ಪ್ರಧಾನಮಂತ್ರಿ ಕಿಸಾನ್‌ ಯೋಜನೆಗಳು ರೈತರು ಮತ್ತು ಬಡವರಿಗೆ ಯಾವುದೇ ಸೋರಿಕೆ ಇಲ್ಲದೆಯೇ ಸರ್ಕಾರದ ಆರ್ಥಿಕ ನೆರವು ನೇರವಾಗಿ ತಲುಪುವಂತೆ ಮಾಡಿದವು. ಡಿಜಿಟಲ್‌ ಇಂಡಿಯಾ ಯೋಜನೆಯು ಕೋಟ್ಯಂತರ ಜನರಿಗೆ ಮಾಹಿತಿ ರವಾನಿಸಲು ಮತ್ತು ಉದ್ಯಮಗಳು ತಾವಿರುವ ಸ್ಥಳದಿಂದಲೇ ಉದ್ಯಮ ನಡೆಸಲು ಅನುಕೂಲ ಮಾಡಿಕೊಟ್ಟಿತು. ಮೋದಿ ಆರಂಭಿಸಿದ್ದ ಸ್ವಚ್ಛ ಭಾರತ ಆಂದೋಲನ ಈಗಾಗಲೇ ಜನರಲ್ಲಿ ಆರೋಗ್ಯ ಮತ್ತು ಸ್ವಚ್ಚತೆಯ ಕುರಿತು ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದೆ.

Interview with Mp Rajeev Chandrasekhar on PM Narendra Modi govt 2 completing year

ಇನ್ನು ಅಡುಗೆ ಅನಿಲ ಪೂರೈಕೆಗೆ ಇರುವ ಉಜ್ವಲ, ಜನ ಔಷಧಿ ಮತ್ತು ಪ್ರಧಾನ ಮಂತ್ರಿ ಆಯುಷ್ಮಾನ್‌ ಯೋಜನೆಗಳು ಕೊರೋನಾ ಪಿಡುಗಿನ ವೇಳೆ ಜನರಿಗೆ ಭಾರೀ ಪ್ರಮಾಣದಲ್ಲಿ ನೆರವಿಗೆ ಬಂದಿದೆ.

ರೈಲ್ವೆ ವಲಯದ ಸುಧಾರಣೆ ಮತ್ತು ಬದಲಾವಣೆಗಳು ಲಾಕ್‌ಡೌನ್‌ ಅವಧಿಯಲ್ಲಿ ಲಕ್ಷಾಂತರ ಉದ್ಯೋಗಿಗಳು ಮತ್ತು ಕಾರ್ಮಿಕರನ್ನು ತಮ್ಮ ತಮ್ಮ ರಾಜ್ಯಗಳಿಗೆ ಕಳುಹಿಸಿಕೊಡುವುದನ್ನು ಸಾಧ್ಯಮಾಡಿವೆ.

ವಾಯುಮಾರ್ಗ ಮತ್ತು ಸಮುದ್ರ ಮಾರ್ಗದ ಮೂಲಕ ರೂಪಿಸಿದ ವಂದೇ ಭಾರತ್‌ ಯೋಜನೆ, ವಿದೇಶಗಳಲ್ಲಿನ ಸಾವಿರಾರು ಭಾರತೀಯರನ್ನು ತವರಿಗೆ ಕರೆತರಲು ನೆರವಾಯಿತು. ಇದು ಯಾವುದೇ ವಿಷಯವನ್ನು ಸಮರ್ಥವಾಗಿ ನಿರ್ವಹಿಸುವ ಮೋದಿ ಅವರ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿತು.

ಅತ್ಯಂತ ಮುಖ್ಯವಾಗಿ ಹಣಕಾಸು ವಲಯ ಮತ್ತು ಬ್ಯಾಂಕ್‌ಗಳನ್ನು ಕಳೆದ 5 ವರ್ಷದಲ್ಲಿ ಆರ್ಥಿಕವಾಗಿ ಸ್ವಚ್ಛಗೊಳಿಸುವ ಯತ್ನವನ್ನು ಸರ್ಕಾರ ಮಾಡಿದ್ದು, ಬ್ಯಾಂಕ್‌ಗಳೀಗ ಇನ್ನಷ್ಟುಸಶಕ್ತಗೊಂಡಿವೆ. ಕೊರೋನಾ ಇಷ್ಟುದೊಡ್ಡ ಹೊಡೆತ ನೀಡಿದ ಹೊರತಾಗಿಯೂ ಸಣ್ಣ ಉದ್ಯಮಗಳು ಇನ್ನೂ ಅದನ್ನು ತಾಳಿಕೊಂಡಿವೆ ಎಂದಾದರೆ ಅದಕ್ಕೆ ಹಣಕಾಸು ವಲಯದಲ್ಲಿ ಮೋದಿ ಸರ್ಕಾರ ಕೈಗೊಂಡ ಕ್ರಮಗಳೇ ಕಾರಣ.

ಆರ್ಥಿಕ ಸಂಕಷ್ಟ ನಿವಾರಿಸಲು RBI ದಿಟ್ಟ ಕ್ರಮ ಸ್ವಾಗತಿಸಿದ ರಾಜ್ಯಸಭಾ MP ರಾಜೀವ್ ಚಂದ್ರಶೇಖರ್!

ಮೋದಿ ಇರಿಸಿದ 2 ಅಪ್ರತಿಮ ನಡೆಗಳು

ಇವೆಲ್ಲಾ ವಿಷಯಗಳು ದೇಶಕ್ಕೆ ಕೊರೋನಾ ಆಘಾತ ತಡೆದುಕೊಳ್ಳುವ ಶಕ್ತಿ ಮತ್ತು ಇತರೆ ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಸಾವಿನ ಪ್ರಮಾಣ ಕಡಿಮೆ ಮಾಡಲು ನೆರವು ನೀಡಿದ್ದರೆ, ಕೊರೋನಾ ವೈರಸ್‌ ವಿರುದ್ಧದ ಹೊರಾಟದಲ್ಲಿ ದೇಶವನ್ನು ಮುನ್ನಡೆಸಿದ ಮೋದಿ ಅವರ ಈ ಮುಂದಿನ ಎರಡು ನಿರ್ಧಾರಗಳು ವಿಭಿನ್ನವಾಗಿ ಕಾಣಿಸುತ್ತವೆ.

ಮೊದಲಿಗೆ, ಒಕ್ಕೂಟ ವ್ಯವಸ್ಥೆಯೆಡೆಗಿನ ಅವರ ಬದ್ಧತೆ ಮತ್ತು ರಾಜ್ಯಗಳ ಜೊತೆಗಿನ ಸಮಾಲೋಚನೆ ಹಾಗೂ ಅವುಗಳಿಂದ ವ್ಯಕ್ತವಾದ ಅಭಿಪ್ರಾಯ ಆಧರಿಸಿಯೇ ರಾಷ್ಟ್ರೀಯ ನೀತಿ ರೂಪಿಸಿದ್ದು. ಭಾರತ ಎದುರಿಸುತ್ತಿರುವ ಅತ್ಯಂತ ಭಯಾನಕ ಬಿಕ್ಕಟ್ಟನ್ನು ಎದುರಿಸಲು ಪ್ರಧಾನಿ ಮತ್ತು ಮುಖ್ಯಮಂತ್ರಿಯ ನಿಜವಾದ ಸಹಭಾಗಿತ್ವ. ಈ ಸಹಭಾಗಿತ್ವ ಆರೋಗ್ಯ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿ ಮತ್ತು ಜನರನ್ನು ಸುರಕ್ಷಿತವಾಗಿಡುವಲ್ಲಿ ಯಶಸ್ವಿಯಾಗಿತ್ತು.

ಎರಡನೇ ವಿಷಯವೆಂದರೆ, ಕಾನೂನು ಮತ್ತು ನಿಯಮಗಳನ್ನು ಜನರ ಮೇಲೆ ಹೇರುವ ಬದಲು ಅವರೇ ಅದನ್ನು ಅನುಸರಿಸುವಂತೆ ಮಾಡಿದ ರೀತಿ. ಭಾರತದಂಥ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ವೈಯಕ್ತಿಕ ವಿಶ್ವಾಸಾರ್ಹತೆ ಮತ್ತು ಜನಪ್ರಿಯತೆ ಹೊಂದಿರುವ ಮೋದಿ ಅವರಂಥ ನಾಯಕರಿಂದ ಮಾತ್ರವೇ ಇದು ಸಾಧ್ಯ. ಆರ್ಥಿಕತೆ, ಉದ್ಯಮ, ಉದ್ಯೋಗ ಮತ್ತು ಜೀವನೋಪಾಯದಂಥ ಸವಾಲುಗಳು ಇನ್ನೂ ಇವೆ. ಈ ವಿಷಯದಲ್ಲೂ ಪ್ರಧಾನಿ ಮತ್ತು ಅವರ ಸರ್ಕಾರ ಪ್ರತಿಕ್ರಿಯಾತ್ಮಕ ಮತ್ತು ಸಹಾನುಭೂತಿಯನ್ನು ಹೊಂದಿದೆ. ಕೇಂದ್ರ ಸರ್ಕಾರ ಇತ್ತೀಚೆಗೆ ಘೋಷಿಸಿದ 20 ಲಕ್ಷ ಕೋಟಿ ರು. ಪ್ಯಾಕೇಜ್‌ ಸಂಕಷ್ಟದ ಈ ಸಮಯದಲ್ಲಿ ಸರ್ಕಾರ ನಮ್ಮ ನೆರವಿಗೆ ಇರಲಿದೆ ಎಂಬ ಭರವಸೆಯನ್ನು ಸಣ್ಣ ಉದ್ಯಮ, ಬಡವರು ಮತ್ತು ರೈತರಿಗೆ ನೀಡಿದೆ.

ಈ ಸಮಸ್ಯೆಗಳು ಸಾಲದೆಂಬಂತೆ, ಸಾಂಕ್ರಾಮಿಕ ಪಿಡುಗಿನ ಈ ಸಮಯದಲ್ಲಿ ಭಾರತವನ್ನು ಅಸ್ಥಿರಗೊಳಿಸುವ ಯತ್ನವನ್ನು ಪಾಕಿಸ್ತಾನ ಮತ್ತು ಚೀನಾ ಒಂದಾಗಿ ಮಾಡುತ್ತಿವೆ. ಆದರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರದಡಿಯಲ್ಲಿ, ಆರ್ಥಿಕ ಮತ್ತು ಆರೋಗ್ಯ ವಲಯದ ಶಾಕ್‌ ಹೊರತಾಗಿಯೂ ಎದುರಾಳಿಗಳಿಗೆ ಸ್ಪಷ್ಟಮತ್ತು ತಕ್ಕ ಪ್ರತಿಕ್ರಿಯೆಯನ್ನು ರವಾನಿಸಲಾಗಿದೆ.

ಕೊರೋನಾ ನಡುವೆಯೂ ಯೋಧನ ಕುಟುಂಬದ ನೆರವಿಗೆ ಬಂದ ಸಿಎಂ!

4 ವರ್ಷ ಮೋದಿ ಜೊತೆ ನಿಲ್ಲೋಣ

ಈ ಪಿಡುಗಿನ ಪರಿಣಾಮಗಳು ಇನ್ನೂ ಕೆಲ ಕಾಲ ಇರಲಿವೆ ಮತ್ತು ಈ ಅನಿಶ್ಚಿತತೆಯೇ ಹೊಸ ಸಹಜ ಸ್ಥಿತಿಯಾಗಲಿದೆ. ಆದರೆ ಪ್ರಸಕ್ತ ವರ್ಷ ನಮ್ಮ ಮುಂದಿಟ್ಟಿರುವ ಸನ್ನಿವೇಶ ತೋರಿದಂತೆ, ಸಂಕಷ್ಟದ ಈ ಸಮಯದಲ್ಲಿ ಭಾರತಕ್ಕೊಂದು ಶಕ್ತಿಶಾಲಿ ನಾಯಕತ್ವ ಬೇಕಾಗಿದೆ. ಅದೃಷ್ಟವಶಾತ್‌ ನಾವು ದುರ್ಬಲ, ದೃಢ ನಿರ್ಧಾರ ಕೈಗೊಳ್ಳಲಾಗದ ನಾಯತ್ವದ ಬದಲಾಗಿ ಉತ್ತಮ ನಾಯಕನನ್ನು ಹೊಂದಿದ್ದೇವೆ. ಮೊದಿ ಅವರು ತಮ್ಮ ಆತ್ಮನಿರ್ಭರ ಭಾರತದ ಕನಸನ್ನು ಮುಂದಿಟ್ಟಿದ್ದಾರೆ, ಈ ಮೂಲಕ ತಾವು ಈ ಸಂಕಷ್ಟದ ಹೊರತಾಗಿಯೂ ಬೇರೆ ವಿಷಯದ ಬಗ್ಗೆ ಹೊಂದಿರುವ ಕಾಳಜಿಯನ್ನು ದೇಶಕ್ಕೆ ತೋರಿಸಿಕೊಟ್ಟಿದ್ದಾರೆ. ತನ್ಮೂಲಕ ಬದಲಾಗುತ್ತಿರುವ ವಿಶ್ವ ಸನ್ನಿವೇಶದಲ್ಲಿ ದೇಶವನ್ನು ಹೊಸ ಸಂಪದ್ಭರಿತ ಭವಿಷ್ಯದ ಅವಕಾಶಗಳತ್ತ ಮುನ್ನಡೆಸುತ್ತಿದ್ದಾರೆ. ಅವರ ಮಾತಿನ ಪರಿಣಾಮಗಳು ಸ್ಪಷ್ಟವಾಗಿವೆ. ಕೊರೋನಾ ಪಿಡುಗಿನ ನಿರ್ವಹಣೆ ವಿಷಯದಲ್ಲಿ ಭಾರತವು ವಿಶ್ವವನ್ನು ಮುನ್ನಡೆಸಿದಂತೆ, ಕೋವಿಡ್‌ ಬಿಕ್ಕಟ್ಟಿನ ನಂತರದ ಆರ್ಥಿಕ ಚೇತರಿಕೆ ಬಳಿಕವೂ ಭಾರತ ವಿಶ್ವವನ್ನು ಮುನ್ನಡೆಸಬಹುದು ಎಂಬುದು.

ಇದೆಲ್ಲವೂ ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ಅವಧಿಯ ಮೊದಲ ಒಂದು ವರ್ಷದೊಳಗಾಗಿರುವ ಬೆಳವಣಿಗೆ. ಭಾರತ ತನ್ನ ನೈಜ ಹಿರಿಮೆ ಮತ್ತು ತನ್ನೆಲ್ಲಾ ನಾಗರಿಕ ಆರ್ಥಿಕ ಉನ್ನತಿಗೆ ಸಮೀಪವಾಗುತ್ತಿದ್ದು, ಈ ಹಂತದಲ್ಲಿ ಸರ್ಕಾರದ ಮಾತುಗಳಿಗೆ ಎಲ್ಲರೂ ಕಿವಿಯಾಗೋಣ. ಮೋದಿ ಅವರ ಮುಂದಿನ 4 ವರ್ಷದ ಪ್ರಯತ್ನ ಮತ್ತು ಕೆಲಸಗಳಿಗೆ ಬೆಂಬಲವಾಗೋಣ.

ಸಬ್‌ಕಾ ಸಾತ್‌ ಸಬ್‌ಕಾ ವಿಕಾಸ್‌ ಸಬ್‌ಕಾ ವಿಶ್ವಾಸ್‌

ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಬಂದ ನೆರವು

ಕ್ರಮ ಸಂಖ್ಯೆ ವಿಷಯ 2017-18 (ಎ/ಸಿ) 2018-19 (ಆರ್‌ಇ) 2019- 20 (ಬಿಇ)

1 ಕೇಂದ್ರೀಯ ಪ್ರಾಯೋಜಿತ ಯೋಜನೆ 11617.25.82 (ಶೇ.7.90) 11857. 86 (ಶೇ.7.15) 100099.76 (ಶೇ.5.55)

2 ಹಣಕಾಸು ಆಯೋಗದ ಅನುದಾನ 2708.18 3699.99 4908.55

3 ಇತರೆ ವರ್ಗಾವಣೆ/ ಇತರೆ ರಾಜ್ಯಗಳ ಅನುದಾನ 7314.35 11325.22 17249.00

ಒಟ್ಟು ಕೇಂದ್ರೀಯ ಸ್ವೀಕೃತಿ (1 ಪ್ಲಸ್‌ 2 ಪ್ಲಸ್‌ 3) 21640.78 (ಶೇ.14.72) 26882.17 (ಶೇ.16.20) 32257.31 (ಶೇ.17.74)

4. ಆದಾಯ ಸ್ವೀಕೃತಿ 146999.65 165896.96 181862.96

Follow Us:
Download App:
  • android
  • ios