ಸರ್ಕಾರದ ಅಸಮರ್ಥತೆಗೆ ದೇಶ ಭಾರೀ ಬೆಲೆ ತೆರಲಿದೆ: ರಾಹುಲ್ ಕಿಡಿ!
ಸರ್ಕಾರದ ಅಸಮರ್ಥತೆಗೆ ದೇಶ ಭಾರೀ ಬೆಲೆ ತೆರಲಿದೆ: ರಾಹುಲ್| ಸೋಂಕು ತಡೆಗೆ ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ನಿರ್ಧಾರ ಶ್ಲಾಘನೆ ಮಾಡಿದ್ದ ಚಿದಂಬರಂ ಬೆನ್ನಲ್ಲೇ ಕಾಂಗ್ರೆಸ್ ನಾಯಕನ ಕಿಡಿ
ನವದೆಹಲಿ[ಮಾ.19]: ಕೊರೋನಾ ವೈರಸ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗಿದ್ದರೂ, ಕಾಂಗ್ರೆಸ್ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮಾತ್ರ ಈ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ಕೊರೋನಾ ನಿಗ್ರಹದ ವಿಷಯದಲ್ಲಿ ನಿರ್ಣಾಯಕವಾಗಿ ಕಾರ್ಯನಿರ್ವಹಿಸುವಲ್ಲಿನ ಸರ್ಕಾರದ ಅಸಮರ್ಥತೆಯಿಂದಾಗಿ ದೇಶ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಚ್ಚರಿಕೆ ನೀಡಿದ್ದಾರೆ.
ಕ್ಷಿಪ್ರ ಮತ್ತು ಆಕ್ರಮಣಕಾರಿ ಕ್ರಮ ಕೊರೋನಾ ವೈರಸ್ಗೆ ಉತ್ತರವಾಗಿದೆ. ಆದರೆ, ನಮ್ಮ ಸರ್ಕಾರದ ಅಸಮರ್ಥತೆಯಿಂದಾಗಿ ಭಾರತ ಭಾರೀ ದೊಡ್ಡ ಬೆಲೆಯನ್ನು ತೆರಬೇಕಾದೀತು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಇನ್ನು ಎರಡು ದಿನಗಳ ಹಿಂದೆಯಷ್ಟೇ ಸೋಂಕು ತಡೆಗೆ ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ನಿರ್ಧಾರ ಶ್ಲಾಘನೀಯ ಎಂದು ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಕೇಂದ್ರ ಸರ್ಕಾರವನ್ನು ಲೋಕಸಭೆಯಲ್ಲಿ ಹಾಡಿ ಹೊಗಳಿದ್ದರು. ಅಲ್ಲದೇ ಇದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದೂ ಹೇಳಿದ್ದರು. ಹೀಗಿರುವಾಗ ಕಾಂಗ್ರೆಸ್ ನಾಯಕನ ಮಾತುಗಳು ಭಾರೀ ವಿವಾದ ಸೃಷ್ಟಿಸಿವೆ.