'ಆರ್ಥಿಕ ಪ್ರಗತಿ ಸಾಧಿಸಲು ವಿಶ್ವ ಮಾನವೀಯತೆ ಮರೆಯಿತು, ಪರಿಣಾಮ ಕೊರೋನಾ ಹರಡಿತು'!
ಕೊರೋನಾ ಮಹಾಮಾರಿ ವಿರುದ್ಧ ಹೋರಾಟದಲ್ಲಿ ಭಾರತದ ಮಹತ್ವದ ಪಾತ್ರ| ವಿಶ್ವ ಮಾನವೀಯತೆ ಎಂಬುವುದನ್ನು ಹಿಂದಕ್ಕಿಟ್ಟಿತು. ಇದರ ಪರಿಣಾಮವಾಗಿ ಕೊರೋನಾದಂತಹ ಮಹಾಮಾರಿ ಇಂದು ಬೆಂಬಿಡದೆ ಕಾಡುತ್ತಿದೆ| ಮುಂದಿನ ಸವಾಲುಗಳನ್ನು ಸೂಕ್ತವಾಗಿ ಎದುರಿಸುವ ವ್ಯವಸ್ಥೆಯನ್ನು ರೂಪಿಸಬೇಕೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗ್ರಹ
ನವದೆಹಲಿ(ಏ.14): ಆರ್ಥಿಕ ಪ್ರಗತಿ ಸಾಧಿಸುವ ಗುರಿ ಇಟ್ಟುಕೊಂಡು ಓಟ ಆರಂಭಿಸಿದ ವಿಶ್ವ ಮಾನವೀಯತೆ ಎಂಬುವುದನ್ನು ಹಿಂದಕ್ಕಿಟ್ಟಿತು. ಇದರ ಪರಿಣಾಮವಾಗಿ ಕೊರೋನಾದಂತಹ ಮಹಾಮಾರಿ ಇಂದು ಬೆಂಬಿಡದೆ ಕಾಡುತ್ತಿದೆ. ಹೀಗಿರುವಾಗ ನಾವೆಲ್ಲರೂ ಮುಂದಿನ ಸವಾಲುಗಳನ್ನು ಸೂಕ್ತವಾಗಿ ಎದುರಿಸುವ ವ್ಯವಸ್ಥೆಯನ್ನು ರೂಪಿಸಬೇಕೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗ್ರಹಿಸಿದ್ದಾರೆ.
ಮಂಗಳವಾರದಂದು ರಾಯ್ಸೀನಾ ಸಂವಾದದ 6 ನೇ ಆವೃತ್ತಿಯನ್ನು ಉದ್ಘಾಟಿಸಲಾಗಿದ್ದು, ಈ ಸಂವಾದ ಏಪ್ರಿಲ್ 13 ರಿಂದ 16ರವರೆಗೆ ನಡೆಯಲಿದೆ. ಪ್ರತಿ ವರ್ಷ ನಡೆಯುವ ಈ ಸಂವಾದ ಕಾರ್ಯಕ್ರಮದಲ್ಲಿ ಜಿಯೋಪಾಲಿಟಿಕ್ಸ್ ಮತ್ತು ಜಿಯೋಸ್ಟಾಟಿಸ್ಟಿಕ್ಸ್ ಕುರಿತಾಗಿ ವಿಭಿನ್ನ ರಾಷ್ಟ್ರಗಳು ಸಲಹೆ ಸೂಚನೆ ನೀಡುತ್ತವೆ. ಆದರೆ ಈ ಬಾರಿ ಕೊರೋನಾ ಮಹಾಮಾರಿ ಕುರಿತಾಗಿ ವಿಶೇಷ ಚರ್ಚೆ ನಡೆದಿದೆ.
ಮೋದಿ ಹೇಳಿದ್ದೇನು?
ಈ ವೇಳೆ ಮಾತನಾಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಕೊರೋನಾ ಎಂಬ ಮಹಾಮಾರಿಯನ್ನು ಮಣಿಸಲು ಮಾನವ ಜನಾಂಗ ಒಗ್ಗೂಡಬೇಕೆಂದು ತಿಳಿಸಿದ್ದಾರೆ. ಇಂತಹ ಮಹಾಮಾರಿ ಒಂದು ಶತಮಾನದ ಮೊದಲು ಬಂದಿತ್ತು. ಭಾರತ 130 ಕೋಟಿ ಜನರನ್ನು ಕೊರೋನಾದಿಂದ ರಕ್ಷಿಸುವುದರೊಂದಿಗರೆ ಈ ಮಾಹಮಾರಿಯಿಂದ ನಲುಗುತ್ತಿದ್ದ ಇತರ ರಾಷ್ಟ್ರಗಳಿಗೂ ಸಹಾಯ ಮಾಡಿದೆ ಎಂದಿದ್ದಾರೆ.
ವಿದೇಶಾಂಗ ಸಚಿವರು ಹೇಳಿದ್ದೇನು?
ವಿದೇಶಾಂಗ ಸಚಿವ ಜಯ್ಶಂಕರ್ ಈ ಸಂದರ್ಭದಲ್ಲಿ ಮಾತನಾಡುತ್ತಾ ಅಂತಾರಾಷ್ಟ್ರೀಯ ಸಹಯೋಗದೊಂದಿಗೇ ಭಾರತ ಇಡೀ ವಿಶ್ವಕ್ಕೆ ಲಸಿಕೆ ಪೂರೈಸಲು ಸಾಧ್ಯವಾಯಿತು. ಮಹಾರಾಷ್ಟ್ರ ಒಡಿಶಾ, ಝಾರ್ಖಂಡ್, ಛತ್ತೀಸ್ಗಢ ಹಾಗೂ ಪಂಜಾಬ್ನಂತಹ ರಾಜ್ಯಗಳು ಲಸಿಕೆ ಕೊರತೆಯನ್ನು ಎದುರಿಸುತ್ತಿವೆ. ಜೊತೆಗೆ ಲಸಿಕೆ ಪಡೆಯಲು ಇರುವ ವಯೋಮಿತಿಯನ್ನು ತೆಗೆದು ಹಾಕಲೂ ಸೂಚಿಸಿದೆ ಎಂದಿದ್ದಾರೆ.