ಕೊರೋನಾ 2ನೇ ಅಲೆ ಮೀತಿ ಮೀರಿರುವ ಕಾರಣ ಹಲವು ರಾಜ್ಯಗಳಲ್ಲಿ ಅಗತ್ಯ ಹಾಗೂ ತುರ್ತು ಸೇವೆ ಹೊರತು ಪಡಿಸಿ ಉಳಿದೆಲ್ಲಾ ಸೇವೆಗಳು ಬಂದ್ ಆಗಿದೆ. ಹೀಗಾಗಿ ಕೇಂದ್ರ ಸರ್ಕಾರ ಒಬ್ಬ ವ್ಯಕ್ತಿಗಳೆ ತಿಂಗಳಿಗೆ 5 ಕೆಜಿ ಅಕ್ಕಿ, ಆಹಾರ ಧಾನ್ಯಗಳನ್ನು 2 ತಿಂಗಳವರೆಗೆ ಉಚಿತವಾಗಿ ನೀಡುವುದಾಗಿ ಕೇಂದ್ರ ಘೋಷಿಸಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ನವದೆಹಲಿ(ಏ.23): ಕೊರೋನಾ ವೈರಸ್ ಹೊಡೆತಕ್ಕೆ ನಲುಗಿರುವ ಭಾರತ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದೆ. ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಕೊರೋನಾ ಅತೀಯಾಗಿರುವ ರಾಜ್ಯಗಳಲ್ಲಿ ಸೆಕ್ಷನ್ 114 , ಸೆಮಿ ಲಾಕ್‌ಡೌನ್ ಸೇರಿದಂತೆ ಹಲವು ನಿರ್ಬಂಧಗಳನ್ನು ಹೇರಲಾಗಿದೆ. ಇದೀಗ ಮತ್ತೆ ಆರ್ಥಿಕ ಸಂಕಷ್ಟ ಎದುರಾಗಿದೆ. ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಇದೀಗ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿ ಬಡವರಿಗೆ 2 ತಿಂಗಳು ಉಚಿತ ಅಕ್ಕಿ, ಆಹಾರ ಧಾನ್ಯ ನೀಡುವುದಾಗಿ ಘೋಷಿಸಿದೆ.

Add Asianetnews Kannada as a Preferred SourcegooglePreferred

ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಸಭೆ; ಆಕ್ಸಿಜನ್, ಲಸಿಕೆ ಕೊರತೆ ಸೇರಿ ಸಮಸ್ಯೆಗೆ ಮೋದಿ ಸೂತ್ರ

ಮೇ ಹಾಗೂ ಜೂನ್ ತಿಂಗಳಲ್ಲಿ ಒಬ್ಬ ವ್ಯಕ್ತಿಗೆ 5 ಕೆಜಿ ಅಕ್ಕಿ ಹಾಗೂ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಈ ಮೂಲಕ ಸುಮಾರು 80 ಕೋಟಿ ಜನರು ಇದರ ಲಾಭ ಪಡೆದುಕೊಳ್ಳಲಿದ್ದಾರೆ. ಕಳೆದ ವರ್ಷ ಲಾಕ್‌ಡೌನ್ ವೇಳೆ ಪ್ರಧಾನಿ ಮೋದಿ ಗರೀಬ್ ಕಲ್ಯಾಣ್ ಯೋಜನೆ ಅಡಿ ಉಚಿತ ಆಹಾರ ಧಾನ್ಯ ನೀಡಲಾಗಿತ್ತು.

80 ಕೋಟಿ ಫಲಾನುಭವಿಗಳಗೆ 2 ತಿಂಗಳ ಉಚಿತ ಆಹಾರಕ್ಕಾಗಿ ಕೇಂದ್ರ ಸರ್ಕಾರ 26,000 ಕೋಟಿ ರೂಪಾಯಿ ಮೀಸಲಿಟ್ಟಿದೆ. ಕೊರೋನಾ ವೈರಸ್ 2ನೇ ಅಲೆ ದೇಶದಲ್ಲಿ ಸಂಕಷ್ಟದ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಈ ಕಠಿಣ ಪರಿಸ್ಥಿತಿಯಲ್ಲಿ ದೇಶದ ಬಡವರಿಗೆ ಪೌಷ್ಟಿಕಾಂಶ ಅತೀ ಅಗತ್ಯವಾಗಿದೆ ಎಂದು ಮೋದಿ ಹೇಳಿದ್ದಾರೆ.

ಕಳೆದ ವರ್ಷ ಕೊರೋನಾ ವಕ್ಕರಿಸಿದ ಬೆನ್ನಲ್ಲೇ ಭಾರತದಲ್ಲಿ ಲಾಕ್‌ಡೌನ್ ಘೋಷಿಸಲಾಗಿತ್ತು. ಈ ವೇಳೆ ಬಡವರಿಗೆ ಗರೀಬ್ ಕಲ್ಯಾಣ ಯೋಜನೆ ಅಡಿಯಲ್ಲಿ ಉಚಿತ ಆಹಾರ ಧಾನ್ಯ ನೀಡಲಾಗಿತ್ತು. 2020ರ ನವೆಂಬರ್ ತಿಂಗಳ ವರೆಗೆ ಈ ಯೋಜನೆಯನ್ನು ಕೇಂದ್ರ ಸರ್ಕಾರ ವಿಸ್ತರಿಸಿತ್ತು. ಇದೀಗ ಮತ್ತೆ ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗಿದೆ. ಒಂದೇ ದಿನ 3.32 ಲಕ್ಷ ಕೊರೋನಾ ಪ್ರಕರಣ ದಾಖಲಾಗಿದೆ. ಇದರ ಬೆನ್ನಲ್ಲೆ ಹೆಚ್ಚಿನ ರಾಜ್ಯಗಳಲ್ಲಿ ಕಟ್ಟು ನಿಟ್ಟಿನ ಕ್ರಮಗಳು ಜಾರಿಯಾಗಿದೆ. ಇತ್ತ ಬಡವರ ಪೌಷ್ಟಿಕ ಊಟಕ್ಕೆ ಯಾವುದೇ ಸಮಸ್ಯೆ ಆಗಬಾರದು ಎಂದು ಕೇಂದ್ರ ಸರ್ಕಾರ ಇದೀಗ ಮತ್ತೆ ಗರೀಬ್ ಕಲ್ಯಾಣ ಯೋಜನೆ ಅಡಿ ಉಚಿತ ಅಕ್ಕಿ ಹಾಗೂ ಆಹಾರ ಧಾನ್ಯ 2 ತಿಂಗಳು ನೀಡಲಿದೆ.

ಭಾರತದಲ್ಲಿ ಕೊರೋನಾ ಪ್ರಕರಣ ಸಂಖ್ಯೆ ಇದೀಗ 1,62,63,695ಕ್ಕೆ ತಲುಪಿದೆ. ಇದರಲ್ಲಿ ಸಕ್ರೀಯ ಪ್ರಕರಣಗಳ ಸಂಖ್ಯೆ 24,28,616. ಸಾವಿನ ಸಂಖ್ಯೆ 1,86,920 ತಲುಪಿದ್ದು, ಒಂದೇ ದಿನ 2,263 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.