ಸಿಎಂ ಕೇಜ್ರಿವಾಲ್ ಬಂಧನ ವಿರೋಧಿಸಿ ಇಂಡಿಯಾ ಮೈತ್ರಿ ಒಕ್ಕೂಟದಿಂದ ಪ್ರತಿಭಟನೆಗೆ ಕರೆ!
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಂಧನ ವಿರುದ್ಧ ಕಾಂಗ್ರೆಸ್ ಸೇರಿದಂತೆ ಇಂಡಿಯಾ ಒಕ್ಕೂಟ ಪಕ್ಷಗಳು ಮಾರ್ಚ್ 31ರಂದು ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಮೋದಿ ಸರ್ಕಾರ ಹಾಗೂ ಇಡಿ ವಿರುದ್ಧ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ನವದೆಹಲಿ(ಮಾ.24) ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಇದೀಗ ಇಂಡಿಯಾ ಮೈತ್ರಿ ಒಕ್ಕೂಟ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಗೆ ಸಜ್ಜಾಗಿದೆ. ಅಬಕಾರಿ ಹಗರಣಧಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ ವಿರೋಧಿಸಿ ಇಂಡಿಯಾ ಮೈತ್ರಿ ಒಕ್ಕೂಟ ಪಕ್ಷಗಳು ಪ್ರತಿಭಟನೆಗೆ ಕರೆ ನೀಡಿದೆ. ಮಾರ್ಚ್ 31ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ನಡೆಸಲು ಮೈತ್ರಿ ಒಕ್ಕೂಟಗಳು ಸಜ್ಜಾಗಿದೆ. ಈ ಕುರಿತು ದೆಹಲಿಯ ಸಚಿವ, ಆಮ್ ಆದ್ಮಿ ಪಾರ್ಟಿ ನಾಯಕ ಗೋಪಾಲ್ ರೈ ಹೇಳಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಗೋಪಾಲ್ ರೈ ಪ್ರತಿಭಟನೆ ಮಾಹಿತಿ ನೀಡಿದ್ದಾರೆ. ಅರವಿಂದ್ ಕೇಜ್ರಿವಾಲ್ ಬಂಧನದಿಂದ ದೇಶಾದ್ಯಂತ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ. ಸರ್ವಾಧಿಕಾರಿ ಧೋರಣೆ ವಿರುದ್ಧ ಜನರು ಬೀದಿಗಿಳಿದಿದ್ದಾರೆ. ಈ ದೇಶದ ಸಂವಿಧಾನದ ಬಗ್ಗೆ ಗೌರವವ ಇರುವ ಜನ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದಿದ್ದಾರೆ. ವಿಪಕ್ಷಗಳನ್ನು ಮುಗಿಸಲು ಯತ್ನಿಸುತ್ತಿರುವ ಬಿಜೆಪಿ ವಿರುದ್ಧ ಹಲವು ಧ್ವನಿ ಎತ್ತುತ್ತಿದ್ದಾರೆ ಎಂದು ಗೋಪಾಲ್ ರೈ ಹೇಳಿದ್ದಾರೆ. ಇದೀಗ ಇಂಡಿಯಾ ಮೈತ್ರಿ ಪಕ್ಷಗಳು ಮಾರ್ಚ್ 31ರಂದು ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಸಜ್ಜಾಗಿದೆ ಎಂದಿದ್ದಾರೆ.
ಕೇಜ್ರಿವಾಲ್ ಬಂಧನ ಬಳಿಕ ಸಚಿವ ಆಪ್ ಸಚಿವ ಸೌರಬ್ ಭಾರದ್ವಾಜ್, ಅತೀಶ್ ಪೊಲೀಸ್ ವಶಕ್ಕೆ!
ಪ್ರಧಾನಿ ಮೋದಿ ಸರ್ಕಾರ ಕೇಂದ್ರ ತನಿಖಾ ಸಂಸ್ಥೆಗಳನ್ನು ತನ್ನ ದಾಳಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದೆ. ಮತ್ತೊಂದೆಡೆಯಿಂದ ವಿಪಕ್ಷಗಳ ಶಾಸಕರನ್ನು ಖರೀದಿಸಲು ಮುಂದಾಗುತ್ತಿದೆ. ಹಣದ ಆಮಿಷಕ್ಕೆ ಬಗ್ಗದಾಗ ಇಡಿ ಸೇರಿದಂತೆ ಹಲವು ತನಿಖಾ ಸಂಸ್ಥೆಗಳ ಮೂಲಕ ಬೆದರಿಕೆ ನೀಡಲಾಗುತ್ತಿದೆ. ನಕಲಿ ಕೇಸ್ ದಾಖಲಿಸಲಾಗುತ್ತಿದೆ. ಪ್ರಜಾಪ್ರಭುತ್ವವನ್ನೇ ಮುಗಿಸಲು ಹೊರಟಿರುವ ಮೋದಿ ಸರ್ಕಾರದ ವಿರುದ್ದ ಈ ಪ್ರತಿಭಟನೆ ಎಂದು ಗೋಪಾಲ್ ರೈ ಹೇಳಿದ್ದಾರೆ.
ರಾಮಲೀಲಾ ಮೈದಾನ ಐತಿಹಾಸಿಕ ಸ್ಥಳ. ಹಲವು ಆಂದೋಲನಗಳು, ಪ್ರತಿಭಟನೆಗಳು ಇಲ್ಲಿಂದ ಆರಂಭಗೊಂಡ ಭಾರತದ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದೆ. ಇದೀಗ ಈ ಪ್ರತಿಭಟನೆ ಕೂಡ ಹೊಸ ದಾಖಲೆ ಬರೆಯಲಿದೆ ಎಂದು ದೆಹಲಿ ಸಚಿವ ಸೌರಬ್ ಭಾರದ್ವಾಜ್ ಹೇಳಿದ್ದಾರೆ.
ಇಡಿ ಕಸ್ಟಡಿಯಿಂದಲೇ ಮೊದಲ ಸರ್ಕಾರಿ ಆದೇಶ ಹೊರಡಿಸಿದ ಅರವಿಂದ್ ಕೇಜ್ರಿವಾಲ್!
ಆಮ್ ಆದ್ಮಿ ಪಾರ್ಟಿ ಈಗಾಗಲೇ ದೇಶಾದ್ಯಂತ ಪ್ರತಿಭಟನೆ ನಡೆಸಿದೆ. ದಕ್ಷ ಹಾಗೂ ಭ್ರಷ್ಟಾಚಾರ ರಹಿತ ಆಮ್ ಆದ್ಮಿ ಪಕ್ಷ ಮತ್ತು ಕೇಜ್ರಿವಾಲರ ವರ್ಚಸ್ಸಿನಿಂದ ಭಯಭೀತಗೊಂಡಿರುವ ಮೋದಿ ಸರ್ಕಾರ ಅಧಿಕಾರ ದುರುಪಯೋಗ ಮಾಡುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿತ್ತು.