Asianet Suvarna News Asianet Suvarna News

Rahul Gandhi : ಹಿಂದುತ್ವವಾದಿಗಳು ಹೇಡಿಗಳು, ಸೈಬರ್ ಜಗತ್ತಿನಲ್ಲಿ ದ್ವೇಷ ಹರಡುತ್ತಿದ್ದಾರೆ!

ಹಿಂದುತ್ವವಾದಿಗಳು ಹೇಡಿಗಳು ಎಂದ ಕಾಂಗ್ರೆಸ್ ನಾಯಕ
ಸೈಬರ್ ಜಗತ್ತಿನಲ್ಲಿ ದ್ವೇಷ ತುಂಬುವ ಕೆಲಸ ಮಾಡುತ್ತಿದ್ದಾರೆ
ದೇಶವನ್ನು ಇವರಿಂದ ರಕ್ಷಿಸಬೇಕಾಗಿದೆ ಎಂದ ರಾಹುಲ್ ಗಾಂಧಿ

Hindutvavadis have been spreading hatred in the cyber world because cowards only attack while hiding says Congress leader Rahul Gandhi san
Author
Bengaluru, First Published Jan 21, 2022, 10:50 AM IST

ನವದೆಹಲಿ (ಜ. 21) : ವಿವಾದಿತ ಹೇಳಿಕೆಗಳಿಂದ ಸುದ್ದಿಯಾಗುವ ಕಾಂಗ್ರೆಸ್ ನಾಯಕ (Congress Leader) ರಾಹುಲ್ ಗಾಂಧಿ (Rahul Gandhi) ಮತ್ತೊಮ್ಮೆ ಹಿಂದುತ್ವವಾದಿಗಳ ವಿರುದ್ಧ ತಿರುಗಿಬಿದ್ದಿದ್ದಾರೆ. ಹಿಂದುತ್ವವಾದಿಗಳು ಹೇಡಿಗಳು (Hindutvavadis cowards) ಸೈಬರ್ ಜಗತ್ತಿನಲ್ಲಿ ದ್ವೇಷವನ್ನು ಹರಡುವ ಕೆಲಸ ಮಾಡುತ್ತಿದ್ದಾರೆ ಎಂದು ಟ್ವಿಟರ್ ನಲ್ಲಿ (Twitter) ಬರೆದುಕೊಂಡಿದ್ದಾರೆ. ಕಳೆದ ತಿಂಗಳು ಕೂಡ ಇಂಥದ್ದೇ ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ, ಬಿಜೆಪಿ ಪಕ್ಷವು ರಾಜಕೀಯ ಉದ್ದೇಶಕ್ಕಾಗಿ ಹಿಂದುತ್ವವನ್ನು ಬಳಕೆ ಮಾಡಿಕೊಳ್ಳುತ್ತಿದೆ. ಇದು ಹಿಂದುಗಳ ದೇಶ, ಹಿಂದುತ್ವವಾದಿಗಳದ್ದಲ್ಲ ಎಂದು ಹೇಳಿದ್ದರು.

ಸಾಮಾಜಿಕ ಮಾಧ್ಯಮಗಳಲ್ಲಿ ತಾನು ಹಿಂದು ವಿರೋಧ ಎನ್ನುವ ಟೀಕೆಗಳು ವ್ಯಕ್ತವಾಗುತ್ತಿರುವ ಬಗ್ಗೆ "ನೋ ಫಿಯರ್" (NoFear) ಎನ್ನುವ ಹ್ಯಾಶ್ ಟ್ಯಾಗ್ ನಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಹಿಂದುತ್ವವನನು ಬೋಧನೆ ಮಾಡುತ್ತೇವೆ ಎಂದು ಹೇಳುವ ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳ ವೇದಿಕೆಯನ್ನು ದ್ವೇಷವನ್ನು ಹರಡುತ್ತಿದ್ದಾರೆ ಎಂದು ಟೀಕೆ ಮಾಡಿದರು. ಫೇಸ್ ಬುಕ್, ಟ್ವಿಟರ್ ಹಾಗೂ ಇನ್ಸ್ ಟಾಗ್ರಾಮ್ ನಲ್ಲಿ ಇಂಥ ದ್ವೇಷಗಳನ್ನು ಹರಡುತ್ತಿರುವ ಹಿಂದುತ್ವವಾದಿ ವ್ಯಕ್ತಿಗಳನ್ನು ಹೇಡಿಗಳು ಎಂದು ಕರೆದಿರುವ ರಾಹುಲ್ ಗಾಂಧಿ, ಬಹಿರಂಗವಾಗಿ ಬರಲು ಇವರಿಗೆಲ್ಲ ಸಾಧ್ಯವಾಗುವುದಿಲ್ಲ, ಸೈಬರ್ ಜಗತ್ತಿನಲ್ಲಿ ನಿರ್ಮಾಣವಾಗುತ್ತಿರುವ ದ್ವೇಷದ ವಿರುದ್ಧ ತನ್ನ ಬೆಂಬಲಿಗರು ಹೋರಾಟ ನಡೆಸಬೇಕು ಎಂದು ಆಗ್ರಹಿಸಿದರು.

"ಹಿಂದುತ್ವವಾದಿಗಳು ಸೈಬರ್ ಜಗತ್ತಿನಲ್ಲಿ ದ್ವೇಷವನ್ನು ಹರಡುತ್ತಿದ್ದಾರೆ, ಏಕೆಂದರೆ ಹೇಡಿಗಳು ಮಾತ್ರವೇ ಅಡಗಿಕೊಂಡು ದಾಳಿ ಮಾಡುತ್ತಾರೆ. ಇವರಲ್ಲಿ ಧೈರ್ಯವಾಗಿ ಸವಾಲನ್ನು ಎದುರಿಸುವ ಮನೋಭಾವವಿದ್ದರೆ ಮುಂದೆ ನಿಂತು ಮಾತನಾಡುತ್ತಿದ್ದರು. ಸೈಬರ್ ಜಗತ್ತಿನಲ್ಲಿ ಬರುತ್ತಿರುವ ಈ ದ್ವೇಷಗಳನ್ನು ನಿಭಾಯಿಸಲು ನಾವು ಮತ್ತಷ್ಟು ಗಟ್ಟಿಯಾಗಬೇಕು. ಆ ಮೂಲಕ ದೇಶವನ್ನು ಉಳಿಸಬೇಕು. ನೋ ಫಿಯರ್' ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಬಿಜೆಪಿಯು 'ಹಿಂದುತ್ವ'ವನ್ನು ಬೋಧಿಸುತ್ತಿದೆ ಎಂದು ಮಾಜಿ ಕಾಂಗ್ರೆಸ್ ಮುಖ್ಯಸ್ಥರು ಆರೋಪಿಸಿದ್ದು ಮಾತ್ರವಲ್ಲದೆ, ಹಿಂದೂ ಮತ್ತು 'ಹಿಂದುತ್ವ-ವಾದಿ' ನಡುವೆ ವ್ಯತ್ಯಾಸವಿದೆ ಎಂದು ಹೇಳಿದ್ದಾರೆ.
 


ಕಳೆದ ವಾರ ಜೈಪುರದಲ್ಲಿ (Jaipur )ಮೂರು ದಿನಗಳ ಕಾಂಗ್ರೆಸ್ ತರಬೇತಿ ಶಿಬಿರದ ಸಮಾರೋಪವನ್ನು ಉದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯವರ (PM Narendra Modi )ತಪ್ಪು ನಿರ್ಧಾರಗಳ ಮುಂದೆ ತಲೆಬಾಗುವ ಜನರು ಹಿಂದುತ್ವ ಸಿದ್ಧಾಂತವನ್ನು ಅನುಸರಿಸುತ್ತಾರೆ. ಸವಾಲುಗಳನ್ನು ಎದುರಿಸುವವರು ಹಿಂದೂಗಳು ಮತ್ತು ಸಮಸ್ಯೆಗಳಿಂದ ಹೆದರಿ ಓಡಿಹೋಗುವವರು ಹಿಂದುತ್ವವನ್ನು ಅನುಸರಿಸುವವರು ಎಂದು ಟೀಕೆ ಮಾಡಿದ್ದರು. ಹಿಂದುತ್ವದ ಸಿದ್ಧಾಂತವನ್ನು ನಂಬುವವರು ಯಾರ ಮುಂದೆ ಬೇಕಾದರೂ ತಲೆಬಾಗುತ್ತಾರೆ - ಅವರು ಬ್ರಿಟಿಷರ ಮುಂದೆ ತಲೆಬಾಗಿದ್ದರು, ಅವರು ಹಣದ ಮುಂದೆ ತಲೆಬಾಗುತ್ತಾರೆ ಏಕೆಂದರೆ ಅವರ ಹೃದಯದಲ್ಲಿ ಯಾವುದೇ ಸತ್ಯವಿಲ್ಲ ಎಂದಿದ್ದರು.  ಒಂದು ವೇಳೆ ಚೀನಾ ಭಾರತೀಯ ಭೂಪ್ರದೇಶವನ್ನು ಆಕ್ರಮಿಸಿಕೊಂಡಿದ್ದರೆ ಕಾಂಗ್ರೆಸ್‌ನ ಪ್ರಧಾನಿಯೊಬ್ಬರು ರಾಜೀನಾಮೆ ನೀಡುತ್ತಿದ್ದರು ಎಂದ ರಾಹುಲ್ ಗಾಂಧಿ, ಆರ್‌ಎಸ್‌ಎಸ್ ಜನರು ಮೋದಿ ಆಡಳಿತದಲ್ಲಿ ಚೀನಾದಿಂದ ಭಾರತದ ಗಡಿ ಉಲ್ಲಂಘನೆಯನ್ನು ಮರೆಮಾಚಲು ತೊಡಗಿದ್ದಾರೆ ಎಂದು ಟೀಕಿಸಿದರು. 

ಆರ್‌ಎಸ್‌ಎಸ್‌ನೊಂದಿಗೆ ಸಂಬಂಧ ಹೊಂದಿರುವವರು ದೇಶದಲ್ಲಿ ದ್ವೇಷ ಮತ್ತು ಭಯವನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಈ ಪ್ರಯತ್ನದ ವಿರುದ್ಧ ಒಂದು ಇಂಚು ಹಿಂದೆ ಸರಿಯುವುದಿಲ್ಲ ಎಂದರು. "ರಾಮಾಯಣದಲ್ಲಿ ಇರುವ ರೀತಿಯಲ್ಲಿ ಇದು ನಮ್ಮ ಲಕ್ಷ್ಮಣ ರೇಖಾ (ಕಟ್ಟುನಿಟ್ಟಾದ ಗಡಿ) " ಎಂದು ಅವರು ಹೇಳಿದರು. ಆದರೆ, ಬಿಜೆಪಿ ಪಕ್ಷಕ್ಕೆ ಅಧಿಕಾರ ಹಾಗೂ ಅಧಿಕಾರದ ಹಪಾಹಪಿ ಮಾತ್ರವೇ ಲಕ್ಷ್ಮಣ ರೇಖೆಯಾಗಿದೆ. ಇದಕ್ಕಾಗಿ ಯಾವಾಗಲೂ ಅವರು ತಮ್ಮ ಸಿದ್ಧಾಂತದ ಲಕ್ಷ್ಮಣ ರೇಖೆಯನ್ನು ಬದಲಾವಣೆ ಮಾಡುತ್ತಲೇ ಇರುತ್ತದೆ. ಆದರೆ, ಕಾಂಗ್ರೆಸ್ ಗೆ ಸತ್ಯವೇ ಲಕ್ಷ್ಮಣ ರೇಖೆ. ಎಲ್ಲಿ ಸತ್ಯವಿದೆಯೋ ಅಲ್ಲಿ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಪಕ್ಷದವರು ನಿಲ್ಲುತ್ತಾರೆ' ಎಂದು ಹೇಳಿದ್ದರು.

 

Follow Us:
Download App:
  • android
  • ios