ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಯ ವೇಳೆ ಕಾಂಗ್ರೆಸ್‌ ಘೋಷಣೆ ಮಾಡಿದ್ದ ಗ್ಯಾರಂಟಿ ಈಗ ಸರ್ಕಾರವನ್ನು ಸಂಕಷ್ಟಕ್ಕೆ ದೂಡಿದೆ. ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿಯೇ ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಕುಸಿದಿದ್ದು, ಜೂನ್‌ ತಿಂಗಳಲ್ಲಿ ಅಂದಾಜು 15 ಸಾವಿರ ಸರ್ಕಾರಿ ನೌಕರರಿಗೆ ವೇತನ ಪಾವತಿಯಾಗಿಲ್ಲ.

ನವದೆಹಲಿ (ಜೂ.14): ಹಿಮಾಚಲ ಪ್ರದೇಶದಲ್ಲಿ ಸುಖವಿಂದರ್‌ ಸಿಂಗ್‌ ಸಕ್ಕು ನೇತೃತ್ವದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಇನ್ನು ಕೆಲವೇ ತಿಂಗಳುಗಳಷ್ಟೇ ಆಗಿದೆ. ಅಷ್ಟರಲ್ಲಾಗಲೇ ಕಾಂಗ್ರೆಸ್‌ ಸರ್ಕಾರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಮೂಲಗಳ ಪ್ರಕಾರ ಜೂನ್‌ ತಿಂಗಳಲ್ಲಿ 14 ದಿನಗಳಾದರೂ 15 ಸಾವಿರಕ್ಕಿಂತ ಅಧಿಕ ಸರ್ಕಾರಿ ನೌಕರರು ತಮ್ಮ ಮೇ ತಿಂಗಳ ಮಾಸಿಕ ವೇತನಕ್ಕಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ. ಇದಕ್ಕೂ ಮುನ್ನ ಪ್ರತಿ ತಿಂಗಳ ಮೊದಲ ವಾರದಲ್ಲಿಯೇ ಅವರ ಖಾತೆಗೆ ವೇತನ ಜಮೆ ಆಗುತ್ತಿತ್ತು. ಈ ಕುರಿತಂತೆ ದೈನಿಕ್‌ ಭಾಸ್ಕರ್‌ ವಿಸ್ತ್ರತ ವರದಿ ಮಾಡಿದ್ದು, ರಾಜ್ಯ ಸಾರಿಗೆ ಇಲಾಖೆ, ವೈದ್ಯಕೀಯ ಕಾಲೇಜುಗಳು, ಜಲ ಸಂಪನ್ಮೂಲ, ಅರಣ್ಯ ಇಲಾಖೆಯ ಸಾವಿರಾರು ಸರ್ಕಾರಿ ನೌಕರರಿಗೆ ಜೂನ್‌ 13ರವರೆಗೂ ವೇತನ ಪಾವತಿಯಾಗಿಲ್ಲ. ಪ್ರತಿ ತಿಂಗಳ ಮೇ 1 ರಂದು ಬ್ಯಾಂಕ್‌ ಖಾತೆಗೆ ಮಾಸಿಕ ವೇತನ ಜಮೆ ಆಗುತ್ತಿತ್ತು. ಆದರೆ, ಈ ಬಾರಿ ತಿಂಗಳು ಆರಂಭವಾಗಿ 13 ದಿನಗಳಾದರೂ ಸ್ಯಾಲರಿ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಚುನಾವಣೆಯ ವೇಳೆ ಕಾಂಗ್ರೆಸ್‌ ಪಕ್ಷ ಭರಪೂರವಾಗಿ ಗ್ಯಾರಂಟಿ ಘೋಷಣೆಗಳನ್ನು ಪ್ರಕಟ ಮಾಡಿತ್ತು. ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇದನ್ನು ಜಾರಿ ಮಾಡುವುದರತ್ತ ಗಮನ ನೀಡಿತ್ತು.

ಉಚಿತ ಘೋಷಣೆಗಳನ್ನು ಜಾರಿ ಮಾಡಿದ್ದರಿಂದ ರಾಜ್ಯ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಇದರಿಂದ ಸರ್ಕಾರಿ ನೌಕರರ ವೇತನ ಕೂಡ ವಿಳಂಬವಾಗಿದೆ. ಇದು ನೌಕರರಲ್ಲಿ ಆತಂಕ ಮೂಡಿಸಿದೆ. ಈ ವರ್ಷ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರ ಹಿಡಿದಿದೆ. ಚುನಾವಣೆಯ ವೇಳೆ ಉಚಿತ ಭಾಗ್ಯಗಳು ಹಾಗೂ ಗ್ಯಾರಂಟಿಗಳನ್ನು ಸುಖ್ವಿಂದರ್‌ ಸಿಂಗ್‌ ಸಕ್ಕು ನೇತೃತ್ವದಲ್ಲಿ ಕಾಂಗ್ರೆಸ್‌ ಘೋಷಣೆ ಮಾಡಿತ್ತು.

ರಾಜ್ಯ ಸರ್ಕಾರದ ಖಜಾನೆಯು 1,000 ಕೋಟಿ ರೂಪಾಯಿಗಳ ಓವರ್‌ಡ್ರಾಫ್ಟ್ ಅನ್ನು ಎದುರಿಸುತ್ತಿದೆ ಮತ್ತು 800 ಕೋಟಿ ರೂಪಾಯಿ ಸಾಲಕ್ಕೆ ಅರ್ಜಿ ಸಲ್ಲಿಸಿದೆ ಎಂದು ವರದಿಗಳು ಹೇಳಿವೆ. ಈ ಸಾಲ ಪಡೆದ ನಂತರವೂ ಸರ್ಕಾರವೂ ಇನ್ನೂ 200 ಕೋಟಿ ರೂಪಾಯಿ ಓವರ್‌ಡ್ರಾಫ್ಟ್‌ ಹೊಂದಿದೆ. ಸಾವಿರಾರು ಸರ್ಕಾರಿ ನೌಕರರಿಗೆ ವೇತನ ಪಾವತಿ ವಿಳಂಬವಾಗುತ್ತಿರುವುದಕ್ಕೆ ಆರ್ಥಿಕ ಮುಗ್ಗಟ್ಟು ಕಾರಣ. ಈ ಆರ್ಥಿಕ ಬಿಕ್ಕಟ್ಟಿನಿಂದಾಗಿ ಹಿಮಾಚಲ ರಸ್ತೆ ಸಾರಿಗೆಯ ನೌಕರರು ಹೆಚ್ಚು ಹಾನಿಗೊಳಗಾಗಿದ್ದಾರೆ. 15,000 ಉದ್ಯೋಗಿಗಳಲ್ಲಿ, ಸುಮಾರು 12 ಸಾವಿರ ಸಿಬ್ಬಂದಿ ಹಿಮಾಚಲ ಪ್ರದೇಶ ರಸ್ತೆ ಸಾರಿಗೆಗೆ ಸೇರಿದವರಾಗಿದ್ದಾರೆ ಎಂದು ವರದಿಯಾಗಿದೆ.

Add Asianetnews Kannada as a Preferred SourcegooglePreferred

ಮಂಗಳೂರು: ಮಹಿಳಾ ‘ಶಕ್ತಿ’ ಯೋಜನೆ: ಮೊದಲ ದಿನ 5454 ಮಹಿಳೆಯರ ಪ್ರಯಾಣ!

ಆರ್ಥಿಕ ಬಿಕ್ಕಟ್ಟು ಎಷ್ಟು ಪ್ರಮಾಣದಲ್ಲಿದೆ: ಅಧಿಕಾರಕ್ಕೆ ಆಯ್ಕೆಯಾದ 6 ತಿಂಗಳೊಳಗೆ ಸುಖು ಸರ್ಕಾರವು ಆರ್ಥಿಕ ಮುಗ್ಗಟ್ಟಿನಲ್ಲಿದೆ, ಇದು ರಾಜ್ಯದ ಪಾಲಿಗೆ ಒಳ್ಳೆಯ ವಿಚಾರವಲ್ಲ. ರಾಜ್ಯ ಸರ್ಕಾರವು ಈಗಾಗಲೇ 11,000 ಕೋಟಿ ರೂಪಾಯಿಗಳ ಹಿಂದಿನ ಸಾಲ ಮತ್ತು ಅದರ ಬಡ್ಡಿ ಪಾವತಿಯಲ್ಲಿ ಮುಳುಗಿದೆ. ಅದರೊಂದಿಗೆ ಕೇಂದ್ರವು ಹಿಮಾಚಲ ಪ್ರದೇಶದ ಸಾಲದ ಮಿತಿಯನ್ನು ಶೇ. 5 ರಿಂದ ಶೇ. 3.5ಕ್ಕೆ ಇಳಿದಿದೆ. ಅಂದರೆ ರಾಜ್ಯ ಸರ್ಕಾರವು ತನ್ನ ಜಿಡಿಪಿಯ 3.5% ವರೆಗೆ ಮಾತ್ರ ಸಾಲವನ್ನು ಪಡೆಯಲು ಸಾಧ್ಯವಾಗುತ್ತದೆ. ಇದರಿಂದಾಗಿ ಈ ಬಾರಿ ಹಿಮಾಚಲ ಪ್ರದೇಶ 9 ಸಾವಿರ ಕೋಟಿ ರೂಪಾಯಿ ಸಾಲವನ್ನು ಮಾತ್ರವೇ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಮಾತು ತಪ್ಪದೇ ಎಲ್ಲ 5 ಗ್ಯಾರಂಟಿ ಈಡೇ​ರಿ​ಕೆ: ಡಿ.ಕೆ.ಶಿವಕುಮಾರ್‌

ಎಚ್‌ಆರ್‌ಟಿಸಿ ಜಂಟಿ ಕ್ರಿಯಾ ಸಮನ್ವಯ ಸಮಿತಿಯ ಕಾರ್ಯದರ್ಶಿ ಖಮೇಂದ್ರ ಗುಪ್ತಾ ಮಾತನಾಡಿದ್ದು, ವೇತನ ನೀಡದ ಕಾರಣ ನೌಕರರು ಅಸಮಾಧಾನಗೊಂಡಿದ್ದಾರೆ. ಎಂಡಿಯಿಂದ ಸಂಬಳಕ್ಕೆ ಬೇಡಿಕೆ ಇಟ್ಟಿದ್ದಾರೆ. ಶೀಘ್ರವೇ ವೇತನ ನೀಡಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.