ಪಿಎಂ ಆದರೆ ಕೊಡುವ ಮೊದಲ ಸರ್ಕಾರಿ ಆದೇಶವೇನು? ಕೈ ನಾಯಕ ರಾಹುಲ್ ಕೊಟ್ಟ ಉತ್ತರವಿದು!
* ರಾಹುಲ್ ಗಾಂಧಿಗೆ ವಿದ್ಯಾರ್ಥಿಗಳ ಪ್ರಶ್ನೆ
* ನೀವು ಪ್ರಧಾನಿಯಾದರೆ ಕೊಡುವ ಮೊದಲ ಸರ್ಕಾರಿ ಆದೇಶವೇನು?
* ರಾಹುಲ್ ಕೊಟ್ಟ ಉತ್ತರ ವೈರಲ್
ನವದೆಹಲಿ(ನ.07): ಕಾಂಗ್ರೆಸ್ ನಾಯಕ ಹಾಗೂ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (Rahul gandhi) ಬಳಿ ನೀವು ಪ್ರಧಾನಿಯಾದರೆ ಮಾಡುವ ಮೊದಲ ಕೆಲಸವೇನು ಎಂದು ಪ್ರಶ್ನಿಸಲಾಗಿದ್ದು, ಅವರು ನೀಡಿರುವ ಉತ್ತರ ಸದ್ಯ ಭಾರೀ ವೈರಲ್ ಆಗಿದೆ.
ಹೌದು ಶನಿವಾರದಂದು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ (Kanyakumari) ಕೆಲ ವಿದ್ಯಾರ್ಥಿಗಳಿಗಾಗಿ ದೀಪಾವಳಿ (Diwali 2021) ಪ್ರಯುಕ್ತ ಏರ್ಪಡಿಸಲಾಗಿದ್ದ ಔತಣ ಕೂಟದಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿಗೆ ಇಂತಹುದ್ದೊಂದು ಪ್ರಶ್ನೆ ಕೇಳಲಾಗಿದೆ. ಹೀಗಿರುವಾಗ ರಾಹುಲ್ ಗಾಂಧಿ ತಾನು ಪಿಎಂ ಆದರೆ ಮಾಡುವ ಮೊಟ್ಟ ಮೊದಲ ಕೆಲಸ ಮಹಿಳಾ ಮೀಸಲಾತಿ (Women Reservations) ಜಾರಿಗೊಳಿಸುವುದು ಎಂದಿದ್ದಾರೆ. ಇನ್ನು ಈ ಔತಣ ಕೂಟದಲ್ಲಿ ಪ್ರಿಯಾಂಕಾ ಗಾಂಧಿ ಕೂಡಾ ಭಾಗಿಯಾಗಿದ್ದರೆಂಬುವುದು ಉಲ್ಲೇಖನೀಯ.
ಇನ್ನು ಈ ಸಂಬಂಧ ಟ್ವಿಟ್ಟರ್ನಲ್ಲಿ ರಾಹುಲ್ ಗಾಂಧಿ ಸುಮಾರು ಒಂದು ನಿಮಿಷದ ವೀಡಿಯೋ ಶೇರ್ ಮಾಡಿಕೊಂಡಿದ್ದು, ಇದರಲ್ಲಿ ಔತಣ ಕೂಟದಲ್ಲಿ ಭಾಗಿಯಾದ ಅತಿಥಿಗಳಲ್ಲಿ ಒಬ್ಬರು ಅವರ ಬಳಿ, "ನೀವು ಪ್ರಧಾನಿಯಾದ (Prime Minister) ಬಳಿಕ ಮೊಟ್ಟ ಮೊದಲು ಕೊಡುವ ಸರ್ಕಾರಿ ಆದೇಶ ಯಾವುದು?" ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ "ನಾನು ಮಹಿಳಾ ಮೀಸಲಾತಿ ನೀಡುತ್ತೇನೆ" ಎಂದಿದ್ದಾರೆ. ಅಲ್ಲದೇ "ನಿಮ್ಮ ಮಗುವಿಗೆ ನೀವು ಏನು ಕಲಿಸುತ್ತೀರಿ ಎಂದು ಯಾರಾದರೂ ನನ್ನನ್ನು ಕೇಳಿದರೆ; ಒಂದು ವಿಷಯ - ನಾನು ನಮ್ರತೆಯಿಂದ ಹೇಳುತ್ತೇನೆ, ಏಕೆಂದರೆ, ನಮ್ರತೆಯಿಂದ, ನೀವು ತಿಳುವಳಿಕೆಯನ್ನು ಪಡೆಯುತ್ತೀರಿ" ಎಂದು ಅವರು ಹೇಳಿದ್ದಾರೆ.
ಇನ್ನು ವಿಡಿಯೋ ಬಗ್ಗೆ ಬರೆದುಕೊಂಡಿರುವ ರಾಹುಲ್ ಗಾಂಧಿ ಸೇಂಟ್ ಜೋಸೆಫ್ಸ್ ಮೆಟ್ರಿಕ್ ಹಯರ್ ಸೆಕೆಂಡರಿ ಶಾಲೆ, ಮುಳಗುಮೂಡು, ಕನ್ಯಾಕುಮಾರಿಯ ಸ್ನೇಹಿತರೊಂದಿಗೆ ಸಂವಹನ ಮತ್ತು ಭೋಜನ. ಈ ಭೇಟಿ ದೀಪಾವಳಿಯನ್ನು ಇನ್ನಷ್ಟು ವಿಶೇಷಗೊಳಿಸಿತು. ಸಂಸ್ಕೃತಿಗಳ ಸಂಗಮ ನಮ್ಮ ದೇಶದ ದೊಡ್ಡ ಶಕ್ತಿಯಾಗಿದೆ ಮತ್ತು ನಾವು ಅದನ್ನು ಸಂರಕ್ಷಿಸಬೇಕು ಎಂದು ಬರೆದಿದ್ದಾರೆ.
ಇನ್ನು ಸಹೋದರ-ಸಹೋದರಿಯ ಈ ಜೋಡಿ ಈ ವರ್ಷದ ಆರಂಭದಲ್ಲಿ ರಾಜ್ಯದಲ್ಲಿ ಚುನಾವಣಾ ಪ್ರಚಾರದ ವೇಳೆ ಸೇಂಟ್ ಜೋಸೆಫ್ ಮೆಟ್ರಿಕ್ ಹೈಯರ್ ಸೆಕೆಂಡರಿ ಶಾಲೆಗೆ ಭೇಟಿ ನೀಡಿದ್ದರು ಎಂಬುವುದು ಉಲ್ಲೇಖನೀಯ.
ಎಲ್ಪಿಜಿ ಬೆಲೆ ಕೂಡ ಇಳಿಸಿ: ಕಾಂಗ್ರೆಸ್ ಆಗ್ರಹ
ನವದೆಹಲಿ: ಸರ್ಕಾರ ಎಲ್ಪಿಜಿ ಬೆಲೆ ಏರಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸರ್ಕಾರದ ಈ ಬೆಲೆ ಏರಿಕೆ ಲಕ್ಷಾಂತರ ಜನರು ಮತ್ತೆ ಒಲೆಗಳನ್ನು ಉಪಯೋಗಿಸುವಂತೆ ಒತ್ತಾಯಿಸುತ್ತಿದೆ ಎಂದು ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು ‘ ಸರ್ಕಾರ ಅತಿಯಾಗಿ ಬೆಲೆ ಏರಿಕೆ ಮಾಡಿರುವುದರಿಂದ ಬಹಳಷ್ಟುಜನರಿಗೆ ತೊಂದರೆಯಾಗುತ್ತಿದೆ. ಈ ಬೆಲೆ ಏರಿಕೆಯಿಂದಾಗಿ ಲಕ್ಷಾಂತರ ಜನರಿಗೆ ಸಿಲಿಂಡರ್ಗಳನ್ನು ಕೊಳ್ಳಲು ಆಗುತ್ತಿಲ್ಲ. ಇದು ಲಕ್ಷಾಂತರ ಜನರನ್ನು ಸೌದೆ ಒಲೆಗಳನ್ನು ಬಳಸಲು ಒತ್ತಾಯ ಮಾಡುತ್ತಿದೆ. ಮೋದಿ ಅವರ ಅಭಿವೃದ್ದಿ ವಾಹನ ರಿವರ್ಸ್ ಗೇರ್ನಲ್ಲಿದೆ. ಜೊತೆಗೆ ಬ್ರೇಕ್ ಸಹ ಫೇಲ್ ಆಗಿದೆ’ ಎಂದು ಹೇಳಿದ್ದಾರೆ.
ಏರಿಕೆ ಸಂಪೂರ್ಣ ಹಿಂಪಡೆಯಿರಿ:
ಕಳೆದ ಒಂದು ವರ್ಷದಿಂದ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಸರ್ಕಾರ ಏರಿಸಿರುವ ತೆರಿಗೆಯನ್ನು ಹಿಂಪಡೆಯಬೇಕು. ಮಾಚ್ರ್ 2022ರವರೆಗೆ ಉಚಿಯ ಪಡಿತರ ವಿತರಣೆಯನ್ನು ನಿಲ್ಲಿಸಬಾರದು ಎಂದು ಕಾಂಗ್ರೆಸ್ ಶನಿವಾರ ಆಗ್ರಹಿಸಿದೆ. ಕೋವಿಡ್ ಮುಂಚಿನ ಅವಧಿಯಲ್ಲಿ ಸರ್ಕಾರ ಗಳಿಸುತಿದ್ದ ಪ್ರಮಾಣದಷ್ಟೇ ಜಿಎಸ್ಟಿಯನ್ನು ಗಳಿಸಿದೆ. ಹಾಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸಿರುವ ತೆರಿಗೆಗಳನ್ನು ಹಿಂಪಡೆಯಬೇಕು ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಹೇಳಿದ್ದಾರೆ.