ಪಾಕ್‌ ಉಗ್ರ ತಾಣಗಳ ಮೇಲೆ ಮತ್ತೆ ದಾಳಿಗೆ ಸಿದ್ಧ: ರಾಜನಾಥ್‌| ಗಡಿಯಾಚೆ ಕೂಡ ಉಗ್ರವಾದ ನಿರ್ಮೂಲನೆ ಶಕ್ತಿಯಿದೆ

ನವದೆಹಲಿ(ಡಿ.31): ಅಗತ್ಯ ಬಿದ್ದರೆ ಗಡಿ ನಿಯಂತ್ರಣ ರೇಖೆಯ ಆಚೆ ಇರುವ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಲು ಭಾರತಕ್ಕೆ ಶಕ್ತಿ ಇದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಗುಡುಗಿದ್ದಾರೆ.

Add Asianetnews Kannada as a Preferred SourcegooglePreferred

ಎಎನ್‌ಐ ಸುದ್ದಿಸಂಸ್ಥೆಗೆ ಬುಧವಾರ ಸಂದರ್ಶನ ನೀಡಿದ ಅವರು, ‘ಪಾಕಿಸ್ತಾನ ಕಳೆದ ಕೆಲವು ತಿಂಗಳಲ್ಲಿ 300-400 ಬರಿ ಕದನ ವಿರಾಮ ಉಲ್ಲಂಘಿಸಿದೆ. ಇದಕ್ಕೆ ಭಾರತದ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. ಪಾಕಿಸ್ತಾನವು ಉದಯಿಸಿದಾಗಿನಿಂದ ಗಡಿಯಲ್ಲಿ ಕುಕೃತ್ಯಗಳನ್ನು ಎಸಗುತ್ತಲೇ ಇದೆ’ ಎಂದರು.

‘ಭಾರತೀಯ ಪಡೆಗಳು ಜಮ್ಮು-ಕಾಶ್ಮೀರದಲ್ಲಿ ಉಗ್ರವಾದ ನಿಗ್ರಹಕ್ಕೆ ಶ್ರಮಿಸುತ್ತಿವೆ. ಅಲ್ಲದೆ, ಅಗತ್ಯ ಬಿದ್ದರೆ ಗಡಿಯಾಚೆ ತೆರಳಿ ಕೂಡ ಅಲ್ಲಿನ ಉಗ್ರ ತಾಣಗಳ ಮೇಲೆ ದಾಳಿ ನಡೆಸುವ ತಾಕತ್ತು ಹೊಂದಿದ್ದು, ಅಲ್ಲಿನ ಉಗ್ರವಾದ ನಿರ್ಮೂಲನೆ ಮಾಡಲೂ ಸಿದ್ಧವಾಗಿವೆ. ಭಾರತಕ್ಕೆ ಅಂಥ ಶಕ್ತಿ-ಸಾಮರ್ಥ್ಯವಿದೆ’ ಎಂದು ಖಡಕ್ಕಾಗಿ ಹೇಳಿದರು.

ಉರಿ ಭಯೋತ್ಪಾದಕ ದಾಳಿ ನಂತರ 2016ರಲ್ಲಿ ಭಾರತವು ಪಾಕ್‌ ಉಗ್ರ ಶಿಬಿರಗಳ ಮೇಲೆ ದಾಳಿ ಮಾಡಿತ್ತು. ಇನ್ನೊಂದೆಡೆ 2019ರಲ್ಲಿ ಪುಲ್ವಾಮಾ ದಾಳಿಯ ನಂತರ ಬಾಲಾಕೋಟ್‌ ಉಗ್ರ ಶಿಬಿರಗಳ ಮೇಲೆ ಸರ್ಜಿಕಲ್‌ ದಾಳಿ ನಡೆಸಿತ್ತು.