ಪಾಕ್‌ ಉಗ್ರ ತಾಣಗಳ ಮೇಲೆ ಮತ್ತೆ ದಾಳಿಗೆ ಸಿದ್ಧ: ರಾಜನಾಥ್‌| ಗಡಿಯಾಚೆ ಕೂಡ ಉಗ್ರವಾದ ನಿರ್ಮೂಲನೆ ಶಕ್ತಿಯಿದೆ

ನವದೆಹಲಿ(ಡಿ.31): ಅಗತ್ಯ ಬಿದ್ದರೆ ಗಡಿ ನಿಯಂತ್ರಣ ರೇಖೆಯ ಆಚೆ ಇರುವ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಲು ಭಾರತಕ್ಕೆ ಶಕ್ತಿ ಇದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಗುಡುಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎಎನ್‌ಐ ಸುದ್ದಿಸಂಸ್ಥೆಗೆ ಬುಧವಾರ ಸಂದರ್ಶನ ನೀಡಿದ ಅವರು, ‘ಪಾಕಿಸ್ತಾನ ಕಳೆದ ಕೆಲವು ತಿಂಗಳಲ್ಲಿ 300-400 ಬರಿ ಕದನ ವಿರಾಮ ಉಲ್ಲಂಘಿಸಿದೆ. ಇದಕ್ಕೆ ಭಾರತದ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. ಪಾಕಿಸ್ತಾನವು ಉದಯಿಸಿದಾಗಿನಿಂದ ಗಡಿಯಲ್ಲಿ ಕುಕೃತ್ಯಗಳನ್ನು ಎಸಗುತ್ತಲೇ ಇದೆ’ ಎಂದರು.

‘ಭಾರತೀಯ ಪಡೆಗಳು ಜಮ್ಮು-ಕಾಶ್ಮೀರದಲ್ಲಿ ಉಗ್ರವಾದ ನಿಗ್ರಹಕ್ಕೆ ಶ್ರಮಿಸುತ್ತಿವೆ. ಅಲ್ಲದೆ, ಅಗತ್ಯ ಬಿದ್ದರೆ ಗಡಿಯಾಚೆ ತೆರಳಿ ಕೂಡ ಅಲ್ಲಿನ ಉಗ್ರ ತಾಣಗಳ ಮೇಲೆ ದಾಳಿ ನಡೆಸುವ ತಾಕತ್ತು ಹೊಂದಿದ್ದು, ಅಲ್ಲಿನ ಉಗ್ರವಾದ ನಿರ್ಮೂಲನೆ ಮಾಡಲೂ ಸಿದ್ಧವಾಗಿವೆ. ಭಾರತಕ್ಕೆ ಅಂಥ ಶಕ್ತಿ-ಸಾಮರ್ಥ್ಯವಿದೆ’ ಎಂದು ಖಡಕ್ಕಾಗಿ ಹೇಳಿದರು.

ಉರಿ ಭಯೋತ್ಪಾದಕ ದಾಳಿ ನಂತರ 2016ರಲ್ಲಿ ಭಾರತವು ಪಾಕ್‌ ಉಗ್ರ ಶಿಬಿರಗಳ ಮೇಲೆ ದಾಳಿ ಮಾಡಿತ್ತು. ಇನ್ನೊಂದೆಡೆ 2019ರಲ್ಲಿ ಪುಲ್ವಾಮಾ ದಾಳಿಯ ನಂತರ ಬಾಲಾಕೋಟ್‌ ಉಗ್ರ ಶಿಬಿರಗಳ ಮೇಲೆ ಸರ್ಜಿಕಲ್‌ ದಾಳಿ ನಡೆಸಿತ್ತು.