ಹರ್ಯಾಣದಲ್ಲಿ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಿ ಕಾಂಗ್ರೆಸ್‌ ಗೆಲ್ಲಬಹುದು ಎಂದಿದ್ದ ಸಮೀಕ್ಷೆಗಳೆಲ್ಲ ತಲೆಕೆಳಗಾಗಿ ಬಿಜೆಪಿ ಅಧಿಕಾರಕ್ಕೇರಲು ಸಜ್ಜಾಗಿರುವ ಹೊತ್ತಿನಲ್ಲೇ, ‘ಇದು ಅನಿರೀಕ್ಷಿತ ಫಲಿತಾಂಶ’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. 

ನವದೆಹಲಿ (ಅ.10): ಹರ್ಯಾಣದಲ್ಲಿ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಿ ಕಾಂಗ್ರೆಸ್‌ ಗೆಲ್ಲಬಹುದು ಎಂದಿದ್ದ ಸಮೀಕ್ಷೆಗಳೆಲ್ಲ ತಲೆಕೆಳಗಾಗಿ ಬಿಜೆಪಿ ಅಧಿಕಾರಕ್ಕೇರಲು ಸಜ್ಜಾಗಿರುವ ಹೊತ್ತಿನಲ್ಲೇ, ‘ಇದು ಅನಿರೀಕ್ಷಿತ ಫಲಿತಾಂಶ’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ ಹಾಗೂ ‘ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಕೇಳಿಬಂದ ದೂರುಗಳ (ಮತ ಎಣಿಕೆ/ಇವಿಎಂ ಕುರಿತ ದೂರು) ಬಗ್ಗೆ ಚುನಾವಣಾ ಆಯೋಗಕ್ಕೆ ತಿಳಿಸಲಿದ್ದೇವೆ’ ಎಂದಿದ್ದಾರೆ. 

ಫಲಿತಾಂಶ ಘೋಷಣೆ ಬಳಿಕ ಮೊದಲ ಬಾರಿ ಬುಧವಾರ ಪ್ರತಿಕ್ರಿಯೆ ನೀಡಿದ ‘ಕಾಂಗ್ರೆಸ್‌ ಅನ್ನು ಬೆಂಬಲಿಸಿದ ಜಮ್ಮು ಕಾಶ್ಮೀರದ ಜನರಿಗೆ ಧನ್ಯವಾದ ತಿಳಿಸುತ್ತ, ’ಇಂಡಿಯಾ ಕೂಟದ ಗೆಲುವು ಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ಸ್ವಾಭಿಮಾನದ ಗೆಲುವು’ ಎಂದರು.

ಹರ್ಯಾಣದ 20 ಕ್ಷೇತ್ರಗಳಲ್ಲಿ ಇವಿಎಂ ಹ್ಯಾಕ್‌: ಕಾಂಗ್ರೆಸ್‌ನಿಂದ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆ

‘ಆದರೆ ಹರ್ಯಾಣದ ಅನೇಕ ಕ್ಷೇತ್ರಗಳಿಂದ ನಮ್ಮ ಕಾರ್ಯಕರ್ತರು ದೂರು ನೀಡುತ್ತಿದ್ದಾರೆ. ಅವನ್ನು ನಾವು ಆಯೋಗದ ಗಮನಕ್ಕೆ ತರುತ್ತೇವೆ’ ಎಂದರು ಹಾಗೂ ‘ಸಾಮಾಜಿಕ ನ್ಯಾಯಕ್ಕೆ ಹೋರಾಟ ಮುಂದುವರಿಯಲಿದೆ’ ಎಂದು ಘೋಷಿಸಿದರು. ಮಂಗಳವಾರ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಮಾತನಾಡಿ, ‘14 ಕ್ಷೇತ್ರಗಳ ಇವಿಎಂ ಕಾರ್ಯನಿರ್ವಹಣೆಯಲ್ಲಿ ಲೋಪಗಳಾಗಿವೆ’ ಎಂದು ಮತ ಎಣಿಕೆ ಪ್ರಕ್ರಿಯೆ ಬಗ್ಗೆ ಸಂದೇಹಿಸಿದ್ದರು. ಆದರೆ ಈ ಆರೋಪವನ್ನು ಆಯೋಗ ತಳ್ಳಿಹಾಕಿತ್ತು.

13 ಕ್ಷೇತ್ರಗಳಲ್ಲಿ ಗೆಲುವಿನ ಅಂತರ ಶೇ.2ಕ್ಕಿಂತ ಕಮ್ಮಿ: ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ 13 ಕ್ಷೇತ್ರದ ಅಭ್ಯರ್ಥಿಗಳ ಗೆಲುವಿನ ಅಂತರ ಶೇ.2ಕ್ಕಿಂತ ಕಮ್ಮಿ ಇದೆ. ಈ ಪೈಕಿ ಉಂಚಾನಾ ಕಲನ್‌ ಕ್ಷೇತ್ರದಲ್ಲಿನ ಬಿಜೆಪಿ ಅಭ್ಯರ್ಥಿ ತನ್ನ ಎದುರಾಳಿ ವಿರುದ್ಧ ಕೇವಲ 32 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾ ಆಯೋಗದ ದತ್ತಾಂಶ ಹೇಳಿದೆ.

ಹಿಂದೂಗಳನ್ನು ವಿಭಜಿಸಲು ಕಾಂಗ್ರೆಸ್‌ ಸಂಚು: ಪ್ರಧಾನಿ ಮೋದಿ

13 ಅಭ್ಯರ್ಥಿಗಳ ಪೈಕಿ ಬಿಜೆಪಿ ಮತ್ತು ಕಾಂಗ್ರೆಸ್‌ನ ತಲಾ 6 ಅಭ್ಯರ್ಥಿಗಳು ಕಡಿಮೆ ಅಂತರದಿಂದ ಗೆದ್ದಿದ್ದಾರೆ. ಮಿಕ್ಕ 1 ಕ್ಷೇತ್ರದಲ್ಲಿ ಐಎನ್‌ಎಲ್‌ಡಿ ಪಕ್ಷದ ಅಭ್ಯರ್ಥಿ 610 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಲೊಹಾರು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ 792 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.