171 ನಾಯಕರು ಠೇವಣಿ ಕಳೆದುಕೊಂಡ ಖುಷಿಗೆ ಕೇಜ್ರಿವಾಲ್ ರೋಡ್ಶೋ; ವ್ಯಂಗ್ಯವಾಡಿದ BJP!
ಗುಜರಾತ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಬಹುಮತ ಪಡೆದು ಮತ್ತೆ ಅಧಿಕಾರಕ್ಕೇರಿದೆ. ಆದರೆ ಸೂರತ್ನಲ್ಲಿ ಆಮ್ ಆದ್ಮಿ ಪಕ್ಷ 27 ಸ್ಥಾನ ಪಡೆದು ಕಾಂಗ್ರೆಸ್ ಪಕ್ಷವನ್ನೇ ಹಿಂದಿಕ್ಕಿದೆ. ಈ ಗೆಲುವನ್ನು ಆಮ್ ಆದ್ಮಿ ಪಕ್ಷ ರೋಡ್ ಶೋ ಮೂಲಕ ಆಚರಿಸುತ್ತಿದೆ. ಇದಕ್ಕೆ ಬಿಜೆಪಿ ವ್ಯಂಗ್ಯವಾಡಿದೆ. ಇಲ್ಲಿದೆ ಹೆಚ್ಚಿನ ವಿವರ
ಗುಜರಾತ್(ಫೆ.26): ಗುಜರಾತ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಇದೇ ಮೊದಲ ಬಾರಿಗೆ ಗುಜರಾತ್ನಲ್ಲಿ ಖಾತೆ ತೆರಿದಿದೆ. ಅದರಲ್ಲೂ ಸೂರತ್ನಲ್ಲಿ 120 ಸ್ಥಾನಗಳ ಪೈಕಿ 27 ಸ್ಥಾನ ಗೆದ್ದು ಬೀಗಿದೆ. ಇತ್ತ ಅರವಿಂದ ಕೇಜ್ರಿವಾಲ್ ಸೂರತ್ನಲ್ಲಿ ರೋಡ್ ಶೋ ಮೂಲಕ ಸಂಭ್ರಮಾಚರಣೆ ಆಚರಿಸಿದ್ದಾರೆ. ಇದಕ್ಕೆ ಬಿಜೆಪಿ ವ್ಯಂಗ್ಯವಾಡಿದೆ.
ಮೋದಿ-ಶಾ ಕೋಟೆಯಲ್ಲಿ ಆಮ್ ಆದ್ಮಿ ಕಮಾಲ್, ರಾಜ್ಯದಲ್ಲಿ ವಿಜಯೋತ್ಸವ
ಸೂರತ್ನಲ್ಲಿ 27 ಸ್ಥಾನ ಗೆದ್ದ ಆಮ್ ಆದ್ಮಿ ಪಕ್ಷ ಇಡೀ ಗುಜರಾತ್ ಗೆದ್ದ ಸಂಭ್ರಮದಲ್ಲಿದೆ. ಆದರೆ ಅರವಿಂದ ಕೇಜ್ರಿವಾಲ್ ಕೆಲ ಕಟು ಸತ್ಯಗಳನ್ನು ಮುಚ್ಚಿಟ್ಟಿದ್ದಾರೆ. ಈ ಕುರಿತು ಗುಜರಾತ್ ಬಿಜೆಪಿ ರಾಜ್ಯಾಧ್ಯಕ್ಷ ಸಿಆರ್ ಪಾಟೀಲ್ ಟ್ವೀಟ್ ಮೂಲಕ ಬಹಿರಂಗ ಪಡಿಸಿದ್ದಾರೆ.
27 ಸ್ಥಾನ ಗೆದ್ದ ಸೂರತ್ನಲ್ಲಿ AAP ಪಕ್ಷದ 59 ಅಬ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಇನ್ನು ವಡೋದರ, ಭಾವ್ನಗರ್ ಹಾಗೂ ಅಹಮ್ಮದಾಬಾದ್ನಲ್ಲಿ ಎಲ್ಲಾ ಆಪ್ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ. ಜಾಮಾನಗರದಲ್ಲಿ 48 ಅಭ್ಯರ್ಥಿಗಳ ಪೈಕಿ 44 ಆಪ್ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ. ಇನ್ನು ರಾಜ್ಕೋಟ್ನಲ್ಲಿ 72 ಆಪ್ ಅಭ್ಯರ್ಥಿಗಳ ಪೈಕಿ 68 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ ಎಂದು ಸಿಆರ್ ಪಾಟೀಲ್ ಟ್ವೀಟ್ ಮಾಡಿದ್ದಾರೆ.
ಗುಜರಾತ್ನಲ್ಲಿ ಆಪ್ ಸಾಧನೆಯನ್ನು ವ್ಯಂಗ್ಯವಾಡಿದ ಸಿರ್ ಪಾಟೀಲ್, 3 ನಗರಲ್ಲಿ ಶೇಕಡಾ 100, 2 ನರಗದಲ್ಲಿ ಶೇಕಡಾ 90, ಒಂದು ನಗರದಲ್ಲಿ ಶೇಕಡಾ 50ಕ್ಕಿಂತ ಹೆಚ್ಚಿನ ಆಪ್ ಆಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಈ ಸಾಧನೆಗೆ ಕೇಜ್ರಿವಾಲ್ ರೋಡ್ ಶೋ ನಡೆಸುತ್ತಿದ್ದಾರೆ ಎಂದು ಸಿಆರ್ ಪಾಟೀಲ್ ಹೇಳಿದ್ದಾರೆ.