ಕರ್ನಾಟಕದ ಗೃಹಲಕ್ಷ್ಮಿ ಯೋಜನೆಯ ಮಾದರಿಯಲ್ಲಿ ಈ ಯೋಜನೆ ಜಾರಿ. 1.67 ಕೋಟಿ ಕುಟುಂಬಗಳಿಗೆ ಈ ಯೋಜನೆಯ ಲಾಭ ಸಿಗಲಿದೆ ಎಂದು ಬಿಜೆಪಿ ಮೈತ್ರಿಕೂಟದ ನಾಯಕ  ಹೇಳಿದ್ದಾರೆ.

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನವೇ ಬಿಜೆಪಿ ಮೈತ್ರಿಕೂಟದ ನಾಯಕ, ಸಿಎ ನಿತೀಶ್ ಕುಮಾರ್, ಕರ್ನಾಟಕ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಯನ್ನು ಫಾಲೋ ಮಾಡಿದ್ದಾರೆ. ಈ ತಿಂಗಳಿನಿಂದ ಬಿಹಾರದ ಜನತೆ ಉಚಿತ ವಿದ್ಯುತ್ ಸೌಲಭ್ಯಯನ್ನು ಪಡೆದುಕೊಳ್ಳಲಿದ್ದಾರೆ. ಈಗಾಗಲೇ ಕರ್ನಾಟಕದಲ್ಲಿ ಕಾಂಗ್ರೆಸ್‌ನ ಸಿಎಂ ಸಿದ್ದರಾಮಯ್ಯ ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಉಚಿತ ವಿದ್ಯುತ್‌ ನೀಡುತ್ತಿದೆ. ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲಿರುವಾಗಲೇ ಬಿಹಾರ ಸಿಎಂ ನಿತೀಶ್ ಕುಮಾರ್, ಫ್ರೀ ವಿದ್ಯುತ್ ಘೋಷಿಸಿದ್ದಾರೆ.

ಬಿಹಾರದ ಜನತೆ 125 ಯೂನಿಟ್‌ಗಳವರೆಗಿನ ವಿದ್ಯುತ್‌ ಬಳಕೆಗೆ ಯಾವುದೇ ಹಣ ಪಾವತಿಸಬೇಕಿಲ್ಲ. 125ಕ್ಕಿಂತ ಹೆಚ್ಚಿನ ಬಳಕೆಗೆ ಜನರು ಹಣ ಪಾವತಿಸಬೇಕಾಗುತ್ತದೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ. ಈ ಕುರಿತು ಎಕ್ಸ್ ಖಾತೆಯಲ್ಲಿ ಬರೆದುಕೊಳ್ಳುವ ಮೂಲಕ ಬಿಹಾರದ ಜನತೆಗೆ ಸಿಎಂ ನಿತೀಶ್ ಕುಮಾರ್ ಗುಡ್‌ನ್ಯೂಸ್ ನೀಡಿದ್ದಾರೆ. ನಮ್ಮ ಸರ್ಕಾರ ಮೊದಲಿನಿಂದಲೂ ಕಡಿಮೆ ದರದಲ್ಲಿ ವಿದ್ಯುತ್ ಪೂರೈಕೆ ಮಾಡುತ್ತಿದೆ. ಇದೀಗ 125 ಯುನಿಟ್‌ವರೆಗಗೆ ಉಚಿತ ವಿದ್ಯುತ್ ನೀಡಲಿದೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

ನಾವು ಆಗಸ್ಟ್ 1, 2025 ರಿಂದ ಅಂದರೆ ಜುಲೈ ತಿಂಗಳ ಬಿಲ್‌ನಿಂದ ರಾಜ್ಯದ ಎಲ್ಲಾ ಗೃಹಬಳಕೆದಾರರು 125 ಯೂನಿಟ್‌ಗಳವರೆಗಿನ ವಿದ್ಯುತ್‌ಗೆ ಯಾವುದೇ ಹಣವನ್ನು ಪಾವತಿಸಬೇಕಾಗಿಲ್ಲ ಎಂದು ನಿರ್ಧರಿಸಿದ್ದೇವೆ. ಈ ಯೋಜನೆಯ ಲಾಭ ರಾಜ್ಯದ 1 ಕೋಟಿ 67 ಲಕ್ಷ ಕುಟುಂಬಗಳು ಪಡೆದುಕೊಳ್ಳಲಿವೆ ಎಂದು ನಿತೀಶ್ ಕುಮಾರ್ ಎಕ್ಸ್ ಖಾತೆಯಲ್ಲಿ ಮಾಹಿತಿಯನ್ನು ನೀಡಿದ್ದಾರೆ.

ಸೌರಫಲಕ ಅಳವಡಿಕೆ

ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದ ಎಲ್ಲಾ ಗೃಹಬಳಕೆದಾರರು ತಮ್ಮ ಮನೆಗಳ ಛಾವಣಿಯ ಮೇಲೆ ಅಥವಾ ಗ್ರಾಮದ ಸಾರ್ವಜನಿಕ ಪ್ರದೇಶದಲ್ಲಿ ಸೌರಫಲಕ ಅಳವಡಿಸಲಾಗುವುದು.'ಕುಟೀರ್ ಜ್ಯೋತಿ ಯೋಜನೆ' ಅಡಿಯಲ್ಲಿ ಅತ್ಯಂತ ಬಡ ಕುಟುಂಬಗಳಿಗೆ ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸುವ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ. ಇನ್ನುಳಿದ ಜನರಿಗೆ ಸರ್ಕಾರ ಬೆಂಬಲ ಬೆಲೆಯನ್ನು ನೀಡಲಿದೆ. ಇನ್ಮುಂದೆ 125 ಯುನಿಟ್ ವಿದ್ಯುತ್ ಬಳಕೆಗೆ ಜನರು ಯಾವುದೇ ಹಣವನ್ನು ಖರ್ಚು ಮಾಡಬೇಕಿಲ್ಲ. ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 10 ಸಾವಿರ ಮೆಗಾವ್ಯಾಟ್‌ಗಳವರೆಗೆ ಸೌರಶಕ್ತಿ ಉತ್ಪಾದನೆ ಆಗಲಿದೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

Scroll to load tweet…

Scroll to load tweet…

ಬಿಜೆಪಿಗೆ ಯಾವ ನೈತಿಕತೆ ಇದೆ?

ಬಿಹಾರ ಚುನಾವಣೆಯಲ್ಲಿ ಬಿಜೆಪಿ ಗ್ಯಾರಂಟಿ ಘೋಷಣೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿಗರು ಹೇಳುವುದು ಒಂದು ಮಾಡುವುದು ಒಂದು. ಕರ್ನಾಟಕ ಮಾದರಿಯನ್ನು ಬಿಜೆಪಿ ಎಲ್ಲ ಕಡೆ ಅಳವಡಿಸಿಕೊಂಡು ಚುನಾವಣೆಯನ್ನು ಗೆಲ್ಲುತ್ತಿದೆ. ಮಧ್ಯಪ್ರದೇಶ, ಮಹಾರಾಷ್ಟ್ರ, ದೆಹಲಿಯಲ್ಲಿ ನಮ್ಮ ಗ್ಯಾರಂಟಿ ಮಾದರಿಯನ್ನು ಅಳವಡಿಸಿಕೊಂಡು, ಮೋದಿ ಗ್ಯಾರಂಟಿ ಅಂತ ದೊಡ್ಡ ಪ್ರಚಾರ ಮಾಡಿದರು. ಆದ್ರೆ ಕರ್ನಾಟಕಕ್ಕೆ ಬಂದಾಗ ನಮ್ಮ 5 ಗ್ಯಾರಂಟಿಗಳನ್ನು ಟೀಕೆ ಮಾಡುತ್ತಾರೆ. ಈಗ ಟೀಕೆ ಮಾಡಲು ಬಿಜೆಪಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿ ಲಕ್ಷ್ಮೀ ಹೆಬ್ಬಾಳ್ಕರ್ ಆಕ್ರೋಶ ಹೊರ ಹಾಕಿದರು.