Asianet Suvarna News Asianet Suvarna News

Winter Session: ಸರ್ಕಾರ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧ, ಪ್ರತಿಪಕ್ಷಗಳಿಗಿರಲಿ ತಾಳ್ಮೆ ಎಂದ ಮೋದಿ

ಸಂಸತ್ತಿನ ಚಳಿಗಾಲದ ಅಧಿವೇಶನ ಈಗಾಗಲೇ ಆರಂಭವಾಗಿದೆ. ಆದರೆ ಇದಕ್ಕೂ ಮೊದಲು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲು ಸಿದ್ಧವಾಗಿದೆ ಹೀಗಾಗಿ ಪ್ರತಿಪಕ್ಷಗಳು ತಾಳ್ಮೆ ಕಳೆದುಕೊಳ್ಳದೇ ಶಾಂತಿಯಿಂದ ವರ್ತಿಸುವಂತೆ ಮನವಿ ಮಾಡಿದರು.
 

Govt ready to answer all questions Opposition must maintain peace PM Modi akb
Author
New Delhi, First Published Nov 29, 2021, 5:53 PM IST

ನವದೆಹಲಿ(ನ.29): ಸಂಸತ್ತಿನ ಚಳಿಗಾಲದ ಅಧಿವೇಶನ ಇಂದು ಆರಂಭವಾಗಿದೆ. ಇದು ಸಂಸತ್‌ನ ಅತ್ಯಂತ ಮಹತ್ವದ ಅಧಿವೇಶನವಾಗಿದ್ದು, ದೇಶದ ನಾಗರಿಕರು ಒಂದು ಫಲಪ್ರದವಾದ ಅಧಿವೇಶನ ಆಗಬೇಕೆಂದು ಬಯಸಿದ್ದಾರೆ. ಅವರು ತಮ್ಮ ಉಜ್ವಲ ಭವಿಷ್ಯಕ್ಕಾಗಿ ಅವರ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಪ್ರತಿಪಕ್ಷಗಳ ಎಲ್ಲಾ ಪ್ರಶ್ನೆಗಳಿಗೂ ಸರ್ಕಾರ ಉತ್ತರಿಸಲು ಸಿದ್ಧವಾಗಿದೆ. ಹೀಗಾಗಿ ಪ್ರತಿಪಕ್ಷಗಳು ಶಾಂತಿಯಿಂದ ವರ್ತಿಸಬೇಕು. ಪ್ರತಿಪಕ್ಷಗಳು ಸರ್ಕಾರದ ಬಗ್ಗೆ ಧ್ವನಿಯೆತ್ತಬಹುದು, ಆದರೆ ಸದನಕ್ಕೆ ಅಗೌರವ ತೋರಬಾರದು ಎಂದು ಸಂಸತ್‌ ಅಧಿವೇಶನ ಆರಂಭವಾಗುವುದಕ್ಕೂ ಮೊದಲು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷಗಳಲ್ಲಿ ಮನವಿ ಮಾಡಿದರು.

ಇದೇ ವೇಳೆ ಒಮಿಕ್ರಾನ್‌ ರೂಪಾಂತರಿ ಕೊರೊನಾ ಬಗ್ಗೆ ಜಾಗೃತೆ ವಹಿಸುವಂತೆ ಸಂಸದರಿಗೆ ಪ್ರಧಾನಿ ಹೇಳಿದರು. ಇಂದು ಆರಂಭವಾಗಿರುವ ಚಳಿಗಾಲದ ಸಂಸತ್‌ ಅಧಿವೇಶನ ಡಿಸೆಂಬರ್‌ 23ರವರೆಗೆ ನಡೆಯಲಿದೆ. ಈ ಅಧಿವೇಶನದಲ್ಲಿ ಸರ್ಕಾರ ಕೃಷಿ ಕಾನೂನು ಮಸೂದೆ ಸೇರಿದಂತೆ ಮೂರು ಮಸೂದೆಗಳನ್ನು ವಾಪಸ್‌ ಪಡೆದಿದೆ.  ಲೋಕಸಭೆಯಲ್ಲಿ ವಿರೋಧ ಪಕ್ಷಗಳ ಗದ್ದಲದ ನಡುವೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ (Narendra Singh Tomar) ಕೃಷಿ ಕಾನೂನು ರದ್ದತಿ ಮಸೂದೆ 2021 ( Farm Laws Repeal Bill 2021) ಮಂಡಿಸಿದ್ದಾರೆ. ಸಚಿವ ನರೇಂದ್ರ ಸಿಂಗ್ ತೋಮರ್ ಲೋಕಸಭೆಯಲ್ಲಿ ಮಂಡಿಸಿದ ಬಳಿಕ ಕೃಷಿ ಕಾನೂನುಗಳ ರದ್ದತಿ ಮಸೂದೆ ಲೋಕಸಭೆಯಲ್ಲಿ ವಿಪಕ್ಷಗಳ ಗದ್ದಲದ ನಡುವೆಯೇ ಅಂಗೀಕಾರ ಪಡೆದಿದೆ. ಹೀಗಿರುವಾಗ ಸದನದಲ್ಲಿ ಮಸೂದೆಯನ್ನು ಚರ್ಚಿಸಲು ಕಾಂಗ್ರೆಸ್ ಒತ್ತಾಯಿಸಿತು. 

Farm Laws: ಕೃಷಿ ಕಾನೂನು ರದ್ದುಗೊಳಿಸಿ, ಪ್ರತಿಭಟನೆಗಿಳಿದು ಅಪಹಾಸ್ಯಕ್ಕೀಡಾದ ಕಾಂಗ್ರೆಸ್!

ದೇಶವೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಇವುಗಳ ಬಗ್ಗೆ ಗಂಭೀರ ಚರ್ಚೆಯಾಗಬೇಕಿದೆ. ದೇಶದ ನಾಗರಿಕರು ಕೂಡ ಈ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕೆಂದು ಬಯಸಿದ್ದಾರೆ ಹಲವು ವಿಚಾರಗಳ ಬಗ್ಗೆ ಧ್ವನಿ ಎತ್ತಲು ನಾನು ನನಗಾದಷ್ಟು ಸಮಯವನ್ನು ಸಂಸದರಿಗೆ ನೀಡುತ್ತೇನೆ ಎಂದು ಲೋಕಸಭಾ ಸ್ಪೀಕರ್ (Lok Sabha Speaker) ಓಂ ಪ್ರಕಾಶ್‌ ಬಿರ್ಲಾ( Om prakash Birla) ಇದೇ ವೇಳೆ ಹೇಳಿದರು.

ಕೇಂದ್ರ ಕೃಷಿ ಸಚಿವ ನರೇಂದ್ರ ತೋಮರ್ ಅವರು 12 ಗಂಟೆಗೆ ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಿದರು. ಮಸೂದೆ ಮಂಡನೆಯಾದ 4 ನಿಮಿಷಗಳಲ್ಲಿ ಅಂಗೀಕಾರವಾಯಿತು. 2021 ಕೃಷಿ ಕಾನೂನುಗಳ ರದ್ದತಿ ಮಸೂದೆಯನ್ನು ಅಂಗೀಕರಿಸುವ ಮೊದಲು ಯಾವುದೇ ಚರ್ಚೆಗೆ ಅವಕಾಶ ಮಾಡಿಕೊಡಲು ಸ್ಪೀಕರ್ ಓಂ ಬಿರ್ಲಾ (Loksabha Speaker Om Birla) ಅವರು ವಿರೋಧ ಪಕ್ಷದ ಸಂಸದರಿಗೆ ಮನವಿ ಮಾಡಿದ್ದರು.

ಅದೇ ಸಮಯದಲ್ಲಿ, ಪ್ರತಿಪಕ್ಷಗಳು ಮಸೂದೆಯ ಮೇಲೆ ಚರ್ಚೆಗೆ ಒತ್ತಾಯಿಸಿ ಗದ್ದಲವನ್ನು ಮುಂದುವರೆಸಿದವು. ಇದಾದ ಬಳಿಕ ಲೋಕಸಭೆ ಸ್ಪೀಕರ್ ಸದನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು. ಮತ್ತೆ 2 ಗಂಟೆಗೆ ಸದನದ ಕಲಾಪ ಆರಂಭವಾದರೂ ಗದ್ದಲದಿಂದಾಗಿ ಹೆಚ್ಚು ಹೊತ್ತು ನಡೆಯಲು ಸಾಧ್ಯವಾಗಲಿಲ್ಲ. ಇದಾದ ಬಳಿಕ ಸದನವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.

Farm Laws Repeal Bill 2021: ಕೃಷಿ ಕಾನೂನು ಹಿಂಪಡೆದರೂ ಪ್ರತಿಭಟನೆ ಮುಂದುವರೆಯುತ್ತೆ ಎಂದ ಟಿಕಾಯತ್!

2021ರ ಕೃಷಿ ಕಾನೂನುಗಳ ರದ್ದತಿ ಮಸೂದೆಯನ್ನು ಚರ್ಚಿಸಲು ಒತ್ತಾಯಿಸಿ ತೃಣಮೂಲ ಕಾಂಗ್ರೆಸ್ ಸಂಸದರು ಮಹಾತ್ಮ ಗಾಂಧಿ ಪ್ರತಿಮೆಯ ಬಳಿ ಪ್ರತಿಭಟನೆ ನಡೆಸಿದರು. ಟಿಎಂಸಿ ಕೃಷಿ ಕಾನೂನುಗಳ ರದ್ದತಿ ಮಸೂದೆಯ ಮೇಲೆ ಚರ್ಚೆ ಮಾಡಬೇಕೆಂದು ಬಯಸಿದೆ. ಆದರೆ ಸರ್ಕಾರವು ರೈತರ ಪರಿಸ್ಥಿತಿಗಳನ್ನು ಚರ್ಚಿಸಲು ಹೆದರುತ್ತಿದೆ. ರೈತರ ಪರವಾಗಿ ಮಾತನಾಡಲು ಪ್ರತಿಪಕ್ಷಗಳಿಗೆ ಸರ್ಕಾರ ಅವಕಾಶ ನೀಡುತ್ತಿಲ್ಲ ಎಂದು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಸಂಸತ್ತಿನಲ್ಲಿ ಆರೋಪಿಸಿದರು. .

Follow Us:
Download App:
  • android
  • ios