ಕೃಷಿಕರಿಗೊಂದು ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ!
* ಕೃಷಿ ಮಾಹಿತಿಗಾಗಿ ಕನ್ನಡದಲ್ಲಿ ಆತ್ಮನಿರ್ಭರ ಕೃಷಿ ಆ್ಯಪ್ ಬಿಡುಗಡೆ
* ಯಾವ ಬೆಳೆ ಬೆಳೆಯಬೇಕು, ಹವಾಮಾನ ಮುನ್ನೆಚ್ಚರಿಕೆಗಳು, ವಿವಿಧ ಇಲಾಖೆಗಳಿಂದ ಕ್ರೋಡೀಕರಿಸಿದ ರೈತರಿಗೆ ಸಂಬಂಧಿಸಿದ ಮಾಹಿತಿಗಳು
* ಆ್ಯಂಡ್ರಾಯಿಡ್ ಮತ್ತು ವಿಂಡೋಸ್ ಮೊಬೈಲ್ಗಳಲ್ಲಿ ಬಳಸಬಹುದಾದ ಆತ್ಮನಿರ್ಭರ ಕೃಷಿ ಆ್ಯಪ್
ನವದೆಹಲಿ(ಜೂ.30): ಕೃಷಿ ಸಂಬಂಧಿತ ವಿಚಾರಗಳ ಕುರಿತಾಗಿ ರೈತರಿಗೆ ಕನ್ನಡ ಸೇರಿದಂತೆ 12 ಭಾಷೆಗಳಲ್ಲಿ ಮಾಹಿತಿ ನೀಡುವ ಆತ್ಮ ನಿರ್ಭರ ಕೃಷಿ ಆ್ಯಪ್ ಅನ್ನು ಕೇಂದ್ರ ಸರ್ಕಾರ ಮಂಗಳವಾರ ಬಿಡುಗಡೆ ಮಾಡಿದೆ.
ಯಾವ ಬೆಳೆ ಬೆಳೆಯಬೇಕು, ಹವಾಮಾನ ಮುನ್ನೆಚ್ಚರಿಕೆಗಳು, ವಿವಿಧ ಇಲಾಖೆಗಳಿಂದ ಕ್ರೋಡೀಕರಿಸಿದ ರೈತರಿಗೆ ಸಂಬಂಧಿಸಿದ ಮಾಹಿತಿಗಳು ಪ್ರಸಾರ ಮಾಡುವ ರಾಷ್ಟ್ರೀಯ ಡಿಜಿಟಲ್ ವೇದಿಕೆ ಕಿಸಾನ್ ಮಿತ್ರವು ಇನ್ನು ಆತ್ಮ ನಿರ್ಭರ ಕೃಷಿ ಆ್ಯಪ್ನಲ್ಲಿ ರೈತರಿಗೆ ಅರ್ಥವಾಗುವ ರೀತಿಯಲ್ಲಿ ಲಭ್ಯವಾಗಲಿದೆ.
ಆ್ಯಂಡ್ರಾಯಿಡ್ ಮತ್ತು ವಿಂಡೋಸ್ ಮೊಬೈಲ್ಗಳಲ್ಲಿ ಬಳಸಬಹುದಾದ ಆತ್ಮನಿರ್ಭರ ಕೃಷಿ ಆ್ಯಪ್ ಮುಖಾಂತರ 12 ಭಾಷೆಗಳಲ್ಲಿ ರೈತರು, ಸ್ಟಾರ್ಟಪ್ಗಳು, ಕೃಷಿ ವಿಜ್ಞಾನ ಕೇಂದ್ರಗಳು, ಸ್ವಸಹಾಯ ಗುಂಪುಗಳು ಮತ್ತು ಎನ್ಜಿಒಗಳಿಗೆ ಉಚಿತವಾಗಿ ಮಾಹಿತಿಗಳನ್ನು ನೀಡಲಾಗುತ್ತದೆ.
ಇದರಿಂದ ರೈತರು ಯಾವ ರೀತಿಯ ಬೆಳೆ ಬೆಳೆಯಬೇಕು, ಸಣ್ಣ ಹಿಡುವಳಿಗಳ ಯಾಂತ್ರಿಕರಣ, ಕೃಷಿ ತ್ಯಾಜ್ಯಕ್ಕೆ ಯಾವಾಗ ಬೆಂಕಿ ಹಚ್ಚಬೇಕು ಎಂಬ ನಿರ್ಧಾರ ಕೈಗೊಳ್ಳಲು ರೈತರಿಗೆ ಅನುಕೂಲವಾಗಲಿದೆ. ಬೆಂಗಳೂರಿನ ಐಸಿಎಸ್ಟಿ ಸಂಸ್ಥೆ ಸಂಸ್ಥಾಪಕ ಟ್ರಸ್ಟಿರಾಜಾ ಶಿವ ಅವರು ಈ ಆ್ಯಪ್ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.