ಕಿರಣ್ ಬೇಡಿ ಗೋಬ್ಯಾಕ್: ಗವರ್ನರ್ ವಿರುದ್ಧವೇ ಮುಖ್ಯಮಂತ್ರಿ ಧರಣಿ!
ಗವರ್ನರ್ ವಿರುದ್ಧವೇ ಮುಖ್ಯಮಂತ್ರಿ ಧರಣಿ!| ಕಿರಣ್ ಬೇಡಿ ಗೋಬ್ಯಾಕ್: ಪುದುಚೇರಿ ಸಿಎಂ
ಪುದುಚೇರಿ(ಜ.11): ಪುದುಚೇರಿ ಉಪರಾಜ್ಯಪಾಲೆ ಕಿರಣ್ ಬೇಡಿ ವಜಾಕ್ಕೆ ಆಗ್ರಹಿಸಿ ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸಾಮಿ ಬೀದಿಗೆ ಇಳಿದಿದ್ದಾರೆ.
ಬೇಡಿ ಅವರ ವಜಾಕ್ಕೆ ಆಗ್ರಹಿಸಿ ರಾಜ್ಯಪಾಲರ ಅಧಿಕೃತ ನಿವಾಸವಾದ ‘ರಾಜನಿವಾಸ’ದ ಎದುರು 3 ದಿನದಿಂದ ಆಡಳಿತಾರೂಢ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ಪ್ರತಿಭಟನೆಗೆ ನಡೆಸುತ್ತಿವೆ. ಶನಿವಾರ ರಾತ್ರಿ ಪ್ರತಿಭಟನಾ ಸ್ಥಳದಲ್ಲೇ ಮಲಗಿದ್ದ ನಾರಾಯಣಸಾಮಿ, ಭಾನುವಾರವೂ ಪ್ರತಿಭಟನೆಯಲ್ಲಿ ಭಾಗಿಯಾದರು.
‘ಬೇಡಿ.. ಗೋ ಬ್ಯಾಕ್’ ಎಂಬ ಫಲಕ ಹಿಡಿದು ಗಮನ ಸೆಳೆದರು. ಇವರಿಗೆ ಸಚಿವ, ಶಾಸಕರೂ ಸಾಥ್ ನೀಡಿದರು. ಈ ಕಾರಣದಿಂದ ರಾಜನಿವಾಸಕ್ಕೆ ಕೇಂದ್ರೀಯ ಪಡೆಗಳಿಂದ ಭದ್ರತೆ ಒದಗಿಸಲಾಗಿದೆ.
‘ಪುದುಚೇರಿಯ ಅಭಿವೃದ್ಧಿ ಯೋಜನೆಗಳು ಮತ್ತು ಕಾರ್ಯಗಳಿಗೆ ಕಿರಣ್ ಬೇಡಿ ಅಡ್ಡಗಾಲು ಹಾಕುತ್ತಿದ್ದಾರೆ’ ಎಂಬುದು ಆಡಳಿತಾರೂಢ ಪಕ್ಷದ ಆರೋಪ. ಆದರೆ, ಬಿಜೆಪಿ ಹಾಗೂ ಅಣ್ಣಾಡಿಎಂಕೆ ಈ ಪ್ರತಿಭಟನೆಯನ್ನು ಖಂಡಿಸಿವೆ.
2016ರಲ್ಲಿ ಕಿರಣ್ ಬೇಡಿ ಅವರು ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕವಾದಾಗಿನಿಂದಲೂ ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ನಡುವೆ ಮನಸ್ತಾಪ, ಜಟಾಪಟಿ ನಡೆದೇ ಇದೆ. ಮೇ ತಿಂಗಳಿನಲ್ಲಿ ವಿಧಾನಸಭಾ ಚುನಾವಣೆ ನಿಗದಿಯಾಗಿರುವಾಗಲೇ ಘಟಾನುಘಟಿ ನಾಯಕರಿಬ್ಬರ ನಡುವಿನ ವೈಮನಸ್ಸು ತಾರಕಕ್ಕೇರಿದೆ.