ಗವರ್ನರ್ ವಿರುದ್ಧವೇ ಮುಖ್ಯಮಂತ್ರಿ ಧರಣಿ!| ಕಿರಣ್ ಬೇಡಿ ಗೋಬ್ಯಾಕ್: ಪುದುಚೇರಿ ಸಿಎಂ
ಪುದುಚೇರಿ(ಜ.11): ಪುದುಚೇರಿ ಉಪರಾಜ್ಯಪಾಲೆ ಕಿರಣ್ ಬೇಡಿ ವಜಾಕ್ಕೆ ಆಗ್ರಹಿಸಿ ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸಾಮಿ ಬೀದಿಗೆ ಇಳಿದಿದ್ದಾರೆ.
ಬೇಡಿ ಅವರ ವಜಾಕ್ಕೆ ಆಗ್ರಹಿಸಿ ರಾಜ್ಯಪಾಲರ ಅಧಿಕೃತ ನಿವಾಸವಾದ ‘ರಾಜನಿವಾಸ’ದ ಎದುರು 3 ದಿನದಿಂದ ಆಡಳಿತಾರೂಢ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ಪ್ರತಿಭಟನೆಗೆ ನಡೆಸುತ್ತಿವೆ. ಶನಿವಾರ ರಾತ್ರಿ ಪ್ರತಿಭಟನಾ ಸ್ಥಳದಲ್ಲೇ ಮಲಗಿದ್ದ ನಾರಾಯಣಸಾಮಿ, ಭಾನುವಾರವೂ ಪ್ರತಿಭಟನೆಯಲ್ಲಿ ಭಾಗಿಯಾದರು.
‘ಬೇಡಿ.. ಗೋ ಬ್ಯಾಕ್’ ಎಂಬ ಫಲಕ ಹಿಡಿದು ಗಮನ ಸೆಳೆದರು. ಇವರಿಗೆ ಸಚಿವ, ಶಾಸಕರೂ ಸಾಥ್ ನೀಡಿದರು. ಈ ಕಾರಣದಿಂದ ರಾಜನಿವಾಸಕ್ಕೆ ಕೇಂದ್ರೀಯ ಪಡೆಗಳಿಂದ ಭದ್ರತೆ ಒದಗಿಸಲಾಗಿದೆ.
‘ಪುದುಚೇರಿಯ ಅಭಿವೃದ್ಧಿ ಯೋಜನೆಗಳು ಮತ್ತು ಕಾರ್ಯಗಳಿಗೆ ಕಿರಣ್ ಬೇಡಿ ಅಡ್ಡಗಾಲು ಹಾಕುತ್ತಿದ್ದಾರೆ’ ಎಂಬುದು ಆಡಳಿತಾರೂಢ ಪಕ್ಷದ ಆರೋಪ. ಆದರೆ, ಬಿಜೆಪಿ ಹಾಗೂ ಅಣ್ಣಾಡಿಎಂಕೆ ಈ ಪ್ರತಿಭಟನೆಯನ್ನು ಖಂಡಿಸಿವೆ.
2016ರಲ್ಲಿ ಕಿರಣ್ ಬೇಡಿ ಅವರು ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕವಾದಾಗಿನಿಂದಲೂ ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ನಡುವೆ ಮನಸ್ತಾಪ, ಜಟಾಪಟಿ ನಡೆದೇ ಇದೆ. ಮೇ ತಿಂಗಳಿನಲ್ಲಿ ವಿಧಾನಸಭಾ ಚುನಾವಣೆ ನಿಗದಿಯಾಗಿರುವಾಗಲೇ ಘಟಾನುಘಟಿ ನಾಯಕರಿಬ್ಬರ ನಡುವಿನ ವೈಮನಸ್ಸು ತಾರಕಕ್ಕೇರಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 11, 2021, 7:38 AM IST