ಟಿಕೆಟ್ ಕೊಡಿಸುವುದಾಗಿ ಹಣ ವಸೂಲಿ: ನಕಲಿ ಪ್ರಶಾಂತ್ ಕಿಶೋರ್ ಸೆರೆ!
* ಖ್ಯಾತ ಚುನಾವಣಾ ರಣತಂತ್ರಗಾರ ಪ್ರಶಾಂತ್ ಕಿಶೋರ್ ಸೋಗಿನಲ್ಲಿ ಹಣ ವಸೂಲಿ
* ಟಿಕೆಟ್ ಕೊಡಿಸುವುದಾಗಿ ಹಣ ವಸೂಲಿ: ನಕಲಿ ಪ್ರಶಾಂತ್ ಕಿಶೋರ್ ಸೆರೆ!
* ಪಂಜಾಬ್ನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ
ಅಮೃತಸರ(ಮೇ.16): ಖ್ಯಾತ ಚುನಾವಣಾ ರಣತಂತ್ರಗಾರ ಪ್ರಶಾಂತ್ ಕಿಶೋರ್ ಸೋಗಿನಲ್ಲಿ ಪಂಜಾಬ್, ಬಿಹಾರ, ಹರಾರಯಣ, ರಾಜಸ್ಥಾನ ಮತ್ತು ಇತರೆ ರಾಜ್ಯಗಳಲ್ಲಿ ಕಾಂಗ್ರೆಸ್ ಸೇರಿ ಇನ್ನಿತರ ಪಕ್ಷಗಳ ಟಿಕೆಟ್ ಆಕಾಂಕ್ಷಿತರಿಗೆ ಕೋಟ್ಯಂತರ ರು. ವಂಚಿಸುತ್ತಿದ್ದ ಜಾಲವೊಂದನ್ನು ಪಂಜಾಬ್ನ ಲೂಧಿಯಾನ ಪೊಲೀಸರು ಭೇದಿಸಿದ್ದಾರೆ.
ಈ ಪ್ರಕರಣದ ಇಬ್ಬರು ಶಂಕಿತರಾದ ರಾಕೇಶ್ ಕುಮಾರ್ ಭಾಸಿನ್ ಮತ್ತು ರಜತ್ ಕುಮಾರ್ರನ್ನು ಬಂಧಿಸಲಾಗಿದ್ದು, ಈ ಪ್ರಕರಣದ ಕಿಂಗ್ಪಿನ್ ಎನ್ನಲಾದ ಆರೋಪಿ ಗೌರವ್ ಶರ್ಮಾ ಪರಾರಿಯಾಗಿದ್ದಾನೆ ಎಂದಿದ್ದಾರೆ ಪೊಲೀಸರು.
ಪಂಜಾಬ್ನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿತರನ್ನೇ ಗುರಿಯಾಗಿಸಿಕೊಂಡು ಈ ಗ್ಯಾಂಗ್ ಒಬ್ಬ ಆಕಾಂಕ್ಷಿಯಿಂದ 5 ಕೋಟಿ ರು. ಹಣ ಪೀಕುತಿತ್ತು ಎಂದು ಪೊಲೀಸರು ಆರೋಪಿಸಿದ್ದಾರೆ.
ಈ ಪ್ರಕರಣದ ಜಾಡು ಹಿಡಿದು ಕಾರ್ಯಾಚರಣೆ ನಡೆಸಿದಾಗ ಬಂಧಿತ ಶಂಕಿತರಾದ ರಾಕೇಶ್ ಕುಮಾರ್ ಭಾಸಿನ್ ಮತ್ತು ರಜತ್ ಕುಮಾರ್ ಹಾಗೂ ಪರಾರಿಯಾದ ಗೌರವ್ ಶರ್ಮಾ ಎಂಬುವರು ತಾವು ಪ್ರಶಾಂತ್ ಕಿಶೋರ್ ಅವರ ಸೋಗಲ್ಲಿ ಹಲವು ಕಾಂಗ್ರೆಸ್ ಆಕಾಂಕ್ಷಿತರಿಗೆ ಟಿಕೆಟ್ ನೀಡುವ ವಾಗ್ದಾನದೊಂದಿಗೆ 5 ಕೋಟಿ ರು. ಪಡೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.