Asianet Suvarna News Asianet Suvarna News

ಮೋದಿ ಶಾಂತಿ ಮಂತ್ರಕ್ಕೆ G20 ಧ್ವನಿ: ಮ್ಯಾಂಗ್ರೋವ್‌ ಸಸಿ ನೆಟ್ಟ ಪ್ರಧಾನಿ ಮೋದಿ

ಇಂದಿನದು ಯುದ್ಧದ ಯುಗವಲ್ಲ, ಯುದ್ಧದಿಂದ ಜಾಗತಿಕ ಆರ್ಥಿಕತೆ ಚೇತರಿಕೆಗೆ ಹೊಡೆತ ಬಿದ್ದಿದೆ. ಹೀಗಾಗಿ ಸಮರ ಬಿಟ್ಟು ಶಾಂತಿ ಮಾತುಕತೆಗೆ ಮುಂದಾಗಿ ಎಂದು ಉಕ್ರೇನ್‌-ರಷ್ಯಾ ಯುದ್ಧ ಅಂತ್ಯಕ್ಕೆ ಜಿ-20 ಶೃಂಗ ಸಭೆ ಒಮ್ಮತದ ಕರೆ ನೀಡಿದೆ. 

 

 

g20 summit in bali president bidens salute to modi day after warm hug ash
Author
First Published Nov 17, 2022, 10:06 AM IST

ಬಾಲಿ: ಇಂಡೋನೇಷ್ಯಾದ (Indonesia) ಬಾಲಿಯಲ್ಲಿ (Bali) 2 ದಿನಗಳ ಮಹತ್ವದ ಜಿ-20 ಶೃಂಗಸಭೆ (G 20 Summit) ಬುಧವಾರ ಮುಕ್ತಾಯವಾಗಿದ್ದು, ‘ರಷ್ಯಾ-ಉಕ್ರೇನ್‌ ನಡುವಿನ ಯುದ್ಧ ನಿಲ್ಲಬೇಕು’ (Russia - Ukraine War) ಎಂಬ ಘೋಷಣೆ ಮಾಡಿದೆ. ರಷ್ಯಾ (Russia) ಕೂಡ ಜಿ-20 ಸದಸ್ಯ ದೇಶವಾಗಿದ್ದರೂ, ಯುದ್ಧದ (War) ವಿರುದ್ಧ ಇತರ ಸದಸ್ಯ ದೇಶಗಳು ನಿರ್ಣಯ ಕೈಗೊಂಡಿದ್ದು ಮಹತ್ವ ಪಡೆದಿದೆ. ಸಮರದ ವಿರುದ್ಧ ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ನೀಡಿದ ಕರೆಗೆ ಅನುಗುಣವಾಗಿ ಘೋಷಣೆ ಹೊರಬಿದ್ದಿದೆ.
‘ಉಕ್ರೇನ್‌-ರಷ್ಯಾ ನಡುವಿನ ಯುದ್ಧ ಕೂಡಲೇ ನಿಲ್ಲಬೇಕು. ಇಂದಿನ ಯುಗ ಯುದ್ಧ ಮಾಡುವಂಥದ್ದಲ್ಲ. ಬಿಕ್ಕಟ್ಟು ಇತ್ಯರ್ಥಕ್ಕೆ ರಾಜತಾಂತ್ರಿಕತೆ, ಮಾತುಕತೆ ಮಹತದ್ದಾಗಿದೆ. ಹೀಗಾಗಿ ಶಾಂತಿಗಾಗಿ ಜಿ-20 ದೇಶಗಳು ಮನವಿ ಮಾಡುತ್ತವೆ’ ಎಂದು ಶೃಂಗದ ಘೋಷಣೆಯಲ್ಲಿ ತಿಳಿಸಲಾಗಿದೆ. ‘ಅಣ್ವಸ್ತ್ರ ಬೆದರಿಕೆ ಹಾಕುವುದು ತರವಲ್ಲ’ ಎಂದೂ ಹೇಳುವ ಮೂಲಕ ಅಣು ಯುದ್ಧದ ಮಾತನಾಡಿದ್ದ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಹಾಗೂ ಇತರ ರಷ್ಯಾ ಸಚಿವರ ಬಗ್ಗೆ ಪರೋಕ್ಷವಾಗಿ ಜಿ-20 ಹರಿಹಾಯ್ದಿದೆ.

ಅಲ್ಲದೆ, ‘ಉಕ್ರೇನ್‌ ಮೇಲೆ ರಷ್ಯಾ ದಂಡೆತ್ತಿ ಹೋಗಿದ್ದು ಅಕ್ರಮ, ಅಸಮರ್ಥನೀಯ, ಅಪ್ರಚೋದಿತ’ ಎಂದು ಕಿಡಿಕಾರಿರುವ ಶೃಂಗದ ಘೋಷಣೆ, ‘ಈ ಯುದ್ಧ ಇಂದು ಜಾಗತಿಕ ಆರ್ಥಿಕ ಚೇತರಿಕೆಗೆ ಹೊಡೆತ ನೀಡುತ್ತಿದೆ’ ಎಂದೂ ಆತಂಕ ವ್ಯಕ್ತಪಡಿಸಿದೆ.

ಇದನ್ನು ಓದಿ: G - 20 Summit: ಪ್ರಧಾನಿ ಮೋದಿಗೆ ಹಸ್ತಲಾಘವ ಮಾಡಲು ಹಿಂದೆ ಹಿಂದೆ ಬಂದ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌: ವಿಡಿಯೋ ನೋಡಿ..

ಭಾರತದ ಪಾತ್ರ ಪ್ರಮುಖವಾದ್ದು:
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಸೆಪ್ಟೆಂಬರ್‌ನಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ಗೆ ‘ಇಂದು ಯುದ್ಧದ ಯುಗವಲ್ಲ’ ಎಂದಿದ್ದರು. ಅಲ್ಲದೆ, ಮಂಗಳವಾರವಷ್ಟೇ ಬಾಲಿ ಶೃಂಗದಲ್ಲಿ ಕದವಿರಾಮಕ್ಕೆ ಕರೆ ನೀಡಿದ್ದರು. ಅವರ ಆಶಯಕ್ಕೆ ಅನುಗುಣವಾಗೇ ಜಿ-20 ಶೃಂಗದ ಗೊತ್ತುವಳಿಯ ಘೋಷಣೆ ಹೊರಬಿದ್ದಿದೆ. ಘೋಷಣೆಗಳನ್ನು ರೂಪುಗೊಳಿಸುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿತ್ತು ಎಂದು ಮೂಲಗಳು ಹೇಳಿವೆ.

ಜಿ-20 ಜಂಟಿ ಘೋಷಣೆ
- ಉಕ್ರೇನ್‌-ರಷ್ಯಾ ನಡುವಿನ ಯುದ್ಧ ಕೂಡಲೇ ನಿಲ್ಲಬೇಕು
- ಇಂದಿನ ಯುಗ ಯುದ್ಧ ಮಾಡುವಂಥದ್ದಲ್ಲ
- ಅಣ್ವಸ್ತ್ರ ಬೆದರಿಕೆ ಹಾಕುವುದು ಅಥವಾ ಅಣ್ವಸ್ತ್ರ ಬಳಕೆ ತರವಲ್ಲ
- ಬಿಕ್ಕಟ್ಟು ಇತ್ಯರ್ಥಕ್ಕೆ ರಾಜತಾಂತ್ರಿಕತೆ, ಮಾತುಕತೆ ಮಹತ್ವದ್ದು
- ಶಾಂತಿಗಾಗಿ ಜಿ-20 ದೇಶಗಳು ಮನವಿ ಮಾಡುತ್ತವೆ
- ಉಕ್ರೇನ್‌ ಮೇಲೆ ರಷ್ಯಾ ದಂಡೆತ್ತಿ ಹೋಗಿದ್ದು ಅಕ್ರಮ, ಅಸಮರ್ಥನೀಯ, ಅಪ್ರಚೋದಿತ
- ಈ ಯುದ್ಧ ಇಂದು ಜಾಗತಿಕ ಆರ್ಥಿಕ ಚೇತರಿಕೆಗೆ ಹೊಡೆತ ನೀಡುತ್ತಿದೆ

ಇದನ್ನೂ ಓದಿ: G20 Summit: ಜಗತ್ತಿನ ಅಭಿವೃದ್ಧಿಗೆ ಭಾರತವೇ ಮುಖ್ಯ ಎಂದ ಪ್ರಧಾನಿ ಮೋದಿ!

ಮೋದಿಗೆ ಬೈಡೆನ್‌ ಸೆಲ್ಯೂಟ್‌!
ಮಂಗಳವಾರ ಜಿ20 ಶೃಂಗದ ವೇಳೆ ಮೋದಿಯನ್ನು ಆತ್ಮೀಯವಾಗಿ ಮಾತನಾಡಿಸಿ ಗಮನ ಸೆಳೆದಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಬುಧವಾರ ಮೋದಿ ನೋಡಿ ದೂರದಿಂದಲೇ ಸೆಲ್ಯೂಟ್‌ ಮಾಡಿದ ಘಟನೆ ನಡೆದಿದೆ. ಬಾಲಿಯ ಅರಣ್ಯ ಪ್ರದೇಶದಲ್ಲಿ ಮ್ಯಾನ್‌ಗ್ರೂವ್‌ ಗಿಡಗಳನ್ನು ನೆಡಲು ಜಾಗತಿಕ ನಾಯಕರು ಆಗಮಿಸಿದ್ದರು. ಈ ಕಾರ್ಯಕ್ರಮಕ್ಕೆ ಮೊದಲೇ ಆಗಮಿಸಿದ್ದ ಮೋದಿ ಕುರ್ಚಿಯಲ್ಲಿ ಆಸೀನರಾಗಿದ್ದರು. ಬಳಿಕ ಕಾರ್ಯಕ್ರಮದ ಸ್ಥಳಕ್ಕೆ ಬಂದ ಬೈಡೆನ್‌ ದೂರದಿಂದ ಮೋದಿ ನೋಡಿ ನಗುತ್ತಲೇ ಸಲ್ಯೂಟ್‌ ಮಾಡಿದರು. ಇದಕ್ಕೆ ಅತ್ತ ಕಡೆಯಿಂದ ಮೋದಿ ಕೂಡಾ ಸೆಲ್ಯೂಟ್‌ ಮಾಡಿ ತಮ್ಮ ನಡುವಿನ ಸ್ನೇಹವನ್ನು ಪ್ರದರ್ಶಿಸಿದರು.

ಮ್ಯಾಂಗ್ರೋವ್‌ ಸಸಿ ನೆಟ್ಟ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಬುಧವಾರ ವಿಶ್ವನಾಯಕರ ಜೊತೆ ಸೇರಿ ಬಾಲಿಯ ಅತಿದೊಡ್ಡ ಮ್ಯಾಂಗ್ರೋವ್‌ ಅರಣ್ಯ ಪ್ರದೇಶದಲ್ಲಿ ಮ್ಯಾಂಗ್ರೋವ್‌ ಸಸಿಗಳನ್ನು ನೆಟ್ಟರು. ಈ ಮೂಲಕ ಜಾಗತಿಕ ಹವಾಮಾನ ಬದಲಾವಣೆಯ ವಿರುದ್ಧ ಸಂದೇಶ ಸಾರಿದರು. ಮ್ಯಾಂಗ್ರೋವ್‌ ಕಾಡುಗಳು ಜಗತ್ತನ್ನು ಸಂರಕ್ಷಿಸುವಲ್ಲಿ ಮಹತ್ವದ ಪಾತ್ರವನ್ನು ಹೊಂದಿದೆ. ಭಾರತವು ಇಂಡೋನೇಷ್ಯಾ ಹಾಗು ಯುಎಇ ದೇಶಗಳೊಂದಿಗೆ ಮ್ಯಾಂಗ್ರೋವ್‌ ಅಲಯನ್ಸ್‌ ಫಾರ್‌ ಕ್ಲೈಮೆಟ್‌ (ಎಂಎಸಿ) ಅನ್ನು ಸೇರಿದೆ. ಭಾರತದ 5000 ಚದರ ಕಿ.ಮಿ. ವ್ಯಾಪ್ತಿಯಲ್ಲಿ 50ಕಿಂತ ಹೆಚ್ಚಿನ ಮ್ಯಾಂಗ್ರೋವ್‌ ತಳಿಗಳನ್ನು ನೋಡಬಹುದು, ಜಗತ್ತಿನಲ್ಲಿ ಕಾರ್ಬನ್‌ ಹೆಜ್ಜೆ ಗುರುತು ಕಡಿಮೆ ಮಾಡುವಲ್ಲಿ ಮ್ಯಾಂಗ್ರೋವ್‌ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಭಾರತಕ್ಕೆ ಜಿ20 ಅಧ್ಯಕ್ಷ ಸ್ಥಾನ ಹಸ್ತಾಂತರ ಮಾಡಿದ ಇಂಡೋನೇಷ್ಯಾ

Follow Us:
Download App:
  • android
  • ios