ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ದೇಶದಾದ್ಯಂತ ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ಸಿಲಿಂಡರ್ಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಹಾರ್ಮುಜ್ ಜಲಸಂಧಿ ಮೂಲಕ ಪೂರೈಕೆಯಲ್ಲಿ ವ್ಯತ್ಯಯ ಆಗಬಹುದೆಂಬ ಆತಂಕದಲ್ಲಿ ಜನರು ಇಂಧನಕ್ಕಾಗಿ ಮುಗಿಬೀಳುತ್ತಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಇಂಧನ ಪೂರೈಕೆಯಲ್ಲಿನ ಅನಿಶ್ಚಿತತೆಯಿಂದಾಗಿ ದೇಶದಾದ್ಯಂತ ಜನರು ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ಖರೀದಿಸಲು ಮುಗಿಬೀಳುತ್ತಿದ್ದಾರೆ. ದೇಶದಲ್ಲಿ ಇಂಧನಕ್ಕೆ ಯಾವುದೇ ಕೊರತೆ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದರೂ, ಈ ಪರಿಸ್ಥಿತಿ ಜನರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಭಾರತಕ್ಕೆ ಶೇ. 40ರಷ್ಟು ಕಚ್ಚಾ ತೈಲ ಪೂರೈಕೆಯಾಗುವ ಹಾರ್ಮುಜ್ ಜಲಸಂಧಿ ಬಹುತೇಕ ಬಂದ್ ಆಗಿರುವುದು ಹಡಗು ಸಂಚಾರ ಮತ್ತು ಅನಿಲ ಪೂರೈಕೆಗೆ ಅಡ್ಡಿಯಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಅನೇಕ ಬಳಕೆದಾರರು ಪೆಟ್ರೋಲ್ ಬಂಕ್ಗಳ ಮುಂದಿನ ಜನಜಂಗುಳಿಯ ಫೋಟೋ, ವಿಡಿಯೋಗಳನ್ನು ಹಂಚಿಕೊಂಡು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ. ಹೈದರಾಬಾದ್, ಸೂರತ್, ಅಹಮದಾಬಾದ್, ಕಚ್, ನಾಗ್ಪುರ ಮತ್ತು ಇಂದೋರ್ನಂತಹ ನಗರಗಳಲ್ಲಿ ಜನರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ತಮ್ಮ ವಾಹನಗಳಿಗೆ ಇಂಧನ ತುಂಬಿಸಿಕೊಳ್ಳುತ್ತಿರುವ ದೃಶ್ಯಗಳು ವೈರಲ್ ಆಗಿವೆ.
ಒಬ್ಬ ಬಳಕೆದಾರರು, 'ನಾನು ಮಾರ್ಚ್ 15 ರಂದು ಸಿಲಿಂಡರ್ ಬುಕ್ ಮಾಡಿದ್ದೆ. 11 ದಿನಗಳಾದರೂ ಇನ್ನೂ ಡೆಲಿವರಿ ಆಗಿಲ್ಲ. ಈಗ ನನ್ನ ಮನೆಯಿಂದ 100 ಮೀಟರ್ ದೂರದಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ನಲ್ಲಿ 'NO STOCK' ಅಂತ ಬೋರ್ಡ್ ಹಾಕಿದ್ದಾರೆ' ಎಂದು ಬರೆದುಕೊಂಡಿದ್ದಾರೆ.
ಇನ್ನೊಬ್ಬರು, ‘ಪಶ್ಚಿಮ ಏಷ್ಯಾ ಯುದ್ಧದಿಂದಾಗಿ ಜಾಗತಿಕ ಇಂಧನ ಬಿಕ್ಕಟ್ಟು ಉಂಟಾಗಿದೆ. ಭಾರತದ ಪೆಟ್ರೋಲ್ ಬಂಕ್ಗಳಲ್ಲಿ ಜನರು ಸಾಲುಗಟ್ಟಿ ನಿಂತಿದ್ದಾರೆ. ಇದು ನಿಜವಾಗಿಯೂ ಇಂಧನ ಕೊರತೆಯಿಂದಲೋ ಅಥವಾ ಜನರು ಆತಂಕದಿಂದ ಸಂಗ್ರಹಿಸುತ್ತಿದ್ದಾರೋ?’ ಎಂದು ಪ್ರಶ್ನಿಸಿದ್ದಾರೆ.
ಹೈದರಾಬಾದ್ನಲ್ಲಿ ಇಂಧನ ಕೊರತೆಯ ಬಗ್ಗೆ ಕೇಳಿದ ಪ್ರಶ್ನೆಗೆ, ಒಬ್ಬರು 'ಹೌದು, ಇದು ನಿಜ. ನಾನು ಇಂದು ಬೆಳಗ್ಗೆ 7:30ಕ್ಕೆ ಆಫೀಸ್ಗೆ ಹೋಗುವಾಗ ಪ್ರತಿಯೊಂದು ಪೆಟ್ರೋಲ್ ಬಂಕ್ ಮುಂದೆಯೂ ಭಾರಿ ಟ್ರಾಫಿಕ್ ಇತ್ತು," ಎಂದು ಉತ್ತರಿಸಿದ್ದಾರೆ.
ಮತ್ತೊಬ್ಬರು, ‘ನಮ್ಮ ಮನೆಯ ಬಳಿಯಿರುವ HP ಗ್ಯಾಸ್ ಪಂಪ್ ಇಂದು ಮುಚ್ಚಿದೆ. ಹಾಗಾಗಿ ಉತ್ತರ ಹೌದು ಎಂದೇ ಕಾಣುತ್ತಿದೆ,’ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನೊಬ್ಬ ಬಳಕೆದಾರರು, "ಸರ್ಕಾರ ನಿರಂತರವಾಗಿ ಸಾಕಷ್ಟು ಪೆಟ್ರೋಲ್ ಸ್ಟಾಕ್ ಇದೆ ಎಂದು ಹೇಳುತ್ತಿದೆ, ಆದರೆ ಇಂದು ಮುಂದ್ರಾದಲ್ಲಿ ಎಲ್ಲಾ ಪೆಟ್ರೋಲ್ ಬಂಕ್ಗಳು ಸ್ಟಾಕ್ ಖಾಲಿಯಾಗಿ ಮುಚ್ಚಿವೆ. ನಾನು ಮೂರು ಬಂಕ್ಗಳಿಗೆ ಹೋದೆ, ಒಂದರಲ್ಲಿ 'ಪೆಟ್ರೋಲ್ ಇಲ್ಲ' ಬೋರ್ಡ್ ಇತ್ತು, ಉಳಿದೆರಡರಲ್ಲಿ ದೊಡ್ಡ ಕ್ಯೂ ಇತ್ತು," ಎಂದು ಬರೆದಿದ್ದಾರೆ.
ಈ "ದೀರ್ಘಕಾಲದ ಸವಾಲುಗಳನ್ನು" ಎದುರಿಸಲು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ದೇಶಾದ್ಯಂತ ಪೈಪ್ಲೈನ್ಗಳನ್ನು ವಿಸ್ತರಿಸುವ ಮತ್ತು ನಿರ್ಮಿಸುವ ಮೂಲಕ ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ವಿತರಣಾ ಮೂಲಸೌಕರ್ಯವನ್ನು ಬಲಪಡಿಸಲು ಮುಂದಾಗಿದೆ. ಗಲ್ಫ್ ರಾಷ್ಟ್ರಗಳಲ್ಲಿನ ಘಟಕಗಳು ಸ್ಥಗಿತಗೊಂಡಿರುವುದು ಮತ್ತು ಹಾರ್ಮುಜ್ ಜಲಸಂಧಿಯಲ್ಲಿನ ದಿಗ್ಬಂಧನದ ಹಿನ್ನೆಲೆಯಲ್ಲಿ ಈ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.


