ಜಗನ್‌ ಆಪ್ತ ಮಠಗಳಿಗೆ ತಿರುಮಲ ಜಮೀನು: ವಿವಾದ| ಅತಿಕ್ರಮಣ ಮಾಡಿಕೊಂಡಿದ್ದ ಜಮೀನು| ಸಕ್ರಮಗೊಳಿಸಲು ಜಗನ್‌, ಟಿಟಿಡಿ ನಿರ್ಧಾರ

ಹೈದರಾಬಾದ್(ಜೂ.08)‌: ತಿರುಪತಿ ದೇವಾಲಯದ ಕೆಲ ಆಸ್ತಿ ಮಾರಾಟ ಮಾಡಲು ಮುಂದಾಗಿ ಟಿಟಿಡಿ ವಿವಾದಕ್ಕೀಡಾದ ಬೆನ್ನಲ್ಲೇ, ಇದೀಗ ಟಿಟಿಡಿ ಆಸ್ತಿಯನ್ನು ತಮ್ಮ ಆಪ್ತರಿಗೆ ಮಾರಾಟ ಮಾಡುವ ಮೂಲಕದ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್‌. ಜಗನ್ಮೋಹನ ರೆಡ್ಡಿ, ಹೊಸ ವಿವಾದ ಸೃಷ್ಟಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಿರುಮಲ ಬೆಟ್ಟದ ಮೇಲಿರುವ 2 ಮಠಗಳು ಅತಿಕ್ರಮಣ ಮಾಡಿಕೊಂಡಿದ್ದವು. ಆ ಜಮೀನನ್ನು ಮಠಗಳಿಗೇ ವಹಿಸಿ ಸಕ್ರಮಗೊಳಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಮಠಗಳಲ್ಲಿ ಒಂದು ಮಠವು ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಅವರಿಗೆ ಆಪ್ತ ಮಠ ಎಂದು ತಿಳಿದುಬಂದಿದ್ದು ವಿವಾದಕ್ಕೆ ತುಪ್ಪ ಸುರಿದಿದೆ. ಜಗನ್‌ ನಡೆಯನ್ನು ಬಿಜೆಪಿ ಆಕ್ಷೇಪಿಸಿದ್ದು, ಭಕ್ತರಿಗೆ ಸೇರಿದ ಜಾಗವನ್ನು ಮಠಗಳಿಗೆ ನೀಡಿದ್ದೇಕೆ ಎಂದು ಪ್ರಶ್ನಿಸಿದೆ.

3 ದಿನ ರಿಹರ್ಸಲ್‌ ಬಳಿಕ ಭಕ್ತರಿಗೆ ತಿಮ್ಮಪ್ಪನ ದರ್ಶನ!

ತಿರುಮಲ ಬೆಟ್ಟದ ಮೇಲೆ ಮೌನಸ್ವಾಮಿ ಮಠ 1870 ಚದರ ಅಡಿ ಹಾಗೂ ವಿಶಾಖ ಶ್ರೀ ಶಾರದಾ ಪೀಠಂಗಳು 4817 ಚದರ ಅಡಿ ಜಾಗವನ್ನು ಅತಿಕ್ರಮಣ ಮಾಡಿಕೊಂಡಿದ್ದವು ಎನ್ನಲಾಗಿತ್ತು. ಈ ಅತಿಕ್ರಮಣ ಸಕ್ರಮಗೊಳಿಸಿ ಕಳೆದ ಡಿಸೆಂಬರ್‌ನಲ್ಲಿ ಟಿಟಿಡಿ (ತಿರುಪತಿ ತಿರುಮಲ ದೇವಸ್ಥಾನ ಸಮಿತಿ) ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಕ್ರಮವಾಗಿ ಚದರ ಅಡಿಗೆ 374 ರು. ಹಾಗೂ 964 ರು.ಗಳನ್ನು ವಿಧಿಸಿ ಸಕ್ರಮಗೊಳಿಸುವಂತೆ ಶಿಫಾರಸಿನಲ್ಲಿ ತಿಳಿಸಲಾಗಿತ್ತು.

ಈ 2 ಮಠಗಳಲ್ಲಿ ಶಾರದಾ ಪೀಠದ ಸ್ವರೂಪಾನಂದರು ಜಗನ್‌ ಅವರ ಆಪ್ತರು.

ಇದೀಗ ಈ ಪ್ರಸ್ತಾವವನ್ನು ಜಗನ್‌ ಸರ್ಕಾರ ಒಪ್ಪಿರುವುದು ವಿವಾದಕ್ಕೀಡಾಗಿದೆ. ಆದರೆ, ‘ಮಠಗಳು ಹಿಂದೂ ಧರ್ಮದ ಪ್ರತಿಪಾದನೆಯಲ್ಲಿ ತೊಡಗಿದ್ದು, ಜಾಗ ಹಂಚಿಕೆಯಲ್ಲಿ ತಪ್ಪಿಲ್ಲ’ ಎಂದು ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ ಸಮರ್ಥಿಸಿದ್ದಾರೆ.