Asianet Suvarna News Asianet Suvarna News

ಹಿಮಾಚಲ ಪ್ರದೇಶದ ಮಾಜಿ ಸಿಎಂ ವೀರಭದ್ರ ಸಿಂಗ್ ನಿಧನ, ಮೋದಿ ಸಂತಾಪ!

* ಹಿಮಾಚಲ ಪ್ರದೇಶದಲ್ಲಿ ಆರು ಬಾರಿ ಮುಖ್ಯಮಂತ್ರಿಯಾಗಿದ್ದ ವೀರಭದ್ರ ಸಿಂಗ್ ಇನ್ನಿಲ್ಲ

* ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ವೀರಭದ್ರ ಸಿಂಗ್ ಬಹು ಅಂಗಾಂಗ ವೈಫಲ್ಯದಿಂದ ನಿಧನ

* ಶಿಮ್ಲಾದ ಇಂಧಿರಾ ಗಾಂಧಿ ಮೆಡಿಕಲ್ ಕಾಲೇಜಿನಲ್ಲಿ ಕೊನೆಯುಸಿರೆಳೆದ ಸಿಂಗ್

Former Himachal Pradesh Chief Minister Virbhadra Singh Dies At 87 pod
Author
Bangalore, First Published Jul 8, 2021, 11:25 AM IST

ಶಿಮ್ಲಾ(ಜು.08): ಹಿಮಾಚಲ ಪ್ರದೇಶದಲ್ಲಿ ಆರು ಬಾರಿ ಮುಖ್ಯಮಂತ್ರಿಯಾಗಿದ್ದ ಹಾಗೂ ಕಾಂಗ್ರೆಸ್‌ ಪಕ್ಷದ ದಿಗ್ಗಜ ನಾಯಕ ವೀರಭದ್ರ ಸಿಂಗ್(87) ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಶಿಮ್ಲಾದ ಇಂಧಿರಾ ಗಾಂಧಿ ಮೆಡಿಕಲ್ ಕಾಲೇಜಿನಲ್ಲಿ ಗುರುವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದಾಗಿ ಅವರು ಮೃತಪಟ್ಟಿರುವುದಾಗಿ ಆಸ್ಪತ್ರೆ ವೈದ್ಯಾಧಿಕಾರಿ ತಿಳಿಸಿದ್ದಾರೆ. ರಾಜ್ಯದಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದೆ.

ಸಂತಾಪ ವ್ಯಕ್ತಪಡಿಸಿದ ಮೋದಿ, ಅಮಿತ್ ಶಾ

ಹಿಮಾಚಲ ಪ್ರದೇಶದ ಮಾಜಿ ಸಿಎಂ ವೀರಭದ್ರ ಸಿಂಗ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದು, ವೀರಭದ್ರ ಸಿಂಗ್‌ರವರದ್ದು ದೀರ್ಘಕಾಲದ ರಾಜಕೀಯ ಬದುಕಾಗಿತ್ತು. ಅವರಿಗೆ ಸಮೃದ್ಧವಾದ ಆಡಳಿತ ಮತ್ತು ಶಾಸಕಾಂಗದ ಅನುಭವವಿತ್ತು. ಹಿಮಾಚಲ ಪ್ರದೇಶದಲ್ಲಿ ಅವರು ಮಹತ್ವಪೂರ್ಣ ಪಾತ್ರ ನಿಭಾಯಿಸಿ, ರಾಜ್ಯದ ಜನತೆ ಸೇವೆ ಮಾಡಿದ್ದಾರೆ. ಅವರ ನಿಧನದಿಂದ ಬಹಳ ದುಃಖವಾಗಿದೆ. ಅವರ ಕುಟುಂಬ ಹಾಗೂ ಬೆಂಬಲಿಗರಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದಿದ್ದಾರೆ.

ಕೊರೋನಾ ಸೋಂಕು ತಗುಲಿದ ಬಳಿಕ ಮ್ಯಾಕ್ಸ್ ಆಸ್ಪತ್ರೆಗೆ ದಾಖಲು

ವೀರಭದ್ರ ಸಿಂಗ್‌ರವರಿಗೆ ಕೊರೋನಾ ಕಾಣಿಸಿಕೊಂಡ ಬಳಿಕ ಏಪ್ರಿಲ್ 13ರಂದು ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಅವರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದರು. ಆದರೆ ಕೆಲ ದಿನಗಳ ಬಳಿಕ ಅವರ ಆರೋಗ್ಯ ಮತ್ತೆ ಹದಗೆಟ್ಟಿದೆ. ಇದಾದ ಬಳಿಕ ಅವರನ್ನು IGMCಗೆ ದಾಖಲಿಸಲಾಗಿತ್ತು.

9 ಬಾರಿ ಶಾಸಕರು ಮತ್ತು 5 ಬಾರಿ ಸಂಸದರು

ವೀರಭದ್ರ ಅವರ ಆರೋಗ್ಯ ಏಪ್ರಿಲ್ 12 ಹಾಗೂ ಇದಾದ ಬಳಿಕ ಜೂನ್ 11ರಂದು ಬಹಳಷ್ಟು ಹದಗೆಟ್ಟಿತ್ತು. ಅವರು ಕಳೆದ ಎರಡು ದಿನಗಳಿಂದ ವೆಂಟಿಲೇಟರ್‌ನಲ್ಲಿದ್ದರು. ಹಿಮಾಚಲ ಪ್ರದೇಶದ ಕಾಂಗ್ರೆಸ್‌ನ ದಿಗ್ಗಜ ನಾಯಕರಾಗಿದ್ದ ಅವರು ಒಂಭತ್ತು ಬಾರಿ ಶಾಸಕ ಹಾಗೂ ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. 

Follow Us:
Download App:
  • android
  • ios