ಕೆಂಪುಕೋಟೆ ದಾಂಧಲೆಗೆ ಸರ್ಕಾರದ ಶಕ್ತಿಗಳೇ ಕಾರಣ: ಕಾಂಗ್ರೆಸ್‌| ಜಂಟಿ ಸದನ ಸಮಿತಿ ತನಿಖೆಗೆ ಅಧೀರ್‌ ಪಟ್ಟು

ನವದೆಹಲಿ(ಫೆ.09): ಕೆಂಪುಕೋಟೆಯಲ್ಲಿ ಇತ್ತೀಚೆಗೆ ರೈತರ ಟ್ರಾಕ್ಟರ್‌ ಪರೇಡ್‌ ವೇಳೆ ನಡೆದ ದಾಂಧೆಲೆಯ ಹಿಂದೆ ಸರ್ಕಾರದೊಳಗಿನ ಶಕ್ತಿಯ ಕೈವಾಡವಿದೆ ಎಂದು ಲೋಕಸಭೆಯ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಚಿನ ಜಂಟಿ ಸದನ ಸಮಿತಿ ರಚನೆ ಮಾಡಿ ಈ ಕುರಿತು ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Add Asianetnews Kannada as a Preferred SourcegooglePreferred

ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಚರ್ಚೆಯಲ್ಲಿ ಪಾಲ್ಗೊಂಡು ಸೋಮವಾರ ಸಂಜೆ ಅವರು ಲೋಕಸಭೆಯಲ್ಲಿ ಮಾತನಾಡಿದರು. ಇದೇ ವೇಳೆ, ಬಾಲಾಕೋಟ್‌ ವಾಯುದಾಳಿಯ ರಹಸ್ಯ ಮಾಹಿತಿ ಪತ್ರಕರ್ತ ಅರ್ನಬ್‌ ಗೋಸ್ವಾಮಿಗೆ ಮೊದಲೇ ಹೇಗೆ ಗೊತ್ತಾಗಿತ್ತು? ಇದು ರಹಸ್ಯ ಮಾಹಿತಿ ಕಾಪಾಡುವ ಕಾಯ್ದೆಯ ಸ್ಪಷ್ಟಉಲ್ಲಂಘನೆ ಎಂದು ಆರೋಪಿಸಿದರು.

ಇದಕ್ಕೂ ಮುನ್ನ ಕೇಂದ್ರದ 3 ನೂತನ ಕೃಷಿ ಕಾಯ್ದೆಗಳ ವಿಚಾರಕ್ಕೆ ಸಂಬಂಧಿಸಿ ಕಳೆದ 5 ದಿನಗಳ ಕಾಲ ಲೋಕಸಭೆ ಕಲಾಪದಲ್ಲಿ ಭಾರೀ ಗದ್ದಲ ಮತ್ತು ಪ್ರತಿಭಟನೆ ನಡೆಸಿದ್ದ ವಿಪಕ್ಷಗಳು, ಸುಗಮ ಕಲಾಪಕ್ಕೆ ಸಹಕರಿಸಬೇಕೆಂಬ ಸಚಿವ ರಾಜನಾಥ್‌ ಸಿಂಗ್‌ ಅವರ ಮನವಿಗೆ ಓಗೊಟ್ಟವು. ಇದರಿಂದಾಗಿ ಸೋಮವಾರದ ಲೋಕಸಭೆ ಕಲಾಪದಲ್ಲಿ ಚರ್ಚೆ ಆರಂಭವಾಯಿತು.