ರೈತ ಪ್ರತಿಭಟನೆಯಿಂದ 50,000 ಕೋಟಿ ನಷ್ಟ!
ರೈತ ಪ್ರತಿಭಟನೆಯಿಂದ 50000 ಕೋಟಿ ನಷ್ಟ| ಕೇಂದ್ರದ ಪ್ರಸ್ತಾವನೆ ಒಪ್ಪಿ ರೈತರು ಪ್ರತಿಭಟನೆ ಹಿಂಪಡೆಯಲಿ| ಒಪ್ಪದಿದ್ದರೆ ರೈತರ ಹಿಂದೆ ಕೆಲ ಶಕ್ತಿಗಳಿವೆ ಎಂದರ್ಥ: ಸಿಎಐಟಿ
ನವದೆಹಲಿ(j.22): ಕೇಂದ್ರದ ನೂತನ 3 ಕೃಷಿ ಕಾಯ್ದೆಗಳ ವಿರುದ್ಧ ಸುಮಾರು 2 ತಿಂಗಳಿನಿಂದ ದಿಲ್ಲಿ ಗಡಿಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಿಂದಾಗಿ ಸುಮಾರು 50 ಸಾವಿರ ಕೋಟಿ ರು. ನಷ್ಟವಾಗಿದೆ ಎಂದು ವಾಣಿಜ್ಯ ಸಂಸ್ಥೆ ಸಿಎಐಟಿ ಹೇಳಿದೆ.
ಈ ಬಗ್ಗೆ ಗುರುವಾರ ಮಾತನಾಡಿದ ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಅವರು, ‘ರೈತರ ಬಿಕ್ಕಟ್ಟು ಶಮನಕ್ಕಾಗಿ ಕೇಂದ್ರ ಸರ್ಕಾರ ಈಗಾಗಲೇ ವಿವಾದಾತ್ಮಕ ಕಾಯ್ದೆಗಳನ್ನು 18 ತಿಂಗಳ ಕಾಲ ಜಾರಿ ಮಾಡಲ್ಲ. ಜೊತೆಗೆ ರೈತ ನಾಯಕರೊಂದಿಗೆ ಜಂಟಿ ಸಮಿತಿ ರಚನೆ ಮಾಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದ್ದು, ರೈತಾಪಿ ವರ್ಗದ ಅನುಕೂಲಕ್ಕಾಗಿ ಸರ್ಕಾರದ ಈ ಪ್ರಸ್ತಾವನೆಯನ್ನು ಒಪ್ಪಿಕೊಂಡು ರೈತರು ತಮ್ಮ ಪ್ರತಿಭಟನೆ ಹಿಂಪಡೆಯಬೇಕು’ ಎಂದಿದ್ದಾರೆ.
ಅಲ್ಲದೆ ಒಂದು ವೇಳೆ ಈ ಪ್ರಸ್ತಾವನೆಯನ್ನು ಒಪ್ಪದೆ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ ಎಂದು ರೈತರು ಹಠಕ್ಕೆ ಬಿದ್ದರೆ, ಈ ಪ್ರತಿಭಟನೆ ಹಿಂದೆ ಕೆಲ ದೇಶ ವಿರೋಧಿ ಶಕ್ತಿಗಳು ಕೆಲಸ ಮಾಡುತ್ತಿವೆ ಎಂದೇ ಅರ್ಥೈಸಬೇಕಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ.