ಕೃಷಿ ಕಾಯ್ದೆ ವಿರೋಧಿಸಿ ರೈತರಿಂದ ಉಪವಾಸ, ಒಲೆ ಹಚ್ಚದಂತೆ ಕರೆ!
ಇಂದು ರೈತರಿಂದ ಸರದಿ ಉಪವಾಸ| 23ರಂದು ಒಲೆ ಹಚ್ಚದಂತೆ ಜನತೆಗೆ ನಾಯಕರ ಕರೆ
ನವದೆಹಲಿ(ಡಿ.21): ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ಕಳೆದ ನಾಲ್ಕು ವಾರಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರು ತಮ್ಮ ಹೋರಾಟವನ್ನು ಮತ್ತಷ್ಟುತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಎಲ್ಲ ಪ್ರತಿಭಟನಾ ಸ್ಥಳಗಳಲ್ಲಿ ಸೋಮವಾರ ಸರದಿ ಉಪವಾಸ ಸತ್ಯಾಗ್ರಹ ನಡೆಸಲಿರುವ ರೈತರು, ಡಿ.25ರಿಂದ 27ರವರೆಗೆ ಹರಾರಯಣದ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಕ್ಕೆ ತಡೆಯೊಡ್ಡುವುದಾಗಿ ಘೋಷಿಸಿದ್ದಾರೆ.
ಸೋಮವಾರ 11 ಮಂದಿ ಪ್ರತಿಭಟನಾ ಸ್ಥಳದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದಾರೆ. ಅದು ಸರದಿಯಾಗಿ ಮುಂದುವರಿಯಲಿದೆ ಎಂದು ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್ ಅವರು ಸಿಂಘೂ ಗಡಿಯಲ್ಲಿ ತಿಳಿಸಿದರು.
ಇದೇ ವೇಳೆ ಮಾತನಾಡಿದ ರೈತ ನಾಯಕ ರಾಕೇಶ್ ಟಿಕಾಯತ್, ಪ್ರತಿಭಟನಾ ನಿರತ ರೈತರು ಡಿ.23ರಂದು ಕಿಸಾನ್ ದಿವಸ ಆಚರಿಸಲಿದ್ದಾರೆ. ಒಂದು ದಿನದ ಮಟ್ಟಿಗೆ ಅಂದು ಅಡುಗೆ ಮಾಡದಂತೆ ಜನತೆಯನ್ನು ಕೋರುತ್ತೇವೆ ಎಂದು ಹೇಳಿದರು.