ಕೃಷಿ ಸಮಿತಿಯ 3 ಸದಸ್ಯರ ಕೈಬಿಡಿ: ಸುಪ್ರೀಂಗೆ ರೈತರ ಅರ್ಜಿ!
ಕೃಷಿ ಕಾಯ್ದೆ ಬಿಕ್ಕಟ್ಟು ಇತ್ಯರ್ಥಕ್ಕೆ ಸುಪ್ರೀಂಕೋರ್ಟ್ ರಚಿಸಿರುವ ಸಮಿತಿ| ಕೃಷಿ ಸಮಿತಿಯ 3 ಸದಸ್ಯರ ಕೈಬಿಡಿ: ಸುಪ್ರೀಂಗೆ ರೈತರ ಅರ್ಜಿ
ನವದೆಹಲಿ(ಜ.17): ಕೃಷಿ ಕಾಯ್ದೆ ಬಿಕ್ಕಟ್ಟು ಇತ್ಯರ್ಥಕ್ಕೆ ಸುಪ್ರೀಂಕೋರ್ಟ್ ರಚಿಸಿರುವ ಸಮಿತಿಯಲ್ಲಿನ ಮೂವರು ಸದಸ್ಯರನ್ನು ತೆಗೆದುಹಾಕುವಂತೆ ರೈತ ಸಂಘಟನೆಯೊಂದು ಸ್ವತಃ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ಸಮಿತಿಯಲ್ಲಿರುವ ನಾಲ್ವರು ಸದಸ್ಯರು ಈಗಾಗಲೇ ಕೃಷಿ ಕಾಯ್ದೆ ಬೆಂಬಲಿಸಿರುವ ಕಾರಣ, ವಿವಾದ ಇತ್ಯರ್ಥ ಮಾಡುವ ನ್ಯಾಯಾಲಯದ ಆಶಯ ಈಡೇರದು ಎಂದು ಭಾರತೀಯ ಕಿಸಾನ್ ಯೂನಿಯನ್ ಲೋಕಶಕ್ತಿ ಸಂಘಟೆನ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದೆ. ಈ ಸಮಿತಿಯಿಂದ ಭಾರತೀಯ ಕಿಸಾನ್ ಒಕ್ಕೂಟದ ಅಧ್ಯಕ್ಷ ಭೂಪಿಂದರ್ ಸಿಂಗ್ ಮಾನ್ ಅವರು ಹಿಂದೆ ಸರಿದಿದ್ದಾರೆ. ಹೀಗಾಗಿ ಸಮಿತಿಯಲ್ಲಿ ಈಗ ಮೂವರು ಸದಸ್ಯರು ಉಳಿದುಕೊಂಡಿದ್ದಾರೆ.
ಇದೇ ವೇಳೆ ಗಣರಾಜ್ಯೋತ್ಸವದಂದು ರೈತರ ಟ್ರ್ಯಾಕ್ಟರ್ ರಾರಯಲಿ ಹಾಗೂ ಯಾವುದೇ ಪ್ರತಿಭಟನೆ ನಡೆಸುವುದಕ್ಕೆ ಆಸ್ಪದ ನೀಡಬಾರದು ಎಂದು ಕೋರಿ ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸುವಂತೆಯೂ ಭಾರತೀಯ ಕಿಸಾನ್ ಯೂನಿಯನ್ ಲೋಕಶಕ್ತಿ ಮನವಿ ಮಾಡಿದೆ. ಕೇಂದ್ರ ಸರ್ಕಾರದ ಅರ್ಜಿ ಜ.18ರಂದು ಸುಪ್ರೀಂಕೋರ್ಟ್ನಲ್ಲಿ ವಿಚಾರಣೆಗೆ ಬರಲಿದೆ.