ಕೊರೋನಾ ಅಬ್ಬರ: ಚುನಾವಣೆ ಫಲಿತಾಂಶದ ಬಳಿಕ ವಿಜಯೋತ್ಸವ ರದ್ದು!
ಚುನಾವಣೆ ಫಲಿತಾಂಶದ ಬಳಿಕ ವಿಜಯೋತ್ಸವ ರದ್ದು| ವಿಜಯೋತ್ಸವಗಳನ್ನು ರದ್ದು ಮಾಡಿ ಆದೇಶ ಹೊರಡಿಸಿದ ಚುನಾವಣಾ ಆಯೋಗ| ಉಪ ಚುನಾವಣೆ ಫಲಿತಾಂಶ ಅಥವಾ ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಬಳಿಕ ವಿಜಯೋತ್ಸವ ರದ್ದು
ನವದೆಹಲಿ(ಏ.27): ದೇಶದಲ್ಲಿ ಕೊರೋನಾತಂಕ ನಡುವೆಯೇ ಪಂಚ ರಾಜ್ಯ ಚುನಾವಣೆ ನಡೆದಿದೆ. ಹೀಗಿರುವಾಗ ಮೇ. 2ರಂದು ಹೊರ ಬೀಳಲಿರುವ ಈ ಚುನಾವಣೆಯ ಫಲಿತಾಂಶ ಇಡೀ ದೇಶವನ್ನೇ ಕಾತುರರನ್ನಾಗಿಸಿದೆ. ಆದರೀಗ ಈ ಫಲಿತಾಂಶದ ಬಗ್ಗೆ ಚುನಾವಣಾ ಆಯೋಗ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದ್ದು, ಚುನಾವಣೆ ಫಲಿತಾಂಶದ ಬಳಿಕ ವಿಜಯೋತ್ಸವ ರದ್ದುಗೊಳಿಸಿದೆ.
ಚುನಾವಣಾ ಆಯೋಗದ ವಿರುದ್ಧ ಕೊಲೆ ಕೇಸ್ - ನ್ಯಾಯಾಲಯ
ಹೌದು ನಿನ್ನೆ, ಸೋಮವಾರವಷ್ಟೇ ಮದ್ರಾಸ್ ಹೈಕೋರ್ಟ್ ಚುನಾವಣಾ ಆಯೋಗದ ವಿರುದ್ಧ ಕೆಂಡಾಮಂಡಲಗೊಂಡಿದೆ. ಎರಡನೇ ಅಲೆ ಅಪ್ಪಳಿಸಲು ಚುನಾವಣೆಗಳೇ ಕಾರಣ ಎಂದಿದ್ದ ಕೋರ್ಟ್ ಆಯೋಗದ ಮೇಲೆ ಕೊಲೆ ಕೇಸ್ ಹಾಕಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಆಯೋಗವು ಉಪ ಚುನಾವಣೆ ಫಲಿತಾಂಶ ಅಥವಾ ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಬಳಿಕ ವಿಜಯೋತ್ಸವ ರದ್ದುಗೊಳಿಸಿದೆ.
ಏನಿದು ಪ್ರಕರಣ?:
ತಮಿಳುನಾಡಿನ ಕರೂರು ವಿಧಾನಸಭಾ ಕ್ಷೇತ್ರದಲ್ಲಿ 77 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮತ ಎಣಿಕೆ ದಿನ ಅಭ್ಯರ್ಥಿಗಳ ಪರ ಏಜೆಂಟ್ಗಳಿಗೆ ಎಣಿಕೆ ಕೇಂದ್ರದಲ್ಲಿ ಸ್ಥಳಾವಕಾಶ ಕಲ್ಪಿಸುವುದು ಕಷ್ಟ. ಇದರಿಂದ ಕೋವಿಡ್ ನಿಯಮಗಳು ಉಲ್ಲಂಘನೆಯಾಗಬಹುದು. ಆದ ಕಾರಣ ಮೇ 2ರಂದು ನಡೆಯಲಿರುವ ಮತ ಎಣಿಕೆಯ ದಿನ ಸೂಕ್ತ ಕೋವಿಡ್ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಣ್ಣಾಡಿಎಂಕೆ ಅಭ್ಯರ್ಥಿ ಹಾಗೂ ಸಾರಿಗೆ ಸಚಿವ ಎಂ.ಆರ್. ವಿಜಯ ಭಾಸ್ಕರ್ ಅವರು ರಿಟ್ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ವೇಳೆ ಆಯೋಗದ ಮೇಲೆ ಹೈಕೋರ್ಟ್ ಮುಗಿಬಿದ್ದಿತು.