ನಿಮ್ಮ ಪುತ್ರ ಸಂಸದನಾಗಿರುವ ನನ್ನ ಪುತ್ರ ಬೆಳೆಯಬಾರದೇ?: ಶಿಂಧೆಗೆ ಉದ್ಧವ್ ಸವಾಲ್
* ಠಾಕ್ರೆ ಹೆಸರು ಕೈಬಿಟ್ಟು ರಾಜಕೀಯ ನಡೆಸಿ: ಶಿಂಧೆಗೆ ಸವಾಲ್
* ನಿಮ್ಮ ಪುತ್ರ ಸಂಸದನಾಗಿರುವ ನನ್ನ ಪುತ್ರ ಬೆಳೆಯಬಾರದೇ?
* ಬಂಡಾಯ ನಾಯಕ ಏಕನಾಥ್ ಶಿಂಧೆ ವಿರುದ್ಧ ವಾಗ್ದಾಳಿ
* ರಾಜಕೀಯ ಹೋರಾಟಕ್ಕೆ ಸಿದ್ಧ: ಉದ್ಧವ್ ಘೋಷಣೆ
* ವರ್ಚುವಲ್ ಆಗಿ ಶಿವಸೈನಿಕರೊಂದಿಗೆ ಉದ್ಧವ್ ಮಾತುಕತೆ
ಮುಂಬೈ(ಜೂ.25): ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿನ ವಿರುದ್ಧ ಹೋರಾಟ ನಡೆಸಲು ಸಿದ್ಧವಾಗಿದ್ದೇನೆ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶುಕ್ರವಾರ ಘೋಷಿಸಿದ್ದಾರೆ.
ಬಂಡಾಯ ನಾಯಕ ಏಕನಾಥ ಶಿಂಧೆಯನ್ನು ತರಾಟೆಗೆ ತೆಗೆದುಕೊಂಡ ಉದ್ಧವ್, ‘ನಿಮ್ಮ ಪುತ್ರ (ಶ್ರೀಕಾಂತ್ ಶಿಂಧೆ) ಲೋಕಸಭಾ ಸಂಸದನಾಗಿರುವಾಗ ನನ್ನ ಪುತ್ರ ಆದಿತ್ಯ ರಾಜಕೀಯದಲ್ಲಿ ಬೆಳೆಯಬಾರದೇ?’ ಎಂದು ಪ್ರಶ್ನಿಸಿದ್ದಾರೆ.
ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ವಚ್ರ್ಯುವಲ್ ಆಗಿ ಮಾತನಾಡಿದ ಠಾಕ್ರೆ, ‘ಸಿಎಂ ಅಧಿಕೃತ ನಿವಾಸ ತೆರವುಗೊಳಿಸಿ ಅಧಿಕಾರದ ಪ್ರಲೋಭನೆಯನ್ನು ತ್ಯಜಿಸಿದ್ದೇನೆ, ಆದರೆ ಹೋರಾಡುವ ಸಂಕಲ್ಪವನ್ನಲ್ಲ. ಶಾಸಕರು ಬಂಡಾಯಗಾರರೊಂದಿಗೆ ಸೇರಲು ಬಯಸಿದ್ದರೆ ನಾವು ಅವರನ್ನು ತಡೆಯುವುದಿಲ್ಲ’ ಎಂದರು.
‘ಪಕ್ಷದ ಶಾಸಕರ ಬಂಡಾಯದ ಬಗ್ಗೆ ತಾವು ತಲೆಕೆಡಿಸಿಕೊಳ್ಳುವುದಿಲ್ಲ. ಮರದ ಹಣ್ಣು, ಹೂವುಗಳನ್ನು ನೀವು ಕಿತ್ತುಕೊಳ್ಳಬಹುದು, ಆದರೆ ಬೇರು ಇನ್ನು ಸ್ಥಿರವಾಗಿದೆ. ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಬಂಡಾಯ ಶಾಸಕರು ರೋಗದಿಂದ ಕೊಳೆತ ಎಲೆಗಳಂತಿದ್ದು, ಅದನ್ನು ಕಿತ್ತೆಸೆಯುವುದೇ ಉತ್ತಮ’ ಎಂದರು.
‘ಸಾಮಾನ್ಯವಾಗಿ ಮುಖ್ಯಮಂತ್ರಿ ನಿಭಾಯಿಸುವ ಪ್ರಮುಖ ನಗರಾಭಿವೃದ್ಧಿ ಖಾತೆಯನ್ನು ನೀಡಿದರೂ ಬಂಡಾಯವೆದ್ದಿದ್ದೀರಾ. ಠಾಕ್ರೆ ಹೆಸರನ್ನು ಬಳಸದೇ ನೀವು ರಾಜಕೀಯದಲ್ಲಿ ಉಳಿಯಬಹುದೇ?’ ಎಂದು ಶಿಂಧೆಗೆ ಸವಾಲೆಸೆದರು. ಶಿವಸೇನೆಯಿಂದ ಠಾಕ್ರೆಯರನ್ನು ಎಂದಿಗೂ ಬೇರೆ ಮಾಡಲು ಸಾಧ್ಯವಿಲ್ಲ ಎಂದರು.
‘ಕಳೆದ ದೀಪಾವಳಿ ಬಳಿಕ ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿದ್ದೇನೆ. ನನಗೆ ನಡೆದಾಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ. ಕಣ್ಣೂ ಸರಿಯಾಗಿ ಕಾಣುತ್ತಿರಲಿಲ್ಲ. ನಾನು ಚೇತರಿಸಿಕೊಳ್ಳುತ್ತಿರುವ ಸಮಯದಲ್ಲಿ ವಿರೋಧಿಗಳು ನನ್ನನ್ನು ಬೀಳಿಸಲು ಇದೇ ಸುಸಮಯ ಎಂದು ದಾಳಿ ನಡೆಸಿದ್ದಾರೆ. ಬಿಜೆಪಿ ಶಿವಸೇನೆಯಲ್ಲಿ ಒಡಕು ತಂದು ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಬೀಳಿಸಲು ಪ್ರಯತ್ನಿಸುತ್ತಿದೆ’ ಎಂದು ಆರೋಪಿಸಿದರು.
‘ಮುಖ್ಯಮಂತ್ರಿ ಪಟ್ಟನನಗೆ ಅಪ್ರಸ್ತುತವಾಗಿದೆ. ಶಿವಸೇನೆ ನಡೆಸಲು ನಾನು ಅರ್ಹನಲ್ಲ ಎಂದು ಶಿವಸೈನಿಕರಿಗೆ ಅನಿಸಿದರೆ ನಾನು ಪಕ್ಷದ ಅಧ್ಯಕ್ಷ ಸ್ಥಾನವನ್ನು ಬಿಡಲು ಸಿದ್ಧನಿದ್ದೇನೆ’ ಎಂದರು. ಈ ವೇಳೆ ಪಕ್ಷದ ಕಾರ್ಯಕರ್ತರು ಉದ್ಧವ್ ಪರವಾಗಿ ಘೋಷಣೆ ಕೂಗಿ ಬೆಂಬಲ ಸೂಚಿಸಿದ್ದಾರೆ