5 ಸಮನ್ಸ್ಗೆ ಸಿಎಂ ಅರವಿಂದ್ ಕೇಜ್ರಿವಾಲ್ ಗೈರು, ಹೈಕೋರ್ಟ್ ಮೆಟ್ಟಿಲೇರಿದ ಇಡಿ!
ದೆಹಲಿ ಅಬಕಾರಿ ಹಗರಣ ಕುರಿತು ತನಿಖೆಗೆ ಇಡಿ ಅಧಿಕಾರಿಗಳು ಸಿಎಂ ಕೇಜ್ರಿವಾಲ್ಗೆ ಒಂದಲ್ಲ, ಎರಡಲ್ಲ 5 ಬಾರಿ ಸಮನ್ಸ್ ನೀಡಿದ್ದಾರೆ. ಆದರೆ ಐದು ಬಾರಿಯೂ ಕೇಜ್ರಿವಾಲ್ ಗೈರಾಗಿದ್ದಾರೆ. ಇಡಿ ಸಮನ್ಸ್ಗೆ ಉತ್ತರಿಸಿದ ಕೇಜ್ರಿವಾಲ್ ವಿರುದ್ಧ ಇಡಿ ಅಧಿಕಾರಿಗಳು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ನವದೆಹಲಿ(ಫೆ.03) ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ಗೆ ಸಂಕಷ್ಟ ಹೆಚ್ಚಾಗಿದೆ. ದೆಹಲಿ ಅಬಕಾರಿ ಹಗರಣದಲ್ಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೆ ಇದುವರೆಗೂ ಜಾಮೀನು ಸಿಕ್ಕಿಲ್ಲ. ಅತೀ ದೊಡ್ಡ ಹಗರಣದ ತನಿಖೆ ನಡೆಸುತ್ತಿರುವ ಇಡಿ ಸಿಎಂ ಅರವಿಂದ್ ಕೇಜ್ರಿವಾಲ್ಗೂ ಸಮನ್ಸ್ ನೀಡಿದೆ. ಅಬಕಾರಿ ನೀತಿ ಹಗರಣದ ಕುರಿತು ಕೆಲ ಮಾಹಿತಿಯನ್ನು ಪಡೆದುಕೊಳ್ಳಲು 5 ಬಾರಿ ಕೇಜ್ರಿವಾಲ್ಗೆ ಸಮನ್ಸ್ ನೀಡಲಾಗಿದೆ. ಆದರೆ ಕೇಜ್ರಿವಾಲ್ ಐದೂ ಬಾರಿಯೂ ವಿಚಾರಣೆಗೆ ಹಾಜರಾಗದೆ ಅಸಂವಿಧಾನಿಕ, ಕಾನೂನು ಬಾಹಿರ ಆರೋಪ ಮಾಡಿದ್ದಾರೆ. ಇದೀಗ ಬೇರೆ ದಾರಿ ಕಾಣದ ಇಡಿ ಅಧಿಕಾರಿಗಳು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ದೆಹಲಿ ಅಬಕಾರಿ ನೀತಿ ಅಕ್ರಮದ ಕುರಿತು ಇಡಿ ಅಧಿಕಾರಿಗಳು ಹಲವು ಮಾಹಿತಿ ಕಲೆ ಹಾಕಿದ್ದಾರೆ. ಮನೀಶ್ ಸಿಸೋಡಿಯಾ ಸೇರಿದಂತೆ ಹಲವರನ್ನು ಬಂಧಿಸಿದ್ದಾರೆ. ಈ ವಿಚಾರಣೆ ಮುಂದುವರಿದ ಭಾಗವಾಗಿ ಸಿಎಂ ಅರವಿಂದ್ ಕೇಜ್ರಿವಾಲ್ ವಿಚಾರಣೆ ನಡೆಸಲು ಇಡಿ ಅಧಿಕಾರಿಗಳು ಸಮನ್ಸ್ ನೀಡಿದ್ದರು. 2023ರ ನವೆಂಬರ್ 2 ರಂದು ಮೊದಲ ಸಮನ್ಸ್ ನೀಡಲಾಗಿತ್ತು. ಆದರೆ ಇಡಿ ಸಮನ್ಸ್ ಕಾನೂನು ಬಾಹಿರ ಎಂದು ಆರೋಪಿಸಿ ಕೇಜ್ರಿವಾಲ್ ವಿಚಾರಣೆಯಿಂದ ಗೈರಾಗಿದ್ದರು.
ಜಾರಿ ನಿರ್ದೇಶನಾಲಯದ 5ನೇ ಸಮನ್ಸ್ಗೂ ಕ್ಯಾರೇ ಅನ್ನದ ಕೇಜ್ರಿವಾಲ್
ಮೊದಲ ಸಮನ್ಸ್ ಬಳಿಕ 2023ರ ಡಿಸೆಂಬರ್ 21, 2024ರ ಜನವರಿ 3, ಜನವರಿ 19 ಹಾಗೂ ಫೆಬ್ರವರಿ 2 ರಂದು ಒಟ್ಟು ಐದು ಸಮನ್ಸ್ ನೀಡಲಾಗಿದೆ. ಐದೂ ಬಾರಿಯೂ ಕಾನೂನು ಬಾಹಿರ ಆರೋಪ ಮಾಡಿದ ಸಿಎಂ ಕೇಜ್ರಿವಾಲ್ ವಿಚಾರಣೆಗೆ ಗೈರಾಗಿದ್ದಾರೆ. ಸಿಎಂ ಕೇಜ್ರಿವಾಲ್ ಯಾವುದೇ ತಪ್ಪು ಮಾಡಿಲ್ಲ. ಅವರನ್ನು ಬಂಧಿಸಲು ಇ.ಡಿ ಹೊಂಚು ಹಾಕಿದೆ ಹಾಗೂ ಇದಕ್ಕೆ ಬಿಜೆಪಿಯ ಕುಮ್ಮಕ್ಕಿದೆ. ಕೇಜ್ರಿವಾಲ್, ವಿಚಾರಣೆಗೆ ಹಾಜರಾಗುವುದಿಲ್ಲ’ ಎಂದು ಆಪ್ ನಾಯಕರು ಪದೇ ಪದೇ ಕಿಡಿ ಕಾರಿದ್ದರು. ಈ ಬೆಳವಣಿಗೆ ಬಳಿಕ ಇದೀಗ ಇಡಿ ಹೈಕೋರ್ಟ್ ಮೆಟ್ಟಿಲೇರಿದೆ. ಫೆಬ್ರವರಿ 7 ರಂದು ಈ ಕುರಿತು ಹೈಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ.
ಇಡಿ ಅಧಿಕಾರಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರೆ, ಇತ್ತ ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ಅರವಿಂದ್ ಕೇಜ್ರಿವಾಲ್ ಮನೆಗೆ ತೆರಳಿ ನೋಟಿಸ್ ನೀಡಿದ್ದಾರೆ. ಇತ್ತೀಚೆಗೆ ಅರವಿಂದ್ ಕೇಜ್ರಿವಾಲ್, ಬಿಜೆಪಿ ನಾಯಕರು, ಆಪ್ ಶಾಸಕರನ್ನು ಖರೀದಿಸಲು 25 ಕೋಟಿ ರೂಪಾಯಿ ಆಮಿಷ ಒಡ್ಡಿದೆ ಅನ್ನೋ ಆರೋಪ ಮಾಡಿದ್ದರು. ಈ ಆರೋಪದ ಕುರಿತು ಮಾಹಿತಿ ಒದಗಿಸಲು ನೋಟಿಸ್ ನೀಡಲಾಗಿದೆ.
ಆಪ್ ಶಾಸಕರ ಖರೀದಿಸಲು ಬಿಜೆಪಿಯಿಂದ ತಲಾ 25 ಕೋಟಿ ರೂ. ಆಫರ್: ಸಿಎಂ ಕೇಜ್ರಿವಾಲ್ ಆರೋಪ