ಆಯುರ್ವೇದ ಅಗ್ರಗಣ್ಯ ಪದ್ಮಶ್ರೀ ಪಿಕೆ ವಾರಿಯರ್ ಇನ್ನಿಲ್ಲ
* ಪ್ರಸಿದ್ಧ ಆಯುರ್ವೇದ ವೈದ್ಯ ಪಿ.ಕೆ. ವಾರಿಯರ್ ಇನ್ನಿಲ್ಲ
* ನೂರು ವರ್ಷಗಳ ತುಂಬು ಜೀವನ
* ಆಯುರ್ವೇದಕ್ಕೆ ಇಡೀ ಜೀವನ ಮುಡಿಪು
* ಕೊರೋನಾ ವೈರಸ್ ಗೆದ್ದು ಬಂದಿದ್ದರು
ಮಲಪ್ಪುರಂ(ಜು. 10) ಪ್ರಸಿದ್ಧ ಆಯುರ್ವೇದ ವೈದ್ಯ, ಕೊಟ್ಟಕ್ಕಲ್ ಆಯುರ್ವೇದ ಶಾಲೆಯ ಟ್ರಸ್ಟಿ ಪಿ.ಕೆ. ವಾರಿಯರ್ ನಿಧನರಾಗಿದ್ದಾರೆ. ಜೂನ್ 8 ರಂದು ಅವರಿಗೆ 100 ವರ್ಷ ತುಂಬಿ ಶತಾಯುಷಿಯಾಗಿದ್ದರು. ಶನಿವಾರ ಮಧ್ಯಾಹ್ನ 12. 30ರಲ್ಲಿ ಕೊಟ್ಟಕ್ಕಲ್ ನಲ್ಲಿ ಅವರು ಕೊನೆಯುಸಿರೆಳೆದರು.
ವಯೋ ಸಹಜ ಅನಾರೋಗ್ಯದಿಂದಾಗಿ ಕೊಟ್ಟಕ್ಕಲ್ ನ ಆರ್ಯ ವೈದ್ಯ ಶಾಲೆ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೊರೋನಾ ವೈರಸ್ ನ್ನು ಗೆದ್ದು ಬಂದಿದ್ದರು.
ಪನ್ನಿಯಂಪಿಲ್ಲಿ ಕೃಷ್ಣನ್ ಕುಟ್ಟಿ ವಾರಿಯರ್ ಆಯುರ್ವೇದ ಶಾಲೆಯ ಸಂಸ್ಥಾಪಕ ವೈದ್ಯರತ್ನ ಪಿಎಸ್ ವಾರಿಯಸ್ ಅವರ ಸೋದರಳಿಯ. ಇಡೀ ತಮ್ಮ ಜೀವನವನ್ನು ಆಯುರ್ವೇದ ಸಂಶೋಧನೆಗೆ ತೊಡಗಿಸಿದ್ದರು. 1999ರಲ್ಲಿ ಪದ್ಮಶ್ರಿ ಹಾಗೂ ಪದ್ಮ ವಿಭೂಷಣ(2010) ಗೌರವಕ್ಕೆ ಪಾತ್ರವಾಗಿದ್ದರು. ಪಿ.ಕೆ. ವಾರಿಯರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್, ನಟ ಮೋಹನ್ ಲಾಲ್ ಸಂತಾಪ ತಿಳಿಸಿದ್ದಾರೆ.
ವಾರಿಯರ್ ಜೀವನ ಮತ್ತು ಸಾಧನೆ; 1921ರ ಜೂನ್ 5ರಂದು ಪನ್ನಿಯಂಪಿಲ್ಲಿ ಕೃಷ್ಣಂಕುಟ್ಟಿ ವಾರಿಯರ್ ಅವರು ಜನಿಸಿದರು. ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಪ್ರಾವೀಣ್ಯ ಗಳಿಸಿದ್ದ ವಾರಿಯರ್ ವಿಶ್ವದೆಲ್ಲೆಡೆ ಜ್ಞಾನ ಹಂಚಿದರು.
20ನೇ ವಯಸ್ಸಿಗೆ ಕೊಟ್ಟಕ್ಕಲ್ ಆರ್ಯವೈದ್ಯ ಶಾಲೆಗೆ ಸೇರಿದರು. ಭಾರತದ ಸ್ವತಂತ್ರ ಹೋರಾಟದಲ್ಲಿಯೂ ವಾರಿಯರ್ ಭಾಗವಹಿಸಿದ್ದರು. ನಂತರ ತಮ್ಮ 24ನೇ ವಯಸ್ಸಿನಲ್ಲಿ ಕೊಟ್ಟಕ್ಕಲ್ ಆರ್ಯ ವೈದ್ಯ ಶಾಲೆಗೆ ಟ್ರಸ್ಟಿ ಆಗಿ ಸೇರಿದರು. ವಾರಿಯರ್ ಅವರು ಕೇರಳದ ಆಯುರ್ವೇದದ ಪಿತಾಮಹರಾಗಿದ್ದರು ಎಂದು ಸಿಎಂ ಪಿಣರಾಯಿ ವಿಜಯನ್ ಸ್ಮರಿಸಿದ್ದಾರೆ.