* ವಾಹನಗಳ ಮೇಲಿದ್ದ ‘ಪವರ್‌ ಸ್ಟಾರ್‌’ ಪುನೀತ್‌ ರಾಜಕುಮಾರ್‌ ಫೋಟೋ* ಫೋಟೋ ವಿವಾದದ ಬೆನ್ನಲ್ಲೇ ಟಿಟಿಡಿ ಮಹತ್ವದ ಘೋಷಣೆ* ಹಲವು ದಶಕಗಳಿಂದ ಈ ನಿಯಮ ಜಾರಿಯಲ್ಲಿದೆ* ಪುನೀತ್‌ ಫೋಟೋ ವಿವಾದ ಹಿನ್ನೆಲೆಯಲ್ಲಿ ಸ್ಪಷ್ಟನೆ

ಹೈದರಾಬಾದ್‌(ಮೇ.09): ತಿರುಮಲಕ್ಕೆ ಕರ್ನಾಟಕದಿಂದ ತೆರಳಿದ್ದ ವಾಹನಗಳ ಮೇಲಿದ್ದ ‘ಪವರ್‌ ಸ್ಟಾರ್‌’ ಪುನೀತ್‌ ರಾಜಕುಮಾರ್‌ ಫೋಟೋಗಳನ್ನು ತಿರುಮಲ- ತಿರುಪತಿ ದೇವಸ್ಥಾನ (ಟಿಟಿಡಿ) ಮಂಡಳಿ ಸಿಬ್ಬಂದಿ ತೆಗೆಸಿದ್ದು ಭಾರಿ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ, ಈ ಕುರಿತು ಟಿಟಿಡಿ ಸ್ಪಷ್ಟನೆ ನೀಡಿದೆ. ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಬರುವ ಭಕ್ತಾದಿಗಳು ಯಾವುದೇ ಧರ್ಮದ ಚಿಹ್ನೆ, ದೇವರು, ವ್ಯಕ್ತಿ, ರಾಜಕೀಯ ನಾಯಕರ ಫೋಟೋ, ಪಕ್ಷದ ಧ್ವಜದಂತಹ ವಸ್ತುಗಳನ್ನು ತರುವಂತಿಲ್ಲ ಎಂದು ಹೇಳಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ಈ ನಿಯಮವನ್ನು ಹಲವು ದಶಕಗಳಿಂದಲೂ ಟಿಟಿಡಿ ಜಾರಿ ಮಾಡಿಕೊಂಡು ಬಂದಿದೆ. ಆದರೆ ಇದರ ಬಗ್ಗೆ ಅರಿವಿಲ್ಲದ ಕೆಲವು ಭಕ್ತಾದಿಗಳು ತಮ್ಮ ಧರ್ಮ, ನೆಚ್ಚಿನ ರಾಜಕೀಯ ನಾಯಕರು ಹಾಗೂ ಸೆಲೆಬ್ರಿಟಿಗಳ ಫೋಟೋಗಳು, ರಾಜಕೀಯ ಪಕ್ಷಗಳ ಧ್ವಜಗಳನ್ನು ವಾಹನಗಳಿಗೆ ಕಟ್ಟಿಕೊಂಡು ಬರುತ್ತಿದ್ದಾರೆ’ ಎಂದು ಟಿಟಿಡಿ ಹೇಳಿಕೆ ಬಿಡುಗಡೆ ಮಾಡಿದೆ.

‘ತಿರುಮಲ ಪ್ರವೇಶಕ್ಕೂ ಮುನ್ನ ಅಲಿಪಿರಿಯಲ್ಲಿ ವಾಹನ ತಪಾಸಣೆ ನಡೆಸುವ ಸಿಬ್ಬಂದಿ ಈ ನಿಯಮವನ್ನು ವಾಹನಗಳಲ್ಲಿ ಇರುವವರಿಗೆ ತಿಳಿಸುತ್ತಾರೆ. ಸ್ಟಿಕ್ಕರ್‌ ಹಾಗೂ ಧ್ವಜಗಳು ಟಿಟಿಡಿ ನಿಯಮಗಳಿಗೆ ವಿರುದ್ಧವಾಗಿರುವುದರಿಂದ ಅವನ್ನು ತೆಗೆಯಲು ಸೂಚನೆ ನೀಡುತ್ತಾರೆ. ಹೀಗಾಗಿ ದೇಗುಲದ ಈ ಮಹತ್ವದ ನಿಯಂತ್ರಣವನ್ನು ಭಕ್ತಾದಿಗಳು ಗಮನದಲ್ಲಿಟ್ಟುಕೊಳ್ಳಬೇಕು. ಆಡಳಿತ ಮಂಡಳಿ ಜತೆ ಸಹಕರಿಸಬೇಕು’ ಎಂದು ಮನವಿ ಮಾಡಿದೆ.

ಕೆಲ ವಾರಗಳ ಹಿಂದೆ ಬೆಂಗಳೂರಿನಿಂದ ತಿರುಮಲಕ್ಕೆ ಹೋಗುತ್ತಿದ್ದ ವಾಹನಗಳ ಮೇಲಿದ್ದ ಪುನೀತ್‌ ಭಾವಚಿತ್ರವನ್ನು ಟಿಟಿಡಿ ಸಿಬ್ಬಂದಿ ತೆಗೆಸಿದ್ದರು. ಇದು ಅಪ್ಪು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿ, ಬೆಂಗಳೂರಿನ ಟಿಟಿಡಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿತ್ತು