ಡಿಎಂಕೆ ಸಂಸ್ಥಾಪಕ ಅಣ್ಣಾದೊರೆ ಪ್ರತಿಮೆಗೆ ಬೆಂಕಿ!
ತಮಿಳುನಾಡು ವಿಧಾನಸಭಾ ಚುನಾವಣೆಗೆ ಕೆಲವೇ ದಿನ| ಡಿಎಂಕೆ ಸಂಸ್ಥಾಪಕ, ತಮಿಳುನಾಡಿನ ಮೊದಲ ಸಿಎಂ ಸಿ.ಎನ್.ಅಣ್ಣಾದೊರೆ ಅವರ ಪ್ರತಿಮೆಗೆ ಬೆಂಕಿ
ಚೆನ್ನೈ(ಏ.03): ತಮಿಳುನಾಡು ವಿಧಾನಸಭಾ ಚುನಾವಣೆಗೆ ಕೆಲವೇ ದಿನ ಇರುವಾಗಲೇ ಡಿಎಂಕೆ ಸಂಸ್ಥಾಪಕ, ತಮಿಳುನಾಡಿನ ಮೊದಲ ಸಿಎಂ ಸಿ.ಎನ್.ಅಣ್ಣಾದೊರೆ ಅವರ ಪ್ರತಿಮೆಗೆ ಬೆಂಕಿ ಇಟ್ಟು, ಧ್ವಂಸಗೊಳಿಸಿರುವ ಘಟನೆ ಶುಕ್ರವಾರ ಇಲ್ಲಿನ ಕಲ್ಲಾಕುರಿಚಿಯಲ್ಲಿ ನಡೆದಿದೆ.
ಅಪರಿಚಿತ ಕಿಡಿಗೇಡಿಗಳು ಪ್ರತಿಮೆಗೆ ಬೆಂಕಿ ಇಟ್ಟಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಸಿಸಿಟೀವಿ ಪರಿಶೀಲಿಸಿ ತಪ್ಪಿತಸ್ಥರಿಗಾಗಿ ಬಲೆ ಬೀಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟ್ಯಾಲಿನ್, ತಮಿಳುನಾಡಿನಲ್ಲಿ ಹಿಂಸಾಚಾರವನ್ನು ಉತ್ತೇಜಿಸುವವರಿಗೆ ಜನರೇ ಶಿಕ್ಷೆ ನೀಡುತ್ತಾರೆ.
ಇಲ್ಲಿ ಪೆರಿಯಾರ್, ಅಣ್ಣಾ ಮತ್ತು ಎಂಜಿಆರ್ ಅವರ ಪ್ರತಿಮೆಯನ್ನು ಅಪವಿತ್ರಗೊಳಿಸಲಾಗುತ್ತಿದೆ. ಇಂಥ ದುರ್ವರ್ತನೆಯನ್ನು ನಿಯಂತ್ರಿಸದ ಸರ್ಕಾರಕ್ಕೆ ಇದು ನಾಚಿಕೆಗೇಡಿನ ವಿಷಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.