Asianet Suvarna News Asianet Suvarna News

Diwali 2021: ಮಕ್ಕಳು ಪಟಾಕಿ ಸಿಡಿಸುವಾಗ ತಡೆಯದಿರಿ: ಸದ್ಗುರು

* ವಾಯು ಮಾಲಿನ್ಯದ ಚಿಂತೆ ಮಕ್ಕಳಲ್ಲಿ ಪಟಾಕಿ ಸಿಡಿಸುವ ಸಂಭ್ರಮ ಹಾಗೂ ಉತ್ಸಾಹವನ್ನು ಕುಗ್ಗಿಸದಿರಲಿ

* ಮಕ್ಕಳಿಗೆ ಪಟಾಕಿ ಸಿಡಿಸುವ ಖುಷಿಯನ್ನು ಆಸ್ವಾದಿಸಲು ಅವಕಾಶ ನೀಡುವಂತೆ ಒತ್ತಾಯ

* ದೀಪಾವಳಿ ಸಂದರ್ಭದಲ್ಲಿ ಸದ್ಗುರು ಮಾತುಗಳು

Diwali 2021 Sadhguru urges everyone not to prevent kids from bursting crackers pod
Author
Bangalore, First Published Nov 3, 2021, 3:17 PM IST

ನವದೆಹಲಿ(ನ.03): ದೀಪಾವಳಿ ಸಂದರ್ಭದಲ್ಲಿ ಅಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ (Sadhguru Jaggi Vasudev) ಮಾತನಾಡುತ್ತಾ ವಾಯು ಮಾಲಿನ್ಯ (Air Pollution) ಕುರಿತಾದ ಚಿಂತೆ ಮಕ್ಕಳಲ್ಲಿ ಪಟಾಕಿ ಸಿಡಿಸುವ ಸಂಭ್ರಮ ಹಾಗೂ ಉತ್ಸಾಹವನ್ನು ಕುಗ್ಗಿಸಬಾರದೆಂದು ಹೇಳಿದ್ದಾರೆ. ಪಟಾಕಿ (Firecrackers) ಬಳಕೆ ವಿಚಾರದಲ್ಲಿ ದೇಶದಲ್ಲಿ ಎರಡು ಬಗೆಯ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಸಂದರ್ಭದಲ್ಲೇ ಸದ್ಗುರು ಇಂತಹ ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ಬುಧವಾರ ಟ್ವಿಟರ್‌ನಲ್ಲಿ (Twitter) ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಸದ್ಗುರು ಹಿರಿಯರು ತಮ್ಮ ಮಕ್ಕಳಿಗೆ ಪಟಾಕಿ ಸಿಡಿಸುವ ಖುಷಿಯನ್ನು ಆಸ್ವಾದಿಸಲು ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ. ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಅಪ್‌ಲೋಡ್ ಮಾಡಿದ ವೀಡಿಯೊದಲ್ಲಿ ತಾನು ಹಲವು ವರ್ಷಗಳಿಂದ ಪಟಾಕಿಯನ್ನು ಸಿಡಿಸಿಲ್ಲ ಎಂಬ ಮಾತುಗಳನ್ನೂ ಹೇಳಿದ್ದಾರೆ.

ತಾನು ಚಿಕ್ಕವರಿದ್ದಾಗ ಈ ಪಟಾಕಿ ಸಿಡಿಸುವ ವಿಚಾರ ತನ್ನ ಪಾಲಿಗೆ ಅದೆಷ್ಟು ಮಹತ್ವ ಪಡೆದಿತ್ತು ಎಂಬುವುದನ್ನೂ ಸದ್ಗುರು ತಿಳಿಸಿದ್ದಾರೆ. ಹಳೇ ದಿನಗಳನ್ನು ನೆನಪಿಸಿಕೊಂಡಿರುವ ಅವರು ಹೇಗೆ ದೀಪಾವಳಿ ಸಂದರ್ಭದಲ್ಲಿ ಹೇಗೆ ಪಟಾಕಿಗಳನ್ನು ಹಚ್ಚಿ ಸಂಭ್ರಮಿಸುತ್ತಿದ್ದೆವು ಹಾಗೂ ಹಬ್ಬ ಮುಗಿದ ಎರಡು ತಿಂಗಳವರೆಗೆ ಪಟಾಕಿಗಳನ್ನು ಸಂಗ್ರಹಿಸಿಡುತ್ತಿದ್ದೆವು ಎಂಬುವುದನ್ನೂ ವಿವರಿಸಿದ್ದಾರೆ.

ಇನ್ನು ಇದೇ ವೇಳೆ ಸರ್ವರಿಗೂ ದೀಪಾವಳಿಯ ಶುಭಾಶಯಗಳನ್ನು (Diwali Wishes) ಕೋರಿರುವ ಸದ್ಗುರು ಸಂತೋಷ, ಪ್ರೀತಿ ಮತ್ತು ಪ್ರಜ್ಞೆಯಿಂದ ಬೆಳಗುವುದು ಅದೆಷ್ಟು ಅಗತ್ಯ, ಇಲ್ಲವಾದಲ್ಲಿ ಬಿಕ್ಕಟ್ಟಿನ ಸಮಯದಲ್ಲಿ ಕತ್ತಲೆಯಲ್ಲಿ ಮುಳುಗುವ ಸಾಧ್ಯತೆ ಇದೆ ಎಂದೂ ಎಚ್ಚರಿಸಿದ್ದಾರೆ . ಈ ದೀಪಾವಳಿಯಲ್ಲಿ ಜನರು ತಮ್ಮಲ್ಲಿರುವ ಮಾನವೀಯತೆ ಎಂಬ ದೀಪವನ್ನು ಗರಿಷ್ಠ ಮಟ್ಟದಲ್ಲಿ ಬೆಳಗಿಸಬೇಕು ಎಂದೂ ಹೇಳಿದ್ದಾರೆ.

ಈ ಹಿಂದೆ, ಪಶ್ಚಿಮ ಬಂಗಾಳದ ಕೊಲ್ಕತ್ತಾ ಹೈಕೋರ್ಟ್ (West Bengal's Calcutta High Court) ಹೊರಡಿಸಿದ್ದ ಪಟಾಕಿಗಳ ಮೇಲಿನ ವ್ಯಾಪಕ ನಿಷೇಧವನ್ನು ಸುಪ್ರೀಂ ಕೋರ್ಟ್ (Supreme Court) ರದ್ದುಗೊಳಿಸಿದೆ. "ಅತ್ಯುತ್ತಮ" ಅಥವಾ "ಮಧ್ಯಮ" ಗಾಳಿಯ ಗುಣಮಟ್ಟವಿರುವ ಪ್ರದೇಶಗಳಲ್ಲಿ ಪ್ರಮಾಣೀಕೃತ ಹಸಿರು ಕ್ರ್ಯಾಕರ್‌ಗಳನ್ನು (Green Crackers) ಮಾರಾಟ ಮಾಡಬಹುದು ಮತ್ತು ಸಿಡಿಯಬಹುದು ಎಂದು ನ್ಯಾಯಾಲಯ ಆದೇಶಿಸಿದೆ. ಸುಪ್ರೀಂ ಕೋರ್ಟ್ ರಜಾಕಾಲದ ಪೀಠ ಈ ಆದೇಶ ಹೊರಡಿಸಿದೆ. ಹಸಿರು ಪಟಾಕಿ ಸೇರಿದಂತೆ ಕೊಲ್ಕತ್ತಾ ಹೈಕೋರ್ಟ್‌ನ ವ್ಯಾಪಕ ನಿಷೇಧವನ್ನು ಪ್ರಶ್ನಿಸಿದ ಎರಡು ಅರ್ಜಿಗಳನ್ನು ಸಮಿತಿಯು ಪರಿಗಣಿಸಿದೆ. ಇನ್ನು ಈ ಅರ್ಜಿಯನ್ನು ಪಟಾಕಿ ಮಾರಾಟಗಾರರು ಸಲ್ಲಿಸಿದ್ದರೆಂಬುವುದು ಉಲ್ಲೇಖನೀಯ.

ಇನ್ನು ಬುಧವಾರ, ರಾಷ್ಟ್ರ ರಾಜಧಾನಿ ದೆಹಲಿಯ (Delhi) ಗಾಳಿಯ ಗುಣಮಟ್ಟ ಭಾರೀ ಹದಗೆಟ್ಟಿದೆ, ಈ ಋತುವಿನಲ್ಲಿ ಮೊದಲ ಬಾರಿಗೆ "ಅತ್ಯಂತ ಕಳಪೆ" ವರ್ಗಕ್ಕೆ ಕುಸಿದೊದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ, ಮಂಗಳವಾರ ನಗರದ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 303 ಆಗಿತ್ತು.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಿಡಿಸುವ ಪಟಾಕಿಗಳಿಂದಾಗುವ ವಾಯು ಮಾಲಿನ್ಯವನ್ನು ತಡೆಗಟ್ಟಲು ಈಗಾಗಲೇ ಹಲವು ರಾಜ್ಯಗಳು ಕಠಿಣ ಕ್ರಮಗಳನ್ನು ಕೈಗೊಂಡಿವೆ. ಹಲವು ರಾಜ್ಯಗಳು ಈಗಾಗಲೇ ಪಟಾಕಿಗೆ ನಿಷೇಧ ಹೇರಿ ಮಾರ್ಗಸೂಚಿಗಳನ್ನು ಕೂಡ ಬಿಡುಗಡೆ ಮಾಡಿವೆ.  ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿ ಸೆಪ್ಟೆಂಬರ್ 29 ರಂದೆ ಪಟಾಕಿಗೆ ನಿಷೇಧ ಹೇರಿತ್ತು. ಜನವರಿ 1, 2022ರ ವರೆಗೆ ದೆಹಲಿಯಲ್ಲಿ ಪಟಾಕಿ ನಿಷೇಧ(Ban) ಇರಲಿದೆ. ಜತೆಗೆ ಪಂಜಾಬ್ (Punjab) ಸರ್ಕಾರ ಕೂಡ ಪಟಾಕಿಗೆ ನಿಷೇಧ ಹೇರಿದೆ. ಕೇವಲ 2 ಗಂಟೆ ಹಸಿರು ಪಟಾಕಿಗೆ ಹೊಡೆಯಲು ಅವಕಾಶ ನೀಡಲಾಗಿದೆ. ಆದರೆ ಹಸಿರು ಪಟಾಕಿ ಬಿಟ್ಟು ಇತರ ಪಟಾಕಿಗೆ ಅವಕಾಶವಿಲ್ಲ. ರಾತ್ರಿ 8 ಗಂಟೆಯಿಂದ 10 ಗಂಟೆ ವರೆಗಿ ಪಟಾಕಿ ಹೊಡೆಯಲು ಪಂಜಾಬ್ ಸರ್ಕಾರ ಅವಕಾಶ ನೀಡಿದೆ. ಕ್ರಿಸ್ಮಸ್ ಹಬ್ಬ ಹಾಗೂ ಹೊಸ ವರ್ಷಕ್ಕೆ ರಾತ್ರಿ 11.55 ರಿಂದ 12.30ರ ವರೆಗೆ 35 ನಿಮಿಷಗಳ ಕಾಲ ಪಟಾಕಿಗೆ ಅವಕಾಶ ನೀಡಲಾಗಿದೆ.  

Follow Us:
Download App:
  • android
  • ios