* ಮಹಾರಾಷ್ಟ್ರದಲ್ಲಿ ಮರಳಿ ಅಧಿಕಾರಕ್ಕೆ ಬಂದಿದ್ದಕ್ಕೆ ಬಿಜೆಪಿ * ಬಿಜೆಪಿ ಆಯೋಜಿಸಿದ್ದ ಸಂಭ್ರಮಾಚರಣೆಗೆ ಉಪಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್‌ ಗೈರು* ಫಡ್ನವೀಸ್‌ ಅವರ ಈ ನಡೆ ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೊಮ್ಮೆ ಕುತೂಹಲ

ಮುಂಬೈ:(ಜು.2): ಮಹಾರಾಷ್ಟ್ರದಲ್ಲಿ ಮರಳಿ ಅಧಿಕಾರಕ್ಕೆ ಬಂದಿದ್ದಕ್ಕೆ ಬಿಜೆಪಿ ಆಯೋಜಿಸಿದ್ದ ಸಂಭ್ರಮಾಚರಣೆಗೆ ಉಪಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್‌ ಗೈರುಹಾಜರಾಗಿದ್ದಾರೆ. ಫಡ್ನವೀಸ್‌ ಅವರ ಈ ನಡೆ ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೊಮ್ಮೆ ಕುತೂಹಲ ಕೆರಳಿಸಿದೆ.

ದಕ್ಷಿಣ ಮುಂಬೈನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಎರಡೂವರೆ ವರ್ಷಗಳ ಬಳಿಕ ಮತ್ತೆ ಅಧಿಕಾರಕ್ಕೆ ಮರಳಿದ ಖುಷಿಯನ್ನು ಆಚರಿಸಲು ಸಂಭ್ರಮಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಗುರುವಾರ ಮಧ್ಯಾಹ್ನ ನಾನು ಏಕನಾಥ್‌ ಶಿಂಧೆ ಸರ್ಕಾರದ ಭಾಗವಾಗಿರುವುದಿಲ್ಲ ಎಂದು ಹೇಳಿದ್ದ ಫಡ್ನವೀಸ್‌, ಸಾಯಂಕಾಲ ಆಶ್ಚರ್ಯಚಕಿತ ರೀತಿಯಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಶುಕ್ರವಾರ ನಡೆದ ಸಂಭ್ರಮಾಚರಣೆಯಲ್ಲಿ ಅವರು ಭಾಗಿಯಾಗದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಮುಂದಿನ 2 ದಿನಗಳ ಕಾಲ ವಿಶೇಷ ಅಧಿವೇಶನ ಇರುವುದರಿಂದ ಫಡ್ನವೀಸ್‌ ಅವರು ತಮ್ಮ ನಿವಾಸದಲ್ಲಿ ಶಾಸಕರ ಜೊತೆ ಸಭೆಯಲ್ಲಿ ತೊಡಗಿದ್ದರು. ಹಾಗಾಗಿ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿಯ ಆಪ್ತರೊಬ್ಬರು ಹೇಳಿದ್ದಾರೆ.

ಇದು ದೇವೇಂದ್ರ ಫಡ್ನವೀಸ್‌ ಮಾಸ್ಟರ್‌ ಸ್ಟೊ್ರೕಕ್‌: ಶಿಂಧೆ ಬಣ್ಣನೆ

ಬಿಜೆಪಿಯ ಬಳಿ ಅತಿ ಹೆಚ್ಚು ಸ್ಥಾನಗಳಿದ್ದರೂ ನನ್ನನ್ನು ಮುಖ್ಯಮಂತ್ರಿ ಮಾಡಿದ್ದು, ದೇವೇಂದ್ರ ಫಡ್ನವೀಸ್‌ ಅವರ ಮಾಸ್ಟರ್‌ ಸ್ಟೊ್ರೕಕ್‌ ಆಗಿದೆ ಎಂದು ಮುಖ್ಯಮಂತ್ರಿ ಏಕನಾಥ ಶಿಂಧೆ ಬಣ್ಣಿಸಿದ್ದಾರೆ. ಬಿಜೆಪಿ ಅಧಿಕಾರ ಬಯಸುತ್ತದೆ ಎಂದು ಜನ ಭಾವಿಸಿದ್ದರು. ಆದರೆ ಫಡ್ನವೀಸ್‌ ಅವರು ವಿಶಾಲ ಹೃದಯದಿಂದ ಅಧಿಕಾರವನ್ನು ನನಗೆ ವರ್ಗಾಯಿಸಿದರು ಎಂದು ಅವರು ಹೇಳಿದರು.

ಹೋಟೆಲ್‌ನಿಂದ ತೆರಳುವ ಮುನ್ನ ಬಿಲ್‌ ಚುಕ್ತಾ ಮಾಡಿದ್ದ ಶಿಂಧೆ ಬಣ

ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಂಡಾಯವೆದ್ದು, ಗುವಾಹಟಿಯ ರಾರ‍ಯಡಿಸನ್‌ ಬ್ಲೂ ಐಶಾರಾಮಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ ಏಕನಾಥ ಶಿಂಧೆ ಅವರ ಬಣ ಮುಂಬೈಗೆ ಹಿಂದಿರುಗುವ ಮೊದಲು ಹೊಟೆಲ್‌ನ ಬಿಲ್‌ ಚುಕ್ತಾ ಮಾಡಿದ್ದಾರೆ. ಸುಮಾರು 70 ಕೊಠಡಿಗಳಲ್ಲಿ ಉಳಿದುಕೊಂಡಿದ್ದ ಶಾಸಕರು 68ರಿಂದ 70 ಲಕ್ಷ ರು. ಬಿಲ್‌ ಪಾವತಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಮಾಣದ ವೇಳೆ ಬಾಳಾ ಠಾಕ್ರೆ ಹೆಸರು ಬಳಸಲು ಅವಕಾಶ: ಕಾಂಗ್ರೆಸ್‌ ಗರಂ

ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಬಂಡಾಯ ನಾಯಕ ಏಕನಾಥ ಶಿಂಧೆ ಪ್ರಮಾಣ ವಚನ ಸ್ವೀಕರಿಸುವ ಸಮಯದಲ್ಲಿ ಶಿವಸೇನೆಯ ಸ್ಥಾಪಕ ಬಾಳಾ ಠಾಕ್ರೆ ಮತ್ತು ಥಾಣೆಯ ನಾಯಕ ಆನಂದ್‌ ಧಿಗೆ ಅವರ ಹೆಸರನ್ನು ಬಳಸಲು ಅವಕಾಶ ನೀಡಿದ್ದಕ್ಕೆ ರಾಜ್ಯಪಾಲ ಕೋಶಿಯಾರಿ ವಿರುದ್ಧ ಕಾಂಗ್ರೆಸ್‌ ಕಿಡಿಕಾರಿದೆ. 2019ರಲ್ಲಿ ಮಹಾ ವಿಕಾಸ ಅಘಾಡಿ ಸರ್ಕಾರದ ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಮಯಲ್ಲಿ ಕೆಲವು ನಾಯಕರ ಹೆಸರನ್ನು ತೆಗೆದುಕೊಳ್ಳದಂತೆ ಕೋಶಿಯಾರಿ ಕೊಶ್ಯಾರಿ ಅವರು ಗೌಪ್ಯವಾಗಿ ತಿಳಿಸಿದ್ದರು ಎಂದು ಕಾಂಗ್ರೆಸ್‌ ಪ್ರಧಾನ ವಕ್ತಾರ ಅತುಲ್‌ ಲೋಂಧೇ ಟ್ವೀಟ್‌ ಮಾಡಿದ್ದಾರೆ.