ವಿಮಾನ ಟೇಕ್ ಆಫ್ ಆಗಿದೆ. ಕೆಲ ಹೊತ್ತಲ್ಲೇ ಪ್ರಯಾಣಿಕನಿಗೆ ತೀರಾ ಚಡಪಡಿಕೆ, ಕುಳಿತುಕೊಳ್ಳಲು ಆಗದೆ, ನಿಲ್ಲಲು ಆಗದ ಪರಿಸ್ಥಿತಿ. ಒಂದು ಬೀಡಿ ಸೇದಿದರೆ ಎಲ್ಲವೂ ಒಕೆ ಎಂದು ವಿಮಾನದಲ್ಲೇ ಸೇದಿದ್ದಾನೆ. ಸಹ ಪ್ರಯಾಣಿಕರು, ವಿಮಾನ ಸಿಬ್ಬಂದಿಗಳು ಆತಂಕಗೊಂಡಿದ್ದಾರೆ. ವಿಮಾನ ಮುಂಬೈನಲ್ಲಿ ಇಳಿಯುತ್ತಿದ್ದಂತೆ ಪ್ರಯಾಣಿಕ ಅರೆಸ್ಟ್ ಆಗಿದ್ದಾನೆ.

ಮುಂಬೈ(ಮಾ.05) ಸಾರ್ವಜನಿಕ ಪ್ರದೇಶವಾಗಲಿ, ವಿಮಾನ ಪ್ರಯಾಣವಾಗಲಿ ಕೆಲವರಿಗೆ ಧೂಮಪಾನ ಮಾಡದಿದ್ದರೆ ಬದುಕುವುದೇ ಕಷ್ಟ ಅನ್ನೋ ಅನುಭವ. ಹೀಗಾಗಿ ನಿರ್ಬಂಧ ಪ್ರದೇಶವಾಗಿದ್ದರೂ ಹಿಂದೂ ಮುಂದೆ ನೋಡದೆ ಧೂಮಪಾನ ಮಾಡಿಬಿಡುತ್ತಾರೆ. ಅದರಲ್ಲೂ ಕೆಲ ಪಕ್ಕಾ ದೇಸಿ ಚಟಗಳು ಬಾಹ್ಯಕಾಶಕ್ಕೆ ತೆರಳಿದರೂ ಬಿಡುವುದು ಕಷ್ಟ. ಹೀಗೆ ದೆಹಲಿಯಿಂದ ವಿಮಾನ ಹತ್ತಿದ ಪ್ರಯಾಣಿಕ ಮೊಹಮ್ಮದ್ ಫಕ್ರುದ್ದೀನ್ ಅಮರುದ್ದೀನ್ ಬೀಡಿ ಸೇದಿದ್ದಾನೆ. ವಿಮಾನ ಮುಂಬೈನಲ್ಲಿ ಲ್ಯಾಂಡ್ ಆದ ಬೆನ್ನಲ್ಲೇ ಈ ಪ್ರಯಾಣಿಕ ಅರೆಸ್ಟ್ ಆಗಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

42 ವರ್ಷದ ಮೊಹಮ್ಮದ್ ಫಕ್ರುದ್ದೀನ್ ದೆಹಲಿ ವಿಮಾನ ನಿಲ್ದಾಣದಿಂದ ಮುಂಬೈಗೆ ತೆರಳಲು ಇಂಡಿಗೋ ವಿಮಾನ ಹತ್ತಿದ್ದಾರೆ. ವಿಮಾನ ಟೇಕ್ ಆಫ್ ಆಗಿದೆ. ಕೆಲ ಹೊತ್ತಿನ ಬಳಿಕ ಮೊಹಮ್ಮದ್ ಫಕ್ರುದ್ದೀನ್‌ ತೀರಾ ಚಡಪಡಿಸಿದ್ದಾನೆ. ಇದುವರೆಗೂ ಫಕ್ರುದ್ದೀನ್ ಈ ರೀತಿ ಶಿಸ್ತಾಗಿ ಪ್ರಯಾಣ ಮಾಡಿದ್ದೇ ಇಲ್ಲ. ಬಸ್ ಹತ್ತುವಾಗ ಅಲ್ಲೇ ಬಸ್ಟ್ಯಾಂಡ್‌ನಲ್ಲಿ ಬೀಡಿ, ಕೆಲವೊಮ್ಮೆ ಬಸ್ಸಿನಲ್ಲೇ ಬೀಡಿ ಸೇದುವುದು, ಖಾಸಗಿ ವಾಹನ ಪ್ರಯಾಣದಲ್ಲಿ ಹೇಳುವುದೇ ಬೇಡ. ಹೀಗಿರುವಾಗಿ ದೆಹಲಿಯಿಂದ ಮುಂಬೈ ತನಕ ಹೀಗೆ ಕುಳಿತು ಪ್ರಯಾಣ ಮಾಡುವ ಸ್ಥಿತಿಯಲ್ಲಿ ಫಕ್ರುದ್ದೀನ್ ಇರಲಿಲ್ಲ.

ಭಯೋತ್ಪಾದಕ ಎಂದು ಬೆಂಗಳೂರು-ಲಖನೌ ವಿಮಾನ ಹತ್ತಿ ಬೆದರಿಸಿದ ಪ್ರಯಾಣಿಕ, ಪೊಲೀಸ್ ವಶಕ್ಕೆ!

ವಿಮಾನದಲ್ಲಿ ಶೌಚಾಲಯಕ್ಕೆ ತೆರಳಿದ ಫಕ್ರುದ್ದೀನ್ ಮೆಲ್ಲನೆ ಬೀಡಿ ತೆಗೆದು ಸೇದಿದ್ದಾನೆ. ವಿಮಾನದಲ್ಲಿನ ಸಿಬ್ಬಂದಿಗಳಿಗೆ ಬೀಡಿ ವಾಸನೆ ಬಡಿಯಲು ಆರಂಭಿಸಿದೆ. ತಕ್ಷಣವೇ ಅಲರ್ಟ್ ಆದ ಸಿಬ್ಬಂದಿಗಳು ಇಡೀ ವಿಮಾನ ಪರಿಶೀಲಿಸಿದ್ದಾರೆ. ಈ ವೇಳೆ ಶೌಚಾಲಯದಿಂದ ಬೀಡಿ ವಾಸನೆ ಬರುತ್ತಿರುವುದು ಗಮನಕ್ಕೆ ಬಂದಿದೆ. ಇತ್ತ ಫಕ್ರುದ್ದೀನ್ ಬೀಡಿ ಸೇದಿ ಶೌಚಾಲಯದಲ್ಲರುವ ಕಸದ ಬುಟ್ಟಿಗೆ ಬೀಡಿ ಬಾಕಿ ಉಳಿದ ಬಾಗ ಎಸೆದು ಹೊರಬಂದಿದ್ದಾನೆ.

ಹೊರಬಂದ ಫಕ್ರುಧ್ದೀನ್‌ನನ್ನು ಸಿಬ್ಬಂದಿಗಳು ವಿಚಾರಣೆ ನಡೆಸಿದಾಗ ಬೀಡಿ ಸೇದಿರುವುದು ಒಪ್ಪಿಕೊಂಡಿದ್ದಾನೆ. ಅಷ್ಟೊತ್ತಿಗೆ ವಿಮಾನ ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದೆ. ಫಕ್ರುದ್ದೀನ್ ವಿರುದ್ದ ಐಪಿಸಿ ಸೆಕ್ಷನ್ 336 ಅಡಿಯಲ್ಲಿ ಪ್ರಕರಣ ದಾಖಲಿಸಿದ ಮುಂಬೈ ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ. 

ಸಾವಿನ ದವಡೆಯಿಂದ ಬಚಾವ್ ಆಗಿ ಬಂದ ಮಾರ್ಟಿನ್‌ ಚಿತ್ರತಂಡ : ಶ್ರೀನಗರಕ್ಕೆ ತೆರಳುತ್ತಿದ್ದಾಗ ಅವಘಡ

ಬಂಧಿತ ಫಕ್ರುದ್ದೀನ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಿಮಾನದಲ್ಲಿ ಈ ರೀತಿ ಬೀಡಿ ಸೇದಿದ ಘಟನೆ ಇದೇ ಮೊದಲಲ್ಲ. 2023ರಲ್ಲಿ ಬೆಂಗಳೂರಿನ ಕಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬನನ್ನು ಬಂಧಿಸಲಾಗಿತ್ತು. ಅಹಮ್ಮದಾಬಾದ್‌ನಿಂದ ಬೆಂಗಳೂರಿಗೆ ವಿಮಾನ ಏರಿದ ಈ ಪ್ರಯಾಣಿಕ ಶೌಚಾಲಯದಲ್ಲಿ ಬೀಡಿ ಸೇದಿದ್ದ. ಹೀಗಾಗಿ ಬೆಂಗಳೂರಿನಲ್ಲಿ ಈತನ ಬಂಧಿಸಲಾಗಿತ್ತು.