ಲಾಕ್ಡೌನ್ ಬೆನ್ನಲ್ಲೇ ದಿಲ್ಲಿಯಿಂದ ಕಾರ್ಮಿಕರ ಗುಳೆ!
ಲಾಕ್ಡೌನ್ ಬೆನ್ನಲ್ಲೇ ದಿಲ್ಲಿಯಿಂದ ಕಾರ್ಮಿಕರ ಗುಳೆ| ಬಸ್, ರೈಲ್ವೆ ನಿಲ್ದಾಣದಲ್ಲಿ ನೆರೆದ ಸಾವಿರಾರು ಜನ| ರಾಷ್ಟ್ರೀಯ ಹೆದ್ದಾರೀಲಿ ಕಾಲ್ನಡಿಗೆ ಮೂಲಕ ಸಂಚಾರ
ನವದೆಹಲಿ(ಏ.20): ದೆಹಲಿಯಲ್ಲಿ 6 ದಿನಗಳ ಲಾಕ್ಡೌನ್ ಘೋಷಣೆ ಬೆನ್ನಲ್ಲೇ ಸಾವಿರಾರು ಕಾರ್ಮಿಕರು ಮರುವಲಸೆ ಆರಂಭಿಸಿದ್ದಾರೆ. ಸೋಂಕು ಇನ್ನಷ್ಟುಹೆಚ್ಚಳವಾದರೆ ಸುದೀರ್ಘ ಲಾಕ್ಡೌನ್ ಜಾರಿಯಾಗಿ ಮತ್ತೆ ಕಳೆದ ವರ್ಷದ ಸಂಕಷ್ಟಎದುರಿಸಬೇಕಾಗಿ ಬರಬಹುದು ಎಂಬ ಭೀತಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ನೆರೆಯ ತವರು ರಾಜ್ಯಗಳಿಗೆ ತೆರಳಲು ಬಸ್ ಮತ್ತು ರೈಲು ನಿಲ್ದಾಣಗಳಲ್ಲಿ ನೆರೆದಿದ್ದಾರೆ. ಹೀಗಾಗಿ ನಿಲ್ದಾಣಗಳಲ್ಲಿ ದಿಢೀರ್ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ.
"
ಇನ್ನೊಂದೆಡೆ ಕಳೆದ ವರ್ಷದಂತೆ ಈ ವರ್ಷವೂ ಸಾವಿರಾರು ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ರಾಷ್ಟ್ರೀಯ ಹೆದ್ದಾರಿಗಳ ಮೂಲಕ ನಡೆದುಕೊಂಡೇ ಕುಟುಂಬ ಸಮೇತರಾಗಿ ನಡೆದು ಹೋಗುತ್ತಿರುವ ದೃಶ್ಯಗಳು ದಿನೇ ದಿನೇ ಹೆಚ್ಚತೊಡಗಿದೆ.
ಸೋಮವಾರ ಲಾಕ್ಡೌನ್ ಘೋಷಣೆ ವೇಳೆ ಸ್ವತಃ ದೆಹಲಿ ಸಿಎಂ ಕೇಜ್ರಿವಾಲ್ ಅವರೇ, ಇದೊಂದು ಸಣ್ಣ ಲಾಕ್ಡೌನ್, ಹೀಗಾಗಿ ಯಾರೂ ದೆಹಲಿ ಬಿಟ್ಟು ಹೋಗಬೇಡಿ. ನಿಮ್ಮೊಂದಿಗೆ ನಾನಿದ್ದೇನೆ ಎಂದು ಭರವಸೆ ನೀಡಿದ್ದರು. ಆದರೆ ಸಿಎಂ ಮಾತಿಗೆ ಓಗೊಡದ ಕಾರ್ಮಿಕರು ಮರುವಲಸೆ ಆರಂಭಿಸಿದ್ದಾರೆ.