ದೆಹಲಿ ಅಬಕಾರಿ ಹಗರಣ ಸಂಬಂಧ ಆಮ್ ಆದ್ಮಿ ಪಾರ್ಟಿಗೆ ಒಂದಲ್ಲಾ ಒಂದು ಸಂಕಷ್ಟ ಎದುರಾಗುತ್ತಿದೆ. ಇದೀಗ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಇಡಿ ಸಮನ್ಸ್ ನೀಡಿದೆ. ಅಕ್ರಮ ಹಣ ವರ್ಗಾವಣೆ ಕುರಿತು ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಿದೆ. 

ನವದೆಹಲಿ(ಡಿ.18) ದೆಹಲಿ ಅಬಕಾರಿ ಹಗರಣದ ಕುಣಿಕೆ ಬಿಗಿಯಾಗುತ್ತಿದೆ. ದೆಹಲಿಯಲ್ಲಿ ಅಧಿಕಾರದಲ್ಲಿರುವ ಆಮ್ ಆದ್ಮಿ ಪಾರ್ಟಿ ನಾಯಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದೆಹಲಿ ಉಪಮುಖ್ಯಮಂತ್ರಿಯಾಗಿದ್ದ ಮನೀಶ್ ಸಿಸೋಡಿಯಾ ಇದೇ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿಗಾಗಿ ಅಲೆದಾಡುತ್ತಿದ್ದಾರೆ. ಇದೀಗ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಇದೇ ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ. ಅಬಕಾರಿ ನೀತಿ ಹಗರಣದಲ್ಲಿನ ಅಕ್ರಮ ಹಣ ವರ್ಗಾವಣೆ ಕುರಿತು ವಿಚಾರಣೆ ನಡೆಸಲು ಸಮನ್ಸ್ ನೀಡಲಾಗಿದೆ. ಡಿಸೆಂಬರ್ 21ಕ್ಕೆ ವಿಚಾರಣೆಗೆ ಹಾಜರಾಗಲು ಅರವಿಂದ್ ಕೇಜ್ರಿವಾಲ್‌ಗೆ ಸಮನ್ಸ್ ನೀಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದೆಹಲಿಯ ಅಬಕಾರಿ ನೀತಿಯಲ್ಲಿ ನಡೆದಿರುವ ಬಹುದೊಡ್ಡ ಹಗರಣದ ತನಿಖೆಯನ್ನು ಇಡಿ ಮಾಡುತ್ತಿದೆ. ಈ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ಬಳಿಕ ಆಪ್ ಸಂಸದ ಸಂಜಯ್ ಸಿಂಗ್ ಕೂಡ ಜೈಲು ಸೇರಿದ್ದಾರೆ. ಇದೀಗ ಇಡಿ ವಿಚಾರಣೆ ಸಿಎಂ ಅರವಿಂದ್ ಕೇಜ್ರಿವಾಲ್ ಸುತ್ತ ಸುತ್ತುತ್ತಿದೆ. ನವೆಂಬರ್ ತಿಂಗಳ ಆರಂಭದಲ್ಲಿ ಕೇಜ್ರಿವಾಲ್‌ಗೆ ಇದೇ ಅಬಕಾರಿ ನೀತಿ ಹಗರಣ ಸಂಬಂಧ ಸಮನ್ಸ್ ನೀಡಿತ್ತು. ಆದರೆ ಕೇಜ್ರಿವಾಲ್ ವಿಚಾರಣೆಗೆ ಗೈರಾಗಿ ಇಡಿಗೆ ಸೆಡ್ಡು ಹೊಡೆದಿದ್ದರು. 

ಕೇಜ್ರಿವಾಲ್ ಬಂಧನವಾದರೆ 'ವರ್ಕ್ ಫ್ರಂ ಜೈಲ್' : ಜೈಲಲ್ಲೇ ಸಂಪುಟ ಸಭೆ, ಅಲ್ಲಿಂದಲೇ ಕೆಲಸ: ಆಪ್ ನಿರ್ಣಯ

ಜಾರಿ ನಿರ್ದೇಶನಾಲಯದ ನೋಟಿಸ್‌ ಅಸ್ಪಷ್ಟವಾಗಿದೆ, ದುರುದ್ದೇಶದಿಂದ ಕೂಡಿದೆ ಹಾಗೂ ಕಾನೂನಿನ ಅಡಿಯಲ್ಲಿ ಯಾವುದೇ ಸಮರ್ಥನೆಯನ್ನೂ ಹೊಂದಿಲ್ಲ. ಹೀಗಾಗಿ ಅದನ್ನು ವಾಪಸ್‌ ಪಡೆಯಬೇಕು ಎಂದು ಪತ್ರ ಬರೆದ ಕೇಜ್ರಿವಾಲ್ ಇಡಿ ವಿರುದ್ಧ ಸಮರ ಆರಂಭಿಸಿದ್ದರು. ಅ.30ರಂದು ಕೇಜ್ರಿವಾಲ್‌ಗೆ ಇ.ಡಿ. ಸಮನ್ಸ್ ಜಾರಿಗೊಳಿಸಿ, ನ.2ರ ಗುರುವಾರ ವಿಚಾರಣೆಗೆ ಹಾಜರಾಗುವಂತೆ ಬುಲಾವ್‌ ನೀಡಿತ್ತು. ವಿಚಾರಣೆಗೆ ಗೈರು ಹಾಜರಾಗಿರುವ ಕೇಜ್ರಿ, ಈ ಕುರಿತು ಇ.ಡಿ.ಗೆ ಪತ್ರವೊಂದನ್ನು ಬರೆದಿದ್ದಾರೆ. ‘ಇ.ಡಿ. ನೀಡಿರುವ ನೋಟಿಸ್‌ ಅಕ್ರಮ. ರಾಜಕೀಯ ಪ್ರೇರಿತ. ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿ ನಾನು ಪ್ರಚಾರ ಮಾಡದಂತೆ ತಡೆಯುವ ಉದ್ದೇಶ ಹೊಂದಿದೆ. ಬಿಜೆಪಿ ಸೂಚನೆ ಮೇರೆಗೆ ಈ ನೋಟಿಸ್‌ ನೀಡಲಾಗಿದೆ’ ಎಂದು ದೂರಿದ್ದಾರೆ.

ಇತ್ತೀಚೆಗೆ ಅಭಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ಜೈಲು ಸೇರಿರುವ ಸಂಜಯ್ ಸಿಂಗ್ ವಿರುದ್ಧ ಇಡಿ ಆರೋಪಪಟ್ಟಿ ಸಲ್ಲಿಕೆ ಮಾಡಿತ್ತು. ಸಂಜಯ್‌ ಸಿಂಗ್‌, ಉದ್ಯಮಿ ದಿನೇಶ್‌ ಅರೋರ ಅವರ ಬಳಿ ಎರಡು ಸಮಾನ ಕಂತುಗಳಲ್ಲಿ 2 ಕೋಟಿ ರೂಪಾಯಿ ಲಂಚವನ್ನು ಅಕ್ರಮ ಹಣ ವರ್ಗಾವಣೆ ರೂಪದಲ್ಲಿ ಪಡೆದಿದ್ದಾರೆ ಎಂದು ಇ.ಡಿ. ತನ್ನ ಆರೋಪಪಟ್ಟಿಯಲ್ಲಿ ಪ್ರಸ್ತಾಪಿಸಿತ್ತು.ಆದರೆ ಈ ಆರೋಪಟ್ಟಿಯಲ್ಲಿ ಉಲ್ಲೇಖಿಸಿರುವ ಆರೋಪವನ್ನು ಆಮ್ ಆದ್ಮಿ ಪಾರ್ಟಿ ತಿರಸ್ಕರಿಸಿತ್ತು. 

ದಿಲ್ಲಿ ಅಬಕಾರಿ ಹಗರಣ: ಕೆಸಿಆರ್‌ ಪುತ್ರಿ ಕೆ.ಕವಿತಾಗೆ ಇ.ಡಿ.ಸಮನ್ಸ್‌