ಅಂತರ್ ಧರ್ಮೀಯ ಮತ್ತು ಅಂತರ್ಜಾತೀಯ ದಂಪತಿಗಳನ್ನು ಬೆದರಿಕೆ, ದೌರ್ಜನ್ಯಗಳಿಂದ ರಕ್ಷಿಸುವ ಉದ್ದೇಶ| ಪ್ರೇಮ ವಿವಾಹ ಆದವರ ರಕ್ಷಣೆಗೆ ದಿಲ್ಲಿ ಸರ್ಕಾರದಿಂದ ಕಾಲ್ಸೆಂಟರ್, ಸ್ಪೆಷಲ್ ಸೆಲ್
ನವದೆಹಲಿ(ಮಾ.29): ಅಂತರ್ ಧರ್ಮೀಯ ಮತ್ತು ಅಂತರ್ಜಾತೀಯ ದಂಪತಿಗಳನ್ನು ಬೆದರಿಕೆ, ದೌರ್ಜನ್ಯಗಳಿಂದ ರಕ್ಷಿಸುವ ಉದ್ದೇಶಿದಿಂದ ದೆಹಲಿ ಸರ್ಕಾರ ಸುರಕ್ಷಿತ ವಸತಿ ಸೌಲಭ್ಯ ಮತ್ತು ಸಹಾಯವಾಣಿಯನ್ನು ಆರಂಭಿಸಿದೆ. ಹಾಗೂ ಇಂಥ ಪ್ರಕರಣಗಳ ವಿಚಾರಣೆಗೆಂದೇ ಉಪ ಪೊಲೀಸ್ ಆಯುಕ್ತರ ಮೇಲ್ವೀಚಾರಣೆಯಡಿಯಲ್ಲಿ ಕಾರ್ಯನಿರ್ವಹಿಸರುವ ವಿಶೇಷ ಕಾರಾಗೃಹಗಳ ಸ್ಥಾಪನೆಗೆ ನಿರ್ದೇಶನ ನೀಡಿದೆ.
ಇಂಥ ಪ್ರಕರಣಗಳಿಗೆಂದೇ ಕೇಜ್ರಿವಾಲ್ ನೇತೃತ್ವ ಎಎಪಿ ಸರ್ಕಾರ ನೂತನ ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಡರ್ (ಎಸ್ಒಪಿ) ಜಾರಿ ಮಾಡಿದ್ದು, ಆ ಪ್ರಕಾರ ಕುಟುಂಬಸ್ಥರು ಮತ್ತು ಸ್ಥಳೀಯ ಸಮುದಾಯಗಳ ವಿರೋಧ ಇರುವ ದಂಪತಿಗಳಿಗೆ ಸುರಕ್ಷಿತ ವಸತಿ ಸೌಲಭ್ಯವನ್ನು ಒದಗಿಸಲಾಗುತ್ತದೆ.
ಹಾಗೆಯೇ ದೆಹಲಿಯಲ್ಲಿ ಈಗಾಗಲೇ ಲಭ್ಯವಿರುವ 181 ಟೋಲ್ ಫ್ರೀ ಮಹಿಳಾ ಸಹಾಯವಾಣಿ ಸಂಖ್ಯೆ 24 ಗಂಟೆಯೂ ಅಂತರ್ ಧರ್ಮಿಯ ಮತ್ತು ಅಂತರ್ಜಾತೀಯ ದಂಪತಿಗಳ ರಕ್ಷಣೆಗೆ ಸಿದ್ಧವಾಗಿರುತ್ತದೆ ಮತ್ತು ಅಗತ್ಯ ನೆರವನ್ನು ನೀಡುತ್ತದೆ ಎಂದು ಸರ್ಕಾರ ತಿಳಿಸಿದೆ.
