ಹಿಜಾಬ್ ತೀರ್ಪು ನೀಡಿದ್ದ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಬೆದರಿಕೆ ಆರೋಪಿ ರೆಹಮತುಲ್ಲಾ ಮೇಲೆ ತಮಿಳುನಾಡು, ಕರ್ನಾಟಕದಲ್ಲಿ ಕೇಸ್ ಪ್ರಕರಣ ಕೈಬಿಡುವಂತೆ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋದ ಆರೋಪಿ
ನವದೆಹಲಿ(ಏ.13): ಹಿಜಾಬ್ ಪ್ರಕರಣ ಕುರಿತು ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಕಟಿಸಿದರೂ ಬಳಿಕ ನಡೆದ ಘಟನೆಗಳು ಸಮಾಜದ ಸ್ವಾಸ್ಥ್ಯ ಕೆಡೆಸಿದೆ. ಇದರ ನಡುವೆ ಹಿಜಾಬ್ ತೀರ್ಪು ನೀಡಿದ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕಿದ ಘಟನೆಯೂ ನಡೆದಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿ ಬೆದರಿಕೆ ಹಾಕಿದ ಆರೋಪಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾನೆ. ತನ್ನ ವಿರುದ್ಧದ ಪ್ರಕರಣ ಕೈಬಿಡುವಂತೆ ಮನವಿ ಮಾಡಿದ್ದಾನೆ.
ಹಿಜಾಬ್ ವಿವಾದಕ್ಕೆ ಅಂತ್ಯಹಾಡಲು ಮಾರ್ಚ್ 15 ರಂದು ಕರ್ನಾಟಕ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ದೀಕ್ಷಿತ್ ಹಾಗೂ ಜೆಎಂ ಖಾಜಿ ಅವರನ್ನೊಳಗೊಂಡ ಪೀಠ ಮಹತ್ವದ ತೀರ್ಪು ನೀಡಿತ್ತು. ಶಾಲಾ ಆಡಳಿತ ಮಂಡಳಿ ನಿರ್ಧರಿಸುವ ಸಮವಸ್ತ್ರ ಧರಿಸಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಆದೇಶವನ್ನು ಎತ್ತಿಹಿಡಿದು ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ತಮಿಳುನಾಡಿನ ಮುಸ್ಲಿಮ್ ಸಂಘಟನೆ ನಾಯಕ ರೆಹಮತುಲ್ಲಾ ವೇದಿಕೆಯಲ್ಲಿ ಬಹಿರಂಗವಾಗಿ ತೀರ್ಪು ನೀಡಿದ ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕಿದ್ದ. ರೆಹಮತುಲ್ಲಾ ವಿರುದ್ಧ ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಪ್ರತ್ಯೇಕ ಎಐಆರ್ ದಾಖಲಾಗಿತ್ತು. ಇದರಲ್ಲಿ ಎರಡೂ ಒಂದೇ ಪ್ರಕರಣ ಆಗಿರುವುದರಿಂದ ಕರ್ನಾಟಕದಲ್ಲಿನ ಎಐಆರ್ ರದ್ದು ಮಾಡುವಂತೆ ಕೋರಿ ಸುಪ್ರೀಂ ಕೋರ್ಟ್ಗೆ ರಹೆಮತುಲ್ಲಾ ಅರ್ಜಿ ಸಲ್ಲಿಸಿದ್ದಾನೆ.
ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಬೆದರಿಕೆ, ಆರೋಪಿ ರೆಹಮತ್ ಉಲ್ಲಾ ತೀವ್ರ ವಿಚಾರಣೆ
ರೆಹಮತುಲ್ಲಾ ಸುಪ್ರೀಂಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿರುವ ಅಂಶಗಳು:
ಬೆದರಿಕೆ ಆರೋಪದಡಿ ತಮಿಳುನಾಡಿನ ಮಧುರೈನಲ್ಲಿ ಹಾಗೂ ಕರ್ನಾಟಕದ ಬೆಂಗಳೂರಿನಲ್ಲಿ ಪ್ರಕರಣ ದಾಖಲಾಗಿದೆ. ಎರಡು ಪ್ರಕರಣಗಳಲ್ಲಿರುವ ಅಂಶ ಒಂದೇ ಆಗಿದೆ. ಹೀಗಾಗಿ ಎರಡನೇ ಪ್ರಕರಣ ಅಂದರೆ ಕರ್ನಾಟಕದ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದು ಮಾಡುವಂತೆ ಕೋರಲಾಗಿದೆ
ಎರಡು ಪ್ರಕರಣಗಳ ಸಮಾನಾಂತರ ತನಿಖೆ ಸಾಧ್ಯವಿಲ್ಲ. ಇದು ಮೂಲಭೂತ ಹಕ್ಕು ಉಲ್ಲಂಘನೆಯಾಗಿದೆ. ಅನರ್ಬ್ ಗೋಸ್ವಾಮಿ ಹಾಗೂ ಕೇಂದ್ರ ಸರ್ಕಾರ ನಡುವಿನ ಪ್ರಕರಣ, ಟಿಟಿ ಆ್ಯಂಥೋನಿ ಹಾಗೂ ಕೇರಳ ಸರ್ಕಾರ ನಡುವಿನ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಅವಲಂಬಿಸಿದೆ. ಹೀಗಾಗಿ ಒಂದು ಪ್ರಕರಣ ಮಾತ್ರ ತನಿಖೆಗೆ ಅವಕಾಶ ನೀಡಬೇಕು.
ಜಡ್ಜ್ಗೆ ಬೆದರಿಕೆ: ತಮಿಳುನಾಡಿನ ಮತ್ತೊಬ್ಬ ಕಿಡಿಗೇಡಿ ಬೆಂಗ್ಳೂರಿಗೆ
ಎರಡು ಪ್ರಕರಣಗಳ ತನಿಖೆಗೆ ಅವಕಾಶ ಸಂವಿಧಾನದ 21ನೇ ಅಡಿಯಲ್ಲಿ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಎರಡು ಬೇರೆ ಬೇರೆ ತನಿಖಾ ಸಂಸ್ಥೆಗಳು ಒಂದೇ ಪ್ರಕರಣವನ್ನು ಬೇರೆ ಬೇರೆ ರಾಜ್ಯಗಳಲ್ಲಿ ತನಿಖೆ ನಡೆಸುವುದು ಅರ್ಜಿದಾರನ ಹಕ್ಕು ಉಲ್ಲಂಘಿಸುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಮಾರ್ಚ್ 18 ರಂದು ರೆಹಮತುಲ್ಲಾ ಮಧುರೈನಲ್ಲಿ ಮಾಡಿದ ಭಾಷಣದ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮಾರ್ಚ್ 19 ರಂದು ತಮಿಳುನಾಡು ಪೊಲೀಸರು ನ್ಯಾಯಮೂರ್ತಿಗಳಿಗೆ ಬೆದರಿಕೆ ಆರೋಪದಡಿ ರೆಹಮತುಲ್ಲಾನನ್ನು ಬಂಧಿಸಲಾಗಿತ್ತು.
ಈ ಪ್ರಕರಣದ ಬಳಿಕ ಬೆಂಗಳೂರಿನಲ್ಲಿ ಸೆಕ್ಷನ್ 506(1) (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ), 505(1)(ಸಿ), 505(1)(ಬಿ), 505(2), 153A, 109 ಅಡಿಯಲ್ಲಿ ರೆಹಮತುಲ್ಲಾ ವಿರುದ್ಧ ಪ್ರಕರಣ ದಾಖಲಾಗಿದೆ.
ಹಿಜಾಬ್ ವಿವಾದ
ಉಡುಪಿ ಮಹಿಳಾ ಕಾಲೇಜಿನಿಂದ ಆರಂಭಗೊಂಡ ಹಿಜಾಬ್ ವಿವಾದ ರಾಜ್ಯ ಹಾಗೂ ದೇಶಕ್ಕೆ ಹಬ್ಬಿತ್ತು. ಹಿಜಜಾಬ್ ತೆಗೆದು ತರಗತಿ ಪ್ರವೇಶಿಸಲು ನಿರಾಕರಿಸಿದ ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಲಿರೇರಿದ್ದರು. ಇವರಿಗೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬೆಂಬಲ ನೀಡಿತ್ತು. ಸುದೀರ್ಘ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಹಿಬಾಜ್ ಇಸ್ಲಾಮ್ನ ಅವಿಭಾಜ್ಯ ಅಂಗ ಅಲ್ಲ. ಶಾಲಾ ಆಡಳಿತ ಮಂಡಳಿ ನಿರ್ಧರಿಸುವ ಸಮವಸ್ತ್ರ ಧರಿಸಬೇಕು. ಈ ವಿಚಾರದಲ್ಲಿ ಕರ್ನಾಟಕ ಸರ್ಕಾರ ನೀಡಿರುವ ಆದೇಶವನ್ನು ಕೋರ್ಟ್ ಎತ್ತಿ ಹಿಡಿದಿತ್ತು.
