ಚಂದ್ರ ಈಗ ದೂರದಲ್ಲಿಲ್ಲ. ಇಸ್ರೋ ವಿಜ್ಞಾನಿಗಳು ಘೋಷಿಸಿದಂತೆ ಭಾರತ ಇದೀಗ ಚಂದ್ರನ ಮೇಲಿದೆ. ಈ ಸಾಧನೆ ಐತಿಹಾಸಿಕ. ಈ ಕ್ಷಣ ಹೆಮ್ಮೆಯ ಕ್ಷಣ ಎಂದು ಮೋದಿ ಹೇಳಿದ್ದಾರೆ. ಇಸ್ರೋಗೆ ಅಭಿನಂದನೆ ಸಲ್ಲಿಸಿದ ಮೋದಿ, ಚಂದ್ರಯಾನ ಯಶಸ್ವಿ ಲ್ಯಾಂಡಿಂಗ್‌ಗೆ ಸಂತಸ ವ್ಯಕ್ತಪಡಿಸಿದ್ದಾರೆ. 

ಜೋಹಾನ್ಸ್‌ಬರ್ಗ್(ಆ.23) ಭಾರತ ಭೂಮಿಯನ್ನು ತಾಯಿ ರೂಪದಲ್ಲಿ ನೋಡುತ್ತದೆ. ಚಂದ್ರನನ್ನು ಮಾಮಾ ಎಂದು ಕರೆಯುತ್ತೇವೆ. ಹಿಂದೆ ಮಕ್ಕಳಿಗೆ ನಾವು ಚಂದಮಾಮ ಬಹಳ ದೂರದಲ್ಲಿದ್ದಾನೆ ಎಂದು ಹೇಳುತ್ತಿದ್ದೇವು. ಆದರೆ ಇದೀಗ ಹಾಗಲ್ಲ, ಇದೀಗ ಚಂದ್ರನ ಮೇಲೆ ನಾವಿದ್ದೇವೆ. ಭಾರತ ಚಂದ್ರನ ಮೇಲೆ ಯಶಸ್ವಿಯಾಗಿ ಕಾಲಿಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಒಂದೆಡೆ ಚಂದ್ರಯಾನ 3 ಲ್ಯಾಂಡಿಂಗ್ ಪ್ರಕ್ರಿಯೆ ನಡೆಯುತ್ತಿದ್ದರೆ, ಮತ್ತೊಂದೆಡೆ ಸೌತ್ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ಬಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ಇಸ್ರೋ ನೇರಪ್ರಸಾರದಲ್ಲಿ ಪಾಲ್ಗೊಂಡಿದ್ದರು. ವಿಕ್ರಮ್ ಲ್ಯಾಂಡರ್ ಲ್ಯಾಂಡಿಂಗ್ ಪ್ರಕ್ರಿಯೆಯನ್ನು ವೀಕ್ಷಿಸಿದರು. ಯಶಸ್ವಿಯಾಗಿ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯುತ್ತಿದ್ದ ತಿರಂಗ ಹಾರಿಸಿದ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದರು. ಬಳಿಕ ಮಾತನಾಡಿದ ಮೋದಿ, ಇದೀಗ ಐತಿಹಾಸಿ ಮೈಲಿಗಲ್ಲು ಎಂದು ಬಣ್ಣಿಸಿದರು. 

ಬಾಹ್ಯಾಕಾಶದಲ್ಲಿ ಭಾರತ ವಿಶ್ವಗುರು, ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದ ಲ್ಯಾಂಡರ್!

ನಾವು ಭೂಮಿಯಲ್ಲಿ ಸಂಕಲ್ಪ ಮಾಡಿದ್ದೇವೆ.ಇದೀಗ ಚಂದ್ರನಲ್ಲಿ ನಾವು ಸಂಕಲ್ಪ ಸಾಕಾರಗೊಳಿಸಿದ್ದೇವೆ. ಈಗಷ್ಟೇ ನಮ್ಮ ವಿಜ್ಞಾನಿಗಳು ಭಾರತ ಚಂದ್ರನ ನೆಲದಲ್ಲಿದ್ದೇವೆ ಎಂದು ಘೋಷಿಸಿದ್ದಾರೆ. ಇದು ನಮ್ಮ ಹೆಮ್ಮೆಯ ಪ್ರತೀಕವಾಗಿದೆ.

ನಾನು ಬ್ರಿಕ್ಸ್ ಶಂಗಸಭೆಗಾಗಿ ಸೌತ್ ಆಫ್ರಿಕಾದಲ್ಲಿದ್ದೇನೆ. ಆದರೆ ನನ್ನ ಮನಸ್ಸು ಚಂದ್ರಯಾನ 3ರ ಮೇಲಿತ್ತು. ಇಡೀ ಭಾರತೀಯರು ಹೇಗೆ ಮನೆ ಮನೆಯಲ್ಲಿ ಕುಳಿತು ಈ ಐತಿಹಾಸಿಕ ಕ್ಷಣವನ್ನು ವೀಕ್ಷಿಸಿದ್ದಾರೆ. ಸಂತಸ ಪಟ್ಟಿದ್ದಾರೆ. ಈ ಸಂಭ್ರಮದಲ್ಲಿ ನಾನು ಭಾಗಿಯಾಗಿದ್ದೇನೆ. ನಮ್ಮ ಇಸ್ರೋ ವಿಜ್ಞಾನಿಗಳ ತಂಡಕ್ಕೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. ಹಲವು ವರ್ಷಗಳಿಂದ ಈ ಒಂದು ಕ್ಷಣಕ್ಕಗಾಗಿ ಕೆಲಸ ಮಾಡಿದ್ದಾರೆ. ಸಮಸ್ತ ಭಾರತೀಯರ ಪರವಾಗಿ ಕೋಟಿ ಕೋಟಿ ಧನ್ಯವಾದ ಸಲ್ಲಿಸುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ.

ನಾವು ಭೂಮಿಯನ್ನು ತಾಯಿ ಎಂದು ಕರೆಯುತ್ತೇವೆ. ಇನ್ನು ಚಂದ್ರನನ್ನು ಮಾಮ ಎಂದು ಕರೆಯುತ್ತಿದ್ದೇವೆ. ನಾವು ಹಿಂದೆ ಚಂದಮಾನ ಅತೀ ದೂರದಲ್ಲಿದೆ ಎಂದು ಮಕ್ಕಳಿಗೆ ಹೇಳುತ್ತಿದ್ದೇವೆ. ಆದರೆ ಇದೀಗ ಚಂದ್ರ ದೂರದಲ್ಲಿಲ್ಲ. ಅದರ ಮೇಲೆ ನಾವಿದ್ದೇವೆ ಎಂದು ಮೋದಿ ಹೇಳಿದ್ದಾರೆ. 

ಚಂದ್ರಯಾನ 3 ಉಡಾವಣೆಗೆ ತಿರುಪತಿ, ಯಶಸ್ವಿ ಲ್ಯಾಂಡಿಂಗ್‌ಗೆ ಅಯ್ಯಪ್ಪನ ಮೊರೆ ಹೋದ ಇಸ್ರೋ ತಂಡ!

ಚಂದ್ರಯಾನ ಮಹಾ ಮಿಶನ್ ಕೇವಲ ಚಂದ್ರನ ಮೇಲೆ ಮಾತ್ರವಲ್ಲ, ಮತ್ತಷ್ಟು ದೂರ ಸಾಗಲಿದೆ. ಬಾಹ್ಯಾಕಾಶದ ಹಲವು ಕುತೂಹಗಳನ್ನು ಹೊರತರಲು ಭಾರತ ಶ್ರಮಿಸಲಿದೆ. ಶೀಘ್ರದಲ್ಲೇ ಸೂರ್ಯನ ಅಧ್ಯಯನಕ್ಕೆ ಆದಿತ್ಯ ಉಪಗ್ರಹ ಉಡಾವಣೆ ಮಾಡಲಿದೆ. ಇದರ ಬಳಿಕ ಶುಕ್ರ ಗ್ರಹ ಕೂಡ ಇಸ್ರೋ ಅಧ್ಯಯನ ವಸ್ತುವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 

ಚಂದ್ರಯಾನ 3 ಎಲ್ಲರಿಗೂ ಮಾದರಿಯಾಗಿದೆ. ಚಂದ್ರಯಾನ 2 ವೈಪಲ್ಯದಿಂದ ನಾವು ಹೇಗೆ ಯಶಸ್ಸು ಸಾಧಿಸಿದ್ದೇವೆ ಅನ್ನೋದು ಮಾದರಿಯಾಗಿದೆ. ಇಸ್ರೋದ ಮುಂದಿನ ಎಲ್ಲಾ ಪ್ರಯತ್ನ ಹಾಗೂ ಪ್ರಯೋಗಕ್ಕೆ ಶುಭಹಾರೈಸುತ್ತೇನೆ ಎಂದು ಮೋದಿ ಹೇಳಿದ್ದಾರೆ