ಅಮಿತ್ ಶಾ-ಯೋಗಿ ಮೇಲೆ ಆತ್ಮಾಹುತಿ ದಾಳಿಗೆ ಪ್ಲಾನ್; CRPF ಕಚೇರಿಗೆ ಬಂತು ಇಮೇಲ್!
ಭಾರತೀಯ CRPF ಯೋಧರ ಮೇಲೆ ನಕ್ಸಲರ ದಾಳಿ ನಡೆದ ಬೆನ್ನಲ್ಲೇ ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೇಲೆ ಆತ್ಮಾಹುತಿ ದಾಳಿ ನಡೆಸುವ ಕುರಿತು CRPF ಕಚೇರಿಗೆ ಇಮೇಲ್ ಬಂದಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ನವದೆಹಲಿ(ಏ.06): ಮುಂಬೈನ CRPF ಕಚೇರಿಗೆ ಇ ಮೇಲ್ ಸಂದೇಶವೊಂದು ಬಂದಿತ್ತು. ಅನಾಮಿಕ ಸಂದೇಶ ಇದಾಗಿತ್ತು. ಆದರೆ ಇ ಮೇಲ್ ಪರಿಶೀಲಿಸಿದ CRPF ಅಧಿಕಾರಿಗಳು ತಕ್ಷಣವೇ ಅಲರ್ಟ್ ಆಗಿದ್ದಾರೆ. ಕಾರಣ ಈ ಇಮೇಲ್ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೇಲೆ ಆತ್ಮಾಹುತಿ ದಾಳಿ ಮಾಡುವ ಎಚ್ಚರಿಕೆ ನೀಡಲಾಗಿದೆ.
ನಕ್ಸಲ್ ದಾಳಿ ಬೆನ್ನಲ್ಲೇ ಉನ್ನತ ಮಟ್ಟದ ಸಭೆ ನಡೆಸಿದ ಅಮಿತ್ ಶಾ!
ಅಮಿತ್ ಶಾ ಹಾಗೂ ಯೋಗಿ ಆದಿತ್ಯನಾಥ್ ಮೇಲಿನ ಆತ್ಮಾಹುತಿ ದಾಳಿಗೆ 11 ಮಂದಿ ತರಬೇತಿ ಪಡೆದಿದ್ದಾರೆ. ಸೂಕ್ತ ಸ್ಥಳದಲ್ಲಿ ಆತ್ಮಾಹುತಿ ದಾಳಿ ನಡೆಯಲಿದೆ. ಈ ನಾಯಕರ ಮೇಲೆ ಮಾತ್ರವಲ್ಲ, ದೇವಾಲಯಗಳು, ಇತರ ಪ್ರದೇಶದಲ್ಲೂ ಆತ್ಮಾಹುತಿ ದಾಳಿ ನಡೆಯಲಿದೆ ಎಂದು ಇ ಮೇಲ್ ಮೂಲಕ ತಿಳಿಸಲಾಗಿದೆ.
CRPF ಅಧಿಕಾರಿಗಳು ತಕ್ಷಣವೇ ಇ ಮೇಲ್ ಸಂದೇಶದ ಕುರಿತು ಕೇಂದ್ರ ಗೃಹ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಉತ್ತರ ಪ್ರದೇಶಕ್ಕೂ ಮಾಹಿತಿ ನೀಡಲಾಗಿದೆ. ಇದೀಗ ಇ ಮೇಲ್ ಸರ್ವರ್ ಸೇರಿದಂತೆ ಹಲವು ಮಾಹಿತಿಗಳನ್ನು ಕಲೆಹಾಕಲಾಗುತ್ತಿದೆ.
ಚತ್ತೀಸಘಡ ಬಿಜಾಪುರ್ ಅರಣ್ಯ ಪ್ರದೇಶದಲ್ಲಿ CRPF ಯೋಧರ ಮೇಲೆ ದಾಳಿ ನಡೆದ ಬೆನ್ನಲ್ಲೇ ಇದೀಗ ಈ ಸಂದೇಶ CRPF ಕಚೇರಿಗೆ ಬಂದಿರುವುದು ಕೆಲ ಅನುಮಾನಗಳಿಗೆ ಕಾರಣವಾಗಿದೆ.