ಸಿಪಿಎಂ ನಾಯಕ ಸೀತಾರಾಮ್ ಯಚೂರಿ ಹಿರಿಯ ಪುತ್ರ ಕೊರೋನಾಗೆ ಬಲಿ!
ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯಚೂರಿ ಹಿರಿಯ ಪುತ್ರ| ಸೀತಾರಾಮ್ ಯಚೂರಿ ಹಿರಿಯ ಪುತ್ರ, ಪತ್ರಕರ್ತ ಆಶಿಶ್ ಯಚೂರಿ ಕೊರೋನಾಗೆ ಬಲಿ
ನವದೆಹಲಿ(ಏ.22): ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯಚೂರಿ ಹಿರಿಯ ಪುತ್ರ, ಪತ್ರಕರ್ತ ಆಶಿಶ್ ಯಚೂರಿ(34) ಗುರುವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಗುರ್ಗಾಂವ್ನ ಮೇದಾಂತಾ ಆಸ್ಪತ್ರೆಯಲ್ಲಿ ಆಶಿಶ್ ಚಿಕಿತ್ಸೆ ಪಡೆಯುತ್ತಿದ್ದರು.
ಇನ್ನು ಸೀತಾರಾಮ್ ಯಚೂರಿ ತಮ್ಮ ಟ್ವಿಟರ್ನಲ್ಲಿ ಪುತ್ರನ ನಿಧನ ವಾರ್ತೆಯನ್ನು ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸೀತಾರಾಮ್ ಯಚೂರಿ ನನ್ನ ಹಿರಿಯ ಪುತ್ರ ಆಶಿಶ್ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾನೆಂದು ತಿಳಿಸಲು ತುಂಬ ದುಃಖವಾಗುತ್ತಿದೆ. ಆತನಿಗೆ ಚಿಕಿತ್ಸೆ ನೀಡಿದ ವೈದ್ಯರು, ನರ್ಸ್ಗಳು ಹಾಗೂ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.
ಜೂನ್ 9 ರಂದು 35 ನೇ ವರ್ಷಕ್ಕೆ ಕಾಲಿಡುತ್ತಿದ್ದ ಆಶಿಶ್ ಅವರಿಗೆ 15ದಿನಗಳ ಹಿಂದೆಯೇ ಸೋಂಕು ತಗುಲಿತ್ತು. ಆರಂಭದಲ್ಲಿ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಗುರಗಾಂವ್ನ ಮೇದಾಂತ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಕೊರೋನಾ ವಿರುದ್ದ ಎರಡು ವಾರಗಳ ಹೋರಾಟದ ನಂತರ ಅವರು ಇಂದು ಬೆಳಿಗ್ಗೆ 5.30 ಕ್ಕೆ ಕೊನೆಯುಸಿರೆಳೆದಿದ್ದಾಋಎ ಎಂದು ಎಂದು ಯಚೂರಿ ಕುಟುಂಬದ ಆಪ್ತರು ತಿಳಿಸಿದ್ದಾರೆ.
ಆಶೀಶ್ ದೆಹಲಿಯ ಪ್ರತಿಷ್ಠಿತ ಸುದ್ದಿಪತ್ರಿಕೆಯೊಂದರಲ್ಲಿ ಕಾಪಿ ಎಡಿಟರ್ ಆಗಿದ್ದರು. ಆಶೀಶ್ನ್ನು ಕಳೆದುಕೊಂಡ ಕುಟುಂಬ ಶಾಕ್ನಲ್ಲಿದೆ. ಸೀತಾರಾಮ್ ಯಚೂರಿಯವರು ಸದ್ಯ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ.