* ಕೊರೋನಾ ಅಬ್ಬರದ ನಡುವೆ ನದಿಗಳಲ್ಲಿ ಶವಗಳ ರಾಶಿ* ಕಟ್ಟಿಗೆ ಕೊರತೆಯಿಂದ ಹೆಣಗಳನ್ನು ನದಿಗೆಸೆಯುತ್ತಿದೆಯಾ ಜಿಲ್ಲಾಡಳಿತ* ಗಂಗೆ ಒಡಲಲ್ಲಿ ತೇಲಿ ಬಂದ ಶವಗಳು, ವೈರಲ್ ಆಯ್ತು ವಿಡಿಯೋ 

ಪಾಟ್ನಾ(ಮೇ.05): ಕೊರೋನಾ ಸಂಕಷ್ಟದ ನಡುವೆ ಬಿಹಾರದ ಬಕ್ಸರ್ ಜಿಲ್ಲೆಯಲ್ಲಿ ಮಾನವಕುಲ ತಲೆ ತಗ್ಗಿಸುವಂತಹ ದೃಶ್ಯವೊಂದು ಕಂಡು ಬಂದಿದೆ. ಚೌಸಾದ ಮಹಾದೇವ್ ಘಾಟ್‌ನಲ್ಲಿ ಶವಗಳ ರಾಶಿ ಹರಿದು ಬಂದಿದೆ. ಜಿಲ್ಲಾಡಳಿತವು ಕ್ಷಣಾರ್ಧದಲ್ಲಿ ಇದು ಉತ್ತರ ಪ್ರದೇಶದವರ ಶವ, ಅಲ್ಲಿಂದ ಇಲ್ಲಿಗೆ ನದಿಯಲ್ಲಿ ಹರಿದು ಬಂದಿದೆ ಎಂದು ದೂರಿದೆ. ಹೌದು ಸದ್ಯ ಈ ಶವಗಳ ರಾಶಿ ಗಂಗಾನದಿ ತಟವನ್ನು ಆವರಿಸಿದೆ. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೋಡುಗರನ್ನು ವಿಚಲಿತರನ್ನಾಗಿಸಿದೆ.

Add Asianetnews Kannada as a Preferred SourcegooglePreferred

"

ಗಂಗಾ ನದಿ ನೀರು ಈಗ ಕುಡಿಯಲು ಯೋಗ್ಯ: ಬರಿಗಣ್ಣಿಗೆ ಕಾಣುತ್ತಿವೆ ಜಲಚರಗಳು!

ಚೌಸಾದ ಬಿಡಿಒ ಅಅಶೋಕ್ ಕುಮಾರ್ ಈ ಬಗ್ಗೆ ಮಾತನಾಡುತ್ತಾ ಇಲ್ಲಿ ಬಂದಿದ್ದು ಸುಮಾರು 40-45 ಶವಗಳಾಗಿರಬಹುದು. ವಿವಿಧ ಸ್ಥಳಗಳಿಂದ ನದಿಯಲ್ಲಿ ಹರಿದು ಇವುಗಳು ಇಲ್ಲಿ ಬಂದು ಸೇರಿವೆ. ಆದರೆ ಇವು ನಮ್ಮ ಜಿಲ್ಲೆಗೆ, ರಾಜ್ಯಕ್ಕೆ ಸೇರಿದ್ದಲ್ಲ. ನಾವು ಈ ನಿಟ್ಟಿನಲ್ಲಿ ಒಬ್ಬ ಕಾವಲುಗಾರರನ್ನು ನೇಮಿಸಿದ್ದು, ಅವರ ಸಮ್ಮುಖದಲ್ಲೇ ಇಲ್ಲಿನ ಶವಗಳನ್ನು ಸುಡಲಾಗುತ್ತಿದೆ. ಹೀಗಾಗಿ ಸದ್ಯ ಬರುತ್ತಿರುವ ಶವಗಳು ನಮ್ಮ ರಾಜ್ಯದಲ್ಲ. ಉತ್ತರ ಪ್ರದೇಶದಿಂದ ಹರಿದು ಬರುವ ಶವಗಳನ್ನು ತಡೆಯುವುದು ಸಾಧ್ಯ. ಹೀಗಿರುವಾಗ ಈ ಶವಗಳ ಅಂತ್ಯಸಂಸ್ಕಾರ ಮಾಡುವ ಪ್ರಕ್ರಿಯೆ ನಾವು ಆರಂಭಿಸುತ್ತೇವೆ ಎಂದಿದ್ದಾರೆ.

ಗಂಗೆ ಶುದ್ಧವಾದ ಬೆನ್ನಲ್ಲೇ ನದಿಯಲ್ಲಿ ಡಾಲ್ಫಿನ್‌ ಪ್ರತ್ಯಕ್ಷ!, ವಿಡಿಯೋ ವೈರಲ್

ಇನ್ನು ಈ ಸುದ್ದಿಯ ಮತ್ತೊಂದು ಮುಖವನ್ನು ಗಮನಿಸುವುದಾದರೆ, ಬಕ್ಸರ್‌ ಸೇರಿ ಅನೇಕ ಜಿಲ್ಲೆಗಳಲ್ಲಿ ಕೊರೋನಾ ಮಹಾಮಾರಿ ಹಬ್ಬಿದೆ. ಇನ್ನು ಪಾವನಿಯ ನಿವಾಸಿ ನರೇಂದ್ರ ಕುಮಾರ್ ಈ ಬಗ್ಗೆ ಮಾತನಾಡುತ್ತಾ ಚೌಸಾ ಘಾಟ್‌ನ ಸ್ಥಿತಿ ಬಹಳ ದಯನೀಯವಾಗಿದೆ. ಕೊರೋನಾದಿಂದಾಗಿ ಇಲ್ಲಿ ಪ್ರತಿದಿನ ಸುಮಾರು 100-200 ಜನ ಸೇರುತ್ತಿದ್ದಾರೆ. ಇಲ್ಲಿ ಸುಡಲು ಕಟ್ಟಿಗೆ ಕೊರತೆ ಎದುರಾಗಿದ್ದು, ಬೇರೆ ವಿಧಿ ಇಲ್ಲದೇ ಶವಗಳನ್ನು ನದಿಗೆಸೆಯುತ್ತಿದ್ದಾರೆ. ಇದರಿಂದ ಕೊರೋನಾ ಹರಡುವ ಭೀತಿ ಮತ್ತಷ್ಟು ಹೆಚ್ಚಾಗಿದೆ ಎಂದಿದ್ದಾರೆ. ಸದ್ಯ ಜನರು ಆಡಳಿತಾಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ. 

ಗಂಗೆಯನ್ನು ಶೇ. 50ರಷ್ಟು ಸ್ವಚ್ಛಗೊಳಿಸಿದ ಲಾಕ್‌ಡೌನ್: ಉಸಿರಾಡ್ತಿದ್ದಾಳೆ ಪ್ರಕೃತಿ ಮಾತೆ!

ಮೊದಲನೇ ಅಲೆ ವೇಳೆ ಪರಿಶುದ್ಧಳಾಗಿದ್ದ ಗಂಗೆ

ಇನ್ನು ಅತ್ಯಂತ ಮಲಿನ ನದಿಗಳಲ್ಲಿ ಒಂದಾಗಿರುವ ಗಂಗೆ, ಮೊದಲ ಕೊರೋನಾ ಅಲೆ ವೇಳೆ ಅತ್ಯಂತ ಶುದ್ಧಗೊಂಡಿತ್ತು. ಹೌದು ಮೊದಲ ಕೊರೋನಾ ಅಲೆ ತಡೆಯುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್‌ಡೌನ್ ಘೋಷಣೆಯಾಗಿತ್ತು. ಇಡೀ ದೇಶವೇ ಸ್ತಬ್ಧಗೊಂಡಿತ್ತು. ಕಾರ್ಖಾನೆ, ಮಂದಿರ ಎಲ್ಲಕ್ಕೂ ಬ್ರೇಕ್ ಬಿದ್ದಿತ್ತು. ಇವೆಲ್ಲದರ ಪರಿಣಾಮ ಎಂಬಂತೆ ರಾಶಿ ರಾಶಿ ಹಣ ಸುರಿದರೂ ಸ್ವಚ್ಛಗೊಳಿಸಲಾಗದ ಗಂಗಾ ನದಿ ಒಂದೇ ವಾರದಲ್ಲಿ ಶುದ್ಧಗೊಂಡಿತ್ತು, ಯಾವ ಮಟ್ಟಿಗೆ ಶುದ್ಧತೆ ಇತ್ತೆಂದರೆ ನದಿಯಲ್ಲಿ ಹರಿದಾಡುವ ಮೀನುಗಳೂ ಕಾಣುತ್ತಿದ್ದವು. ಅಲ್ಲದೇ ವಿಜ್ಞಾನಿಗಳು ಈ ನೀರು ಕುಡಿಯಲೂ ಯೋಗ್ಯವಾಗಿದೆ ಎಂಬ ಸರ್ಟಿಫಿಕೇಟ್‌ ನೀಡಿದ್ದರು. ಆದರೆ ಎರಡನೇ ಅಲೆ ಇದಕ್ಕೆ ತದ್ವಿರುದ್ಧವಾಗಿದೆ. ಲಾಕ್‌ಡೌನ್‌ನಂತಹ ಕ್ರಮ ಹೇರಿದ್ದರೂ ಹೆಣಗಳ ರಾಶಿಯಿಂದಾಗಿ ಈ ಬಾರಿ ಮತ್ತೆ ಗಂಗೆ ಮಲಿನಗೊಳ್ಳುತ್ತಿದ್ದಾಳೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona