ಕೊರೋನಾ ಹೆಚ್ಚಳಕ್ಕೆ ಮೋದಿ ಅಹಂಕಾರ ಕಾರಣ: ಕಾಂಗ್ರೆಸ್‌| ಲಸಿಕೆಯೂ ಲಭ್ಯವಿಲ್ಲ, ಉದ್ಯೋಗವೂ ಇಲ್ಲ| ‘ಆಮ್‌’ ತಿನ್ನಿ, ‘ಆಮ್‌ ಆದ್ಮಿ’ಯನ್ನು ತಿನ್ನಬೇಡಿ

ನವದೆಹಲಿ(ಏ.12): ದೇಶದಲ್ಲಿ ದಿನೇದಿನೇ ಕೊರೋನಾ ಪ್ರಕರಣಗಳು ಹೊಸ ದಾಖಲೆ ಬರೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ತೀವ್ರ ವಾಗ್ದಾಳಿ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಅಹಂಕಾರ ಹಾಗೂ ಅಸಮರ್ಥತೆಯಿಂದ ಕೋವಿಡ್‌ ಸೋಂಕು ಭಾರತೀಯರ ಜೀವನ ಹಾಗೂ ಆರ್ಥಿಕತೆ ಮೇಲೆ ಅಪಾರ ಹಾನಿ ಮಾಡುತ್ತಿದೆ. ಕೇಂದ್ರ ಸರ್ಕಾರದ ನೀತಿಗಳು ಸಮಾಜದ ಪ್ರತಿಯೊಂದು ವರ್ಗವನ್ನೂ ಸಮಸ್ಯೆಗೆ ದೂಡಿವೆ ಎಂದು ಕಿಡಿಕಾರಿದೆ.

Add Asianetnews Kannada as a Preferred SourcegooglePreferred

‘ಕೊರೋನಾ ವೈರಸ್‌ ಮೇಲೆ ನಿಯಂತ್ರಣ ಇಲ್ಲ. ಅವಶ್ಯವಿರುವಷ್ಟುಲಸಿಕೆಗಳೂ ಲಭ್ಯವಿಲ್ಲ. ಉದ್ಯೋಗವಿಲ್ಲ. ಕಾರ್ಮಿಕರು ಹಾಗೂ ರೈತರನ್ನು ಆಲಿಸುವವರು ಇಲ್ಲ. ಸಣ್ಣ ಉದ್ದಿಮೆಗಳಿಗೆ ರಕ್ಷಣೆ ಇಲ್ಲ. ಮಧ್ಯಮ ವರ್ಗಕ್ಕೆ ತೃಪ್ತಿ ಇಲ್ಲ. ಆಮ್‌ (ಮಾವು) ತಿನ್ನಿ. ಆದರೆ ಆಮ್‌ ಆದ್ಮಿ (ಶ್ರೀಸಾಮಾನ್ಯರು)ಯನ್ನೂ ತಿನ್ನಬೇಡಿ’ ಎಂದು ಮೋದಿ ಹೆಸರೆತ್ತದೆ ಟ್ವೀಟರ್‌ನಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದೇ ವೇಳೆ, ‘ಒಂದು ವರ್ಷವಾದರೂ ಕೊರೋನಾ ಭಾರತೀಯರ ಜೀವನ ಹಾಗೂ ಆರ್ಥಿಕತೆ ಮೇಲೆ ಹಾನಿ ಮಾಡುತ್ತಿದೆ. ಇದಕ್ಕೆಲ್ಲ ಮೋದಿ ಸರ್ಕಾರದ ದುರಹಂಕಾರ, ಅಸಮರ್ಥತೆಯೇ ಕಾರಣ’ ಎಂದು ಕಾಂಗ್ರೆಸ್‌ ಕೂಡ ಟ್ವೀಟ್‌ ಮಾಡಿ ಕಿಡಿಕಾರಿದೆ.