ಕೋವಿಡ್ ಆರ್ಭಟದಲ್ಲೂ ಶೇ.99 ಮಂದಿ ಚೇತರಿಕೆ!
ಕೋವಿಡ್ ಆರ್ಭಟದಲ್ಲೂ ಶೇ.99 ಮಂದಿ ಚೇತರಿಕೆ| ಮರಣ ಪ್ರಮಾಣ 1.12% ಮಾತ್ರ: ವರದಿ| ಆತಂಕಕಾರಿ ಪರಿಸ್ಥಿತಿ ನಡುವೆ ಆಶಾಕಿರಣ
ನವದೆಹಲಿ(ಏ.27): ದೇಶದಲ್ಲಿ ಆತಂಕಕಾರಿ ಪ್ರಮಾಣದಲ್ಲಿ ಕೊರೋನಾ ಸೋಂಕು ಪತ್ತೆಯಾಗುತ್ತಿದೆ. ದಿನೇದಿನೇ ಸಾವಿನ ಸಂಖ್ಯೆ ಹೊಸ ದಾಖಲೆ ಬರೆಯುತ್ತಿದೆ. ಆದರೂ ಈ ಆತಂಕಕಾರಿ ಪರಿಸ್ಥಿತಿಯಲ್ಲೂ ಆಶಾಕಿರಣ ಗೋಚರವಾಗ ತೊಡಗಿದೆ. ಸೋಂಕು, ಸಾವು ಅಧಿಕವಾಗಿದ್ದರೂ, ಚೇತರಿಕೆ ಪ್ರಮಾಣ ಶೇ.99ರಷ್ಟಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಆಕ್ಸಿಜನ್, ಬೆಡ್ ಸಿಗದೆ ಜನರು ಪರದಾಡುವುದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ರೋಗಿ ಸಾವಿಗೀಡಾಗುವುದು, ಅವರ ಅಂತ್ಯಸಂಸ್ಕಾರಕ್ಕೆ ಬಂಧುಗಳು ಪರದಾಡುವುದು, ಒಂದೇ ಕಡೆ ಹಲವು ಚಿತೆಗಳು ಹೊತ್ತಿ ಉರಿಯುತ್ತಿರುವಂತಹ ಮನಕಲಕುವ ದೃಶ್ಯಗಳು ದಿನೇದಿನೇ ವರದಿಯಾಗುತ್ತಿವೆ. ಆದರೆ ಅದೇ ಸಂದರ್ಭದಲ್ಲಿ ಪ್ರತಿನಿತ್ಯ ಲಕ್ಷಾಂತರ ಮಂದಿ ಚೇತರಿಸಿಕೊಂಡು ಮನೆಗೆ ಮರಳುತ್ತಿದ್ದಾರೆ ಎಂದು ಆಂಗ್ಲವಾಹಿನಿಯೊಂದು ವರದಿ ಮಾಡಿದೆ.
ದೇಶದಲ್ಲಿ ಸದ್ಯ ಚೇತರಿಕೆ ಪ್ರಮಾಣ ಶೇ.98.88ರಷ್ಟಿದೆ. ಮರಣ ಪ್ರಮಾಣ ಶೇ.1.12ರಷ್ಟಿದೆ. ಅಂದರೆ ಕೋವಿಡ್ ಕಾಣಿಸಿಕೊಂಡವರಲ್ಲಿ ಶೇ.1.12ರಷ್ಟುಜನರು ಸಾವಿಗೀಡಾಗುತ್ತಿದ್ದಾರೆ. ಉಳಿದವರು ಕೊರೋನಾ ರೂಪಾಂತರಿ ವಿರುದ್ಧವೂ ಹೋರಾಡಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದೆ.