ಗಡಿ ಬಂದ್ ಮಾಡಿದ ಕರ್ನಾಟಕ ವಿರುದ್ಧ ಕೇಂದ್ರಕ್ಕೆ ದೂರು: ಕೇರಳ ಸಿಎಂ!
ಕೇರಳದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆ| ಗಡಿ ಬಂದ್ ಮಾಡಿದ ಕರ್ನಾಟಕ ವಿರುದ್ಧ ಕೇಂದ್ರಕ್ಕೆ ದೂರು: ಕೇರಳ ಸಿಎಂ
ನವದೆಹಲಿ(ಫೆ.23): ಕೇರಳದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಬೆನ್ನಲ್ಲೇ, ಆ ರಾಜ್ಯದಿಂದ ಕರ್ನಾಟಕಕ್ಕೆ ಬರುವವರ ಮೇಲಿನ ನಿಯಂತ್ರಣಕ್ಕಾಗಿ ಕರ್ನಾಟಕ ಸರ್ಕಾರವು ಕೆಲವು ಗಡಿ ರಸ್ತೆಗಳನ್ನು ಬಂದ್ ಮಾಡಿದೆ. ಇದಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೋಮವಾರ ಸಂಜೆ ಮಾತನಾಡಿದ ಪಿಣರಾಯಿ, ‘ಈ ಸಂಬಂಧ ಕರ್ನಾಟಕ ಸರ್ಕಾರದ ವಿರುದ್ಧ ಕೇಂದ್ರ ಸರ್ಕಾರಕ್ಕೆ ದೂರು ನೀಡುತ್ತೇವೆ’ ಎಂದಿದ್ದಾರೆ.
‘ಕೇರಳದಿಂದ ಕರ್ನಾಟಕಕ್ಕೆ ಪ್ರವೇಶ ಬಯಸುವ ವ್ಯಕ್ತಿಗಳ ಪೈಕಿ ಆರ್ಟಿ-ಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದ ವ್ಯಕ್ತಿಗಳನ್ನು ಮಾತ್ರವೇ ರಾಜ್ಯ ಪ್ರವೇಶಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸರ್ಕಾರ ಅವಕಾಶ ಕಲ್ಪಿಸಿದೆ. ಆದರೆ ಅಗತ್ಯ ವಸ್ತುಗಳ ಸಾಗಣೆಯ ವಾಹನಗಳಿಗೆ ಗಡಿ ಮಾರ್ಗಗಳ ಬಂದ್ನಿಂದ ವಿನಾಯ್ತಿ ನೀಡಲಾಗಿದೆ ಎಂದು ಕರ್ನಾಟಕದ ಡಿಜಿಪಿ ತಿಳಿಸಿದ್ದಾರೆ’ ಪಿಣರಾಯಿ ಹೇಳಿದ್ದಾರೆ.
ಕಳೆದ ವರ್ಷದ ಮಾಚ್ರ್ನಲ್ಲಿ ಕೊರೋನಾ ಸೋಂಕು ಉತ್ತುಂಗ ಸ್ಥಿತಿಯಲ್ಲಿದ್ದಾಗಲೂ ಕರ್ನಾಟಕ ಸರ್ಕಾರವು ಕೇರಳಕ್ಕೆ ಸಂಪರ್ಕ ಕಲ್ಪಿಸುವ ಗಡಿಯನ್ನು ಬಂದ್ ಮಾಡಿತ್ತು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಬೇಕೆಂದು ಪಿಣರಾಯಿ ವಿಜಯನ್ ಒತ್ತಾಯಿಸಿದ್ದರು.