ಕಾಯುತ್ತಲೇ ನಿಂತ ಮೋದಿ: ಪಿಎಂಗೂ ಮೊದಲೇ ಆಕ್ಸಿಜನ್ ಪ್ಲಾಂಟ್ ಉದ್ಘಾಟಿಸಿದ ಸಿಎಂ ಸೊರೇನ್!
* ಮೋದಿ ಉದ್ಘಾಟಿಸುವ ಮೊದಲೇ ಆಕ್ಸಿಜನ್ ಪ್ಲಾಂಟ್ ಲೋಕಾರ್ಪಣೆ ಮಾಡಿದ ಸಿಎಂ
* ಸಿಎಂ ಹೇಮಂತ್ ಸೊರೆನ್ ನಡೆಗೆ ಬಿಜೆಪಿ ಕಿಡಿ
* ಝಾರ್ಖಂಡ್ ಸಿಎಂ ಮೋದಿಯನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ ಬಿಜೆಪಿ
ರಾಂಚಿ(ಅ.07): ಜಾರ್ಖಂಡ್(Jharkhand) ಮುಖ್ಯಮಂತ್ರಿ ಹೇಮಂತ್ ಸೊರೆನ್(Hemant Soren) ಸದ್ಯ ಭಾರೀ ಚರ್ಚೆಯಲ್ಲಿದ್ದಾರೆ. ಹೌದು ಗುರುವಾರದಂದು ಪ್ರಧಾನಿ ನರೇಂದ್ರ ಮೋದಿ(narendra Modi) ವರ್ಚುವಲ್ ಆಗಿ ಉದ್ಘಾಟಿಸಬೇಕಿದ್ದ ಪಿಎಂ ಕೇರ್ ಫಂಡ್ನಿಂದ(PM Cares Fund) ಸ್ಥಾಪಿಸಲಾದ ಆಮ್ಲಜನಕ ಘಟಕವನ್ನು(Oxygen Plant), ಸಿಎಂ ಸೊರೆನ್ ಮುಂಚಿತವಾಗಿಯೇ ಉದ್ಘಾಟಿಸಿರುವುದೇ ಇದಕ್ಕೆ ಕಾರಣವಾಗಿದೆ. ಆದರೀಗ ಪಿಎಂಗೂ ಮೊದಲೇ ಘಟಕ ಉದ್ಘಾಟಿಸಿದ ಸಿಎಂ ಸೊರೆನ್ ನಡೆಗೆ ಕೇಂದ್ರ ಕಿಡಿ ಕಾರಿದೆ. ಮತ್ತೊಂದೆಡೆ ಹೇಮಂತ್ ಸೊರೆನ್ ಪ್ರಧಾನಿಯನ್ನು ಅವಮಾನಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. PM CARES ಬಗ್ಗೆ ಪ್ರತೀ ಕ್ಷಣವೂ ಪ್ರಶ್ನಿಸುವ ಪ್ರತಿಪಕ್ಷಗಳು, PM CARES ನಿಂದ ನಿರ್ಮಿಸಲಾದ ಆಮ್ಲಜನಕ ಘಟಕವನ್ನು ಉದ್ಘಾಟಿಸಿ ಅದರ ಶ್ರೇಯಸ್ಸು ಗಳಿಸಿಕೊಂಡಿದ್ದಾರೆಂದು ಕಿಡಿ ಕಾರಿವೆ.
ವಾಸ್ತವವಾಗಿ, ಸಿಎಂ ಸೊರೆನ್ ರಾಜ್ಯದಲ್ಲಿ ಅನೇಕ ಆರೋಗ್ಯ ಸೌಲಭ್ಯಗಳನ್ನು ಉದ್ಘಾಟಿಸಿದ್ದಾರೆ. ಇದರಲ್ಲಿ ಪಿಎಂ ಕೇರ್ಸ್ ನಿಧಿಯಿಂದ 19 ಜಿಲ್ಲೆಗಳಲ್ಲಿ 27 ಸ್ಥಳಗಳಲ್ಲಿ ಅಳವಡಿಸಲಾಗಿರುವ ಆಮ್ಲಜನಕ ಸ್ಥಾವರಗಳೂ ಸೇರಿವೆ. ಆದರೆ ಪ್ರಧಾನ ಮಂತ್ರಿ ಇದನ್ನು ಗುರುವಾರ ದೇಶಾದ್ಯಂತ ಏಕಕಾಲದಲ್ಲಿ ಉದ್ಘಾಟಿಸಲಿದ್ದರು. ಹೀಗಾಗುವುದಕ್ಕೂ ಮೊದಲು ಸೊರೆನ್ ರಿಬ್ಬನ್ ಕತ್ತರಿಸಿದ್ದಾರೆ. ಸೊರೆನ್ ಸರ್ಕಾರದ ಈ ನಡೆಗೆ ಬಿಜೆಪಿ ಕಿಡಿ ಕಾರಿದೆ. ಆದರೆ ಅತ್ತ ಸೊರೆನ್ ಅವರ ಪಕ್ಷ ಜೆಎಂಎಂ(JMM) ಆಮ್ಲಜನಕ ಅಗತ್ಯ ವಸ್ತುಗಳಲ್ಲಿ ಬರುತ್ತದೆ, ಹೀಗಿರುವಾಗ ಅದರ ಉದ್ಘಾಟನೆಯ ಮುಹೂರ್ತಕ್ಕೆ ಕಾಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಒಂದು ದಿನ ಮುಂಚಿತವಾಗಿ ಉದ್ಘಾಟನೆ ಮಾಡಿದ್ದರಲ್ಲಿ ಅರ್ಥವಿಲ್ಲ
ರಾಂಚಿಯ ಬಿಜೆಪಿ ಸಂಸದ ಸಂಜಯ್ ಸೇಠ್, ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಈ ರೀತಿ ಮಾಡುವ ಮೂಲಕ ಪ್ರಧಾನಿಯನ್ನು ಅವಮಾನಿಸಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸೇಠ್ ಕೊಕರೋನಾ ವಿರುದ್ಧದ ಹೋರಾಟ ಕೊನೆಗೊಳಿಸಲು, ಗೌರವಾನ್ವಿತ ಪ್ರಧಾನಿ ನಾಳೆ ಪಿಎಂಕೇರ್ಸ್ ನಿಧಿಯಿಂದ ಪಿಎಸ್ಎ ಪ್ಲಾಂಟ್ ಅನ್ನು ಉದ್ಘಾಟಿಸಲಿದ್ದಾರೆ. ಜಾರ್ಖಂಡ್ನಲ್ಲಿ ಕೂಡ ಇಂತಹ 27 ಪಿಎಸ್ಎಗಳನ್ನು ತಯಾರಿಸಲಾಗಿದೆ. ಆಸರೀಗ ಗೌರವಾನ್ವಿತ ಪ್ರಧಾನ ಮಂತ್ರಿಯ ಇದನ್ನು ಉದ್ಘಾಟಿಸುವ ಒಂದು ದಿನ ಮೊದಲು ರಾಜ್ಯ ಸರ್ಕಾರವನ್ನು ಇದಕ್ಕೆ ಚಾಲನೆ ನೀಡುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯ ಅವಮಾನ ಸಹಿಸುವುದಿಲ್ಲ
ಈ ಬಗ್ಗೆ ಮತ್ತೊಂದು ಟ್ವೀಟ್ ಮಾಡಿರುವ ಸೇಠ್ ಮುಖ್ಯಮಂತ್ರಿಗಳೇ, ನೀವು ಏನು ಮಾಡಲು ಪ್ರಯತ್ನಿಸುತ್ತಿದ್ದೀರಿ? ಇದು ಪ್ರಜಾಪ್ರಭುತ್ವ ವ್ಯವಸ್ಥೆಗಳಿಗೆ ಮಾಡಿದ ಅವಮಾನ. ರಾಷ್ಟ್ರೀಯ ಮಟ್ಟದಲ್ಲಿ ಏಕಕಾಲದಲ್ಲಿ ಪ್ರಾರಂಭಿಸಲು ನಿರ್ಧರಿಸಿದ ಯೋಜನೆಯನ್ನು, ಜಾರ್ಖಂಡ್ ಸರ್ಕಾರವು ಮೊದಲೇ ಉದ್ಘಾಟಿಸುವುದು ಗೌರವಾನ್ವಿತ ಪ್ರಧಾನಿಗೆ ಮಾಡಿದ ಅವಮಾನ. ಗೌರವಾನ್ವಿತ ಪ್ರಧಾನಿಯ ಅವಮಾನವನ್ನು ಸಹಿಸುವುದಿಲ್ಲ ಎಂದಿದ್ದಾರೆ.
ಜನಪ್ರಿಯತೆಗಾಗಿ ಸರ್ಕಸ್
ಇನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆದಿತ್ಯ ಸಾಹು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಅಕ್ಟೋಬರ್ 7 ರಂದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪಿಎಂ ಕೇರ್ ನಿಧಿಯಿಂದ ದೇಶದಾದ್ಯಂತ ಸ್ಥಾಪಿಸಿರುವ ಆಮ್ಲಜನಕ ಘಟಕದ ಉದ್ಘಾಟನೆಯನ್ನು ನಿಗದಿಪಡಿಸಲಾಗಿದೆ. ಹೀಗಿರುವಾಗ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ತರಾತುರಿಯಲ್ಲಿ ಒಂದು ದಿನ ಮೊದಲು ಆಮ್ಲಜನಕ ಘಟಕವನ್ನು ಉದ್ಘಾಟಿಸಿದ್ದಾರೆ. ಇದು ಕೇವಲ ಜನಪ್ರಿಯತೆಗಾಗಿ ಮಾಡಿದ್ದಾರೆ ಎಂಬುವುದು ಸ್ಪಷ್ಟ. ಮುಖ್ಯಮಂತ್ರಿಗಳ ಈ ನಡೆಯನ್ನು ಬಿಜೆಪಿ ಖಂಡಿಸುತ್ತದೆ. ಪಕ್ಷದ ಎಲ್ಲ ಸಂಸದರು ಮತ್ತು ಶಾಸಕರು ಉದ್ಘಾಟನಾ ಕಾರ್ಯಕ್ರಮವನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ.