ರಾಹುಲ್‌ ಆಗಲ್ಲ ಎಂದರೆ, ಬೇರೆ ಅಧ್ಯಕ್ಷರ ಹುಡುಕಿ: ಶಶಿ ತರೂರ್‌ ಬೇಡಿಕೆ| ದೇಶದ ಜನಸಾಮಾನ್ಯರಲ್ಲಿ ಕಾಂಗ್ರೆಸ್‌ಗೆ ನೆಲೆಯಿಲ್ಲ ಎಂಬ ಮನಸ್ಥಿತಿಯನ್ನು ತೊಡೆದು ಹಾಕಲು ಇದು ಅತ್ಯಗತ್ಯ

ನವದೆಹಲಿ[ಫೆ.24]: ದೇಶದ ಜನಸಾಮಾನ್ಯರಲ್ಲಿ ಕಾಂಗ್ರೆಸ್‌ಗೆ ನೆಲೆಯಿಲ್ಲ ಎಂಬ ಮನಸ್ಥಿತಿಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಪಕ್ಷದ ನಾಯಕತ್ವ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಿಕೊಳ್ಳಬೇಕು ಎಂದು ಪಕ್ಷದ ಹಿರಿಯ ಸಂಸದ ಶಶಿ ತರೂರ್‌ ಪ್ರತಿಪಾದಿಸಿದ್ದಾರೆ.

ಈ ಬಗ್ಗೆ ಭಾನುವಾರ ಪಿಟಿಐ ಸುದ್ದಿ ಸಂಸ್ಥೆ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಕಾಂಗ್ರೆಸ್‌ ಸಂಸದರೂ ಆಗಿರುವ ತರೂರ್‌, ‘ರಾಹುಲ್‌ ಗಾಂಧಿ ಅವರು ಪಕ್ಷದ ಅಧ್ಯಕ್ಷ ಸ್ಥಾನವನ್ನು ಪುನಃ ವಹಿಸಿಕೊಳ್ಳುವುದಾದರೆ, ವಹಿಸಿಕೊಳ್ಳಬೇಕು. ಅವರಿಗೆ ಈ ಉನ್ನತ ಸ್ಥಾನ ವಹಿಸಿಕೊಳ್ಳಲು ಇಚ್ಛೆ ಇರದಿದ್ದರೆ, ಪೂರ್ಣ ಪ್ರಮಾಣದ ನಾಯಕತ್ವವನ್ನು ವಹಿಸಲು ಪಕ್ಷದ ಸೂಕ್ತ ಅಭ್ಯರ್ಥಿಯನ್ನು ಕಂಡುಕೊಳ್ಳಬೇಕು. ರಾಷ್ಟಾ್ರದ್ಯಂತ ಪಕ್ಷದ ಪುನಶ್ಚೇತನಕ್ಕೆ ಇದು ಅಗತ್ಯ’ ಎಂದು ಹೇಳಿದ್ದಾರೆ.

ದೇಶದಲ್ಲಿ ಬಿಜೆಪಿಯ ವಿಭಜಕ ನೀತಿಗಳಿಗೆ ಕಾಂಗ್ರೆಸ್‌ ಪರಾರ‍ಯಯವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಜನ ಸಾಮಾನ್ಯರು ಕಾಂಗ್ರೆಸ್‌ಗೆ ನೆಲೆಯಿಲ್ಲ ಎಂಬ ಅಭಿಪ್ರಾಯಕ್ಕೆ ಬರುತ್ತಿದ್ದಾರೆ. ಇದು ನಮ್ಮಲ್ಲಿ ಆತಂಕವನ್ನುಂಟು ಮಾಡಿದೆ ಎಂದು ಅವರು ಹೇಳಿದರು.