ಕುಡಿಯುವ ನೀರಿನ ಮಡಿಕೆ ಮುಟ್ಟಿದ ಕಾರಣಕ್ಕೆ ದಲಿತ ವಿದ್ಯಾರ್ಥಿಯನ್ನು ಶಿಕ್ಷಕನೇ ಥಳಿಸಿದ ಹಾಗೂ ಆಸ್ಪತ್ರೆಯಲ್ಲಿ ಬಾಲಕನ ನಿಧನ ರಾಜಸ್ಥಾನ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ತಲೆನೋವಾಗಿ ಪರಿಣಿಮಿಸಿದೆ. ಈ ಘಟನೆಯಿಂದ ಬೇಸತ್ತ ಕಾಂಗ್ರೆಸ್ ಶಾಸಕ ರಾಜೀನಾಮೆ ನೀಡಿದ್ದಾರೆ.

ಜೈಪುರ್(ಆ.15): ಅಜ್ಞಾನ ದೂರ ಮಾಡಬೇಕಿದ್ದ ಶಾಲಾ ಶಿಕ್ಷನೆ 9 ವರ್ಷದ ಬಾಲಕನಿಗೆ ದಲಿತ ಅನ್ನೋ ಕಾರಣಕ್ಕೆ ಥಳಿಸಿದ ಹಾಗೂ ಬಾಲಕ ಸಾವಿಗೆ ಕಾರಣಾದ ಘಟನೆ ರಾಜಸ್ಥಾನ ಸರ್ಕಾರದ ಬುಡ ಅಲುಗಾಡಿಸುತ್ತಿದೆ. ಶಾಲೆಯಲ್ಲಿಟ್ಟಿದ್ದ ನೀರಿನ ಮಡೆಕೆಯನ್ನು ಮುಟ್ಟಿದ ಅನ್ನೋ ಕಾರಣಕ್ಕೆ ದಲಿತ ವಿದ್ಯಾರ್ಥಿಗೆ ಮಾರಣಾಂತಿಕ ಹಲ್ಲೆ ಮಾಡಲಾಗಿತ್ತು. ಬಳಿಕ ಆಸ್ಪತ್ರೆಯಲ್ಲಿ ವಿದ್ಯಾರ್ಥಿ ಮೃತಪಟ್ಟಿದ್ದ. ಈ ಘಟನೆಯಿಂದ ಮನ ನೊಂದಿರುವ ದಲಿತ ಶಾಸಕ ಪನ ಚಂದ್ ಮೇಘ್ವಾಲ್ ರಾಜೀನಾಮೆ ನೀಡಿದ್ದಾರೆ. ನನ್ನ ಸಮುದಾಯದ ಹಕ್ಕುಗಳನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಬಾಲಕನ ನಿಧನ ತೀವ್ರವಾಗಿ ಮನಸಿಗೆ ಘಾಸಿತಂದಿದೆ. ನನ್ನ ಸಮುದಾಯದ ಹಕ್ಕುಗಳನ್ನು ಸಂರಕ್ಷಿಸಲು ಸಾಧ್ಯವಾಗಿಲ್ಲ ಅಂದ ಮೇಲೆ ಶಾಸಕ ಸ್ಥಾನದಲ್ಲಿರಲು ನಾನು ಸೂಕ್ತನಲ್ಲ. ಹೀಗಾಗಿ ರಾಜೀನಾಮೆ ನೀಡುತ್ತೇನೆ ಎಂದು ಪನಾ ಚಂದ್ ಪತ್ರದಲ್ಲಿ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ದೇಶ 75ನೇ ಸ್ವಾತಂತ್ರ್ಯ ಸಂಭ್ರಮದಲ್ಲಿದೆ. 75 ವರ್ಷ ಕಳೆದರೂ ಒರ್ವ ಬಾಲಕ ನೀರಿನ ಮಡೆಕೆ ಮುಟ್ಟಿದ ಕಾರಣಕ್ಕೆ ಥಳಿಸಲಾಗಿದೆ ಎಂದರೆ ನಿಜಕ್ಕೂ ನಂಬಲು ಆಗುತ್ತಿಲ್ಲ. ದಲಿತ ವ್ಯಕ್ತಿಗೆ ಥಳಿತ, ದಲಿತ ವ್ಯಕ್ತಿಯ ಹತ್ಯೆ ಸೇರಿದಂತೆ ಹಲವು ಘಟನೆಗಳು ರಾಜಸ್ಥಾನದಲ್ಲಿ ನಡೆಯುತ್ತಲೇ ಇದೆ. ಕಳೆದ ಕೆಲ ವರ್ಷದಲ್ಲಿ ರಾಜಸ್ಥಾನದಲ್ಲಿ ದಲಿತರ ಮೇಲಿನ ಹತ್ಯೆಗಳು, ದಾಳಿಗಳು, ನರಮೇಧ ನಡೆಯುತ್ತಲೇ ಇದೆ. ಆದರೆ ಯಾವುದೇ ಕಟ್ಟು ನಿಟ್ಟಿನ ಕ್ರಮಗಳು ನಡೆದಿಲ್ಲ. ಆರೋಪಿಗಳು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಸಂವಿಧಾನ ದಲಿತರಿಗೆ ನೀಡಿದ ಹಕ್ಕುಗಳನ್ನ ಸಂರಕ್ಷಿಸಲು, ಹಕ್ಕುಗಳನ್ನು ದಲಿತರಿಗೆ ಸಿಗುವಂತೆ ಮಾಡಲು ಸಾಧ್ಯವಾಗದಿದ್ದರೆ, ನಾನು ಹುದ್ದೆಯಲ್ಲಿದ್ದು ಏನು ಪ್ರಯೋಜನ. ಹೀಗಾಗಿ ರಾಜೀನಾಮೆ ನೀಡುತ್ತೇನೆ ಎಂದು ಪನಾ ಚಂದ್ ಹೇಳಿದ್ದಾರೆ.

ಮೇಲ್ಜಾತಿಯವರ ನೀರಿನ ಮಡಿಕೆ ಮುಟ್ಟಿದ್ದಕ್ಕೆ ದಲಿತ ವಿದ್ಯಾರ್ಥಿಯ ಹಲ್ಲೆ: ಬಾಲಕ ಸಾವು

ಹುದ್ದೆಯಲ್ಲಿ ಇಲ್ಲದಿದ್ದರೂ ನಾನು ದಲಿತರ ಪರ ಕೆಲಸ ಮಾಡುತ್ತೇನೆ. ರಾಜಸ್ತಾನದಲ್ಲಿ ಮಹತ್ತರ ಬದಲಾವಣೆಗ ಶ್ರಮಿಸುತ್ತೇನೆ ಎಂದು ಪನಾ ಚಂದ್ ಹೇಳಿದ್ದಾರೆ.

ಘಟನೆ ವಿವರ
 ಕಳೆದ ಜು. 20 ರಂದು ಇಲ್ಲಿನ ಸುರಾಣಾ ಗ್ರಾಮದ ಖಾಸಗಿ ಶಾಲೆಯಲ್ಲಿ ಬಾಲಕ ಇಂದ್ರ ಮೇಘವಾಲ್‌ನನ್ನು ನೀರಿನ ಮಡಿಕೆ ಮುಟ್ಟಿದ್ದಕ್ಕೆ ಶಿಕ್ಷಕರು ಥಳಿಸಿದ್ದರು. ಈ ವೇಳೆ ಪ್ರಜ್ಞೆ ತಪ್ಪಿದ್ದ ಬಾಲಕನನ್ನು 3 ಬೇರೆ ಬೇರೆ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೇ ಆತ ಶನಿವಾರ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಲಕನನ್ನು ಥಳಿಸಿದ ಶಿಕ್ಷಕ ಚಾಯಿಲ್‌ ಸಿಂಗ್‌ (40)ನನ್ನು ಹತ್ಯೆಯ ಆರೋಪ ಹಾಗೂ ಪರಿಶಿಷ್ಟಜಾತಿ ಹಾಗೂ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯ ಅಡಿಯಲ್ಲಿ ಬಂಧಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯಂತೆ ತಡೆಯಲು ಆ ಪ್ರದೇಶದಲ್ಲಿ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ರಾಜ್ಯ ಶಿಕ್ಷಣ ಇಲಾಖೆ ಘಟನೆ ಕುರಿತು ವಿಚಾರಣೆ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳನ್ನು ಘಟನೆಯ ತನಿಖೆ ನಡೆಸುವಂತೆ ನೇಮಿಸಲಾಗಿದ್ದು, ವಾರದ ಒಳಗೆ ವರದಿಯನ್ನು ಬ್ಲಾಕ್‌ ಶಿಕ್ಷಣ ಅಧಿಕಾರಿ ಬಳಿ ಸಲ್ಲಿಸುವಂತೆ ಸೂಚಿಸಲಾಗಿದೆ. ರಾಜಸ್ಥಾನದ ಪರಿಶಿಷ್ಟಜಾತಿ ಆಯೋಗದ ಮುಖ್ಯಸ್ಥ ಖಿಲಾಡಿ ಲಾಲ್‌ ಬೈರ್ವಾ ಘಟನೆ ತ್ವರಿತ ತನಿಖೆಗೆ ಆಗ್ರಹಿಸಿದ್ದಾರೆ.

ದಲಿತ ಮುಖಂಡ ನರಸಿಂಹಮೂರ್ತಿ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್!