ಬಸ್ ಪಾಲಿಟಿಕ್ಸ್: ಪ್ರಿಯಾಂಕಾಗೆ ಛೀಮಾರಿ, ಯೋಗಿಗೆ ಜೈ ಎಂದ ಕಾಂಗ್ರೆಸ್ ಶಾಸಕಿ!
ಉತ್ತರ ಪ್ರದೇಶದಲ್ಲಿ ಲಾಕ್ಡೌನ್ನಿಂದ ಸಿಕ್ಕಾಕೊಂಡ ಕಾರ್ಮಿಕರು| ರಾಜಕೀಯ ತಿರುವು ಪಡೆದುಕೊಂಡ ಕಾರ್ಮಿಕರ ವಿಚಾರ\ ಒಂದು ಸಾವಿರ ಬಸ್ ರೆಡಿ ಮಾಡಿದೆ ಎಂದ ಕಾಂಗ್ರೆಸ್| ಒಂದು ಸಾವಿರ ಬಸ್ ಪಟ್ಟಿಯಲ್ಲಿ ಅರ್ಧಕ್ಕೂ ಅಧಿಕ ದ್ವಿ ಹಾಗೂ ತ್ರಿ ಚಕ್ರ ವಾಹನಗಳು| ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ ಅದೇ ಪಕ್ಷದ ಶಾಸಕಿ
ಲಕ್ನೋ(ಮೇ.20): ಉತ್ತರ ಪ್ರದೇಶದಲ್ಲಿ ಕಾರ್ಮಿಕರಿಗಾಗಿ ಆಯೋಜಿಸಿರುಉವ ಒಂದು ಸಾವಿರ ಬಸ್ ವಿಚಾರ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕಿ ಹಾಗೂ ಗಾಂಧಿ ಕುಟುಂಬಕ್ಕೆ ಬಹಳ ಆಪ್ತರು ಎನ್ನಲಾದ ಅದಿತಿ ಸಿಂಗ್ ಕೂಡಾ ಈ ಚರ್ಚೆಯಲ್ಲಿ ಧ್ವನಿ ಎತ್ತಿದ್ದಾರೆ. ಆದರೆ ಅದಿತಿ ಸಿಂಗ್ ಬಿಜೆಪಿಯಲ್ಲ, ಬದಲಾಗಿ ತನ್ನದೇ ಪಕ್ಷವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದಾರೆ. ಟ್ವೀಟ್ ಮೂಲಕ ಕಾಂಗ್ರೆಸ್ ಪಕ್ಷ ಹಾಗೂ ಪ್ರಿಯಯಾಂಕಾ ಗಾಂಧಿ ವಿರುದ್ಧ ಕಿಡಿ ಕಾರಿರುವ ಅದಿತಿ ಯೋಗಿ ಆದಿತ್ಯನಾಥ್ರನ್ನು ಹಾಡಿ ಹೊಗಳಿದ್ದಾರೆ.
ಈವರೆಗೆ ಬಿಜೆಪಿ ಹಾಗೂ ಯೋಗಿ ಆದಿತ್ಯನಾಥ್ ಸರ್ಕಾರ ಮಾತ್ರ ಕಾಂಗ್ರೆಸ್ ಕಾರ್ಮಿಕರ ವಿಚಾರದಲ್ಲಿ ರಾಜಕೀಯ ನಡೆಸುತ್ತಿದೆ ಎಂದು ಆರೋಪಿಸುತ್ತಿತ್ತು. ಆದರೀಗ ಕಾಂಗ್ರೆಸ್ ಪಕ್ಷದ ನಾಯಕರೇ ಪಕ್ಷದ ವಿರುದ್ಧ ಕಿಡಿ ಕಾರಲಾರಂಭಿಸಿದ್ದಾರೆ. ರಾಯ್ಬರೇಲಿಯ ಸದರ್ನ ಕಾಂಗ್ರೆಸ್ ಶಾಸಕಿ ಅದಿತಿ ಸಿಂಗ್ ಕಾಂಗ್ರೆಸ್ ವಿರುದ್ಧವೇ ಸಿಡಿದೆದ್ದಿದ್ದಾರೆ. ಅಲ್ಲದೇ ಇದೆಂತಹ ಕ್ರೂರ ತಮಾಷೆ? ಎಂದು ಪ್ರಶ್ನಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅದಿತಿ ಸಿಂಗ್ ಸಂಕಷ್ಟದ ವೇಳೆ ಇಂತಹ ರಾಜಕೀಯದ ಅಗತ್ಯವೇನು? ಒಂದು ಸಾವಿರ ಬಸ್ಗಳ ಪಟ್ಟಿ ಕಳುಹಿಸಿದರು, ಆದರೆ ಅದರಲ್ಲಿ ಅರ್ಧಕ್ಕಿಂತ ಹೆಚ್ಚು ನಕಲಿ. ಇದೆಂತಹ ಕ್ರೂರ ತಮಾಷೆ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ ಕೋಟಾದಲ್ಲಿ ಉತ್ತರ ಪ್ರದೇಶದ ಸಾವಿರಾರು ಮಕ್ಕಳು ಸಿಲುಕಿದ್ದಾಗ, ಈ ಬಸ್ಗಳು ಎಲ್ಲಿದ್ದವು? ಅಂದು ಕಾಂಗ್ರೆಸ್ ಸರ್ಕಾರಕ್ಕೆ ಈ ಮಕ್ಕಳನ್ನು ಅವರ ಮನೆಗೆ ಬಿಡಿ ಗಡಿವರೆಗೂ ತಲುಪಿಸಲು ಸಾಧ್ಯವಾಗಿರಲಿಲ್ಲ. ಆಗ ಯೋಗಿ ಆದಿತ್ಯನಾಥ್ರವರು ಈ ಮಕ್ಕಳಿಗಾಗಿ ರಾತ್ರೋ ರಾತ್ರಿ ಬಸ್ ರೆಡಿ ಮಾಡಿ ಅವರ ಮನೆಗೆ ಕಳುಹಿಸಿದ್ದರು. ಖುದ್ದು ರಾಜಸ್ಥಾನ ಸಿಎಂ ಕೂಡಾ ಅವರ ನಡೆಯನ್ನು ಶ್ಲಾಘಿಸಿದ್ದರು ಎಂದಿದ್ದಾರೆ.