ಇಂದಿರಾ, ರಾಜೀವ್ ಗಾಂಧಿ ಕಲಿಸಿದ್ದಾರೆ ನಿರ್ಭೀತ ಪಾಠ; ಮೋದಿ ಬೆದರಿಕೆಗೆ ಜಗ್ಗಲ್ಲ: ಪಿ ಚಿದಂಬರಂ!
ಗಾಂಧಿ ಕುಟುಂಬದ ಮೂರು ಟ್ರಸ್ಟ್ ಹಣಕಾಸು ವ್ಯವಹಾರ ಕುರಿತ ತನಿಖೆಗೆ ಕೇಂದ್ರ ಸರ್ಕಾರ ಆದೇಶಿಸಿದ ಬೆನ್ನಲ್ಲೇ ಕಾಂಗ್ರೆಸ್ ಗರಂ ಆಗಿದೆ. ಇದೀಗ ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಕೇಂದ್ರ ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ನಿರ್ಭೀತತೆ ಕಲಿಸಿದ್ದಾರೆ. ಹೀಗಾಗಿ ಮೋದಿ ಬೆದರಿಕೆಗೆ ಜಗ್ಗಲ್ಲ ಎಂದಿದ್ದಾರೆ.
ನವದೆಹಲಿ(ಜು.09): ಗಾಂಧಿ ಕುಟುಂಬದ ಟ್ರಸ್ಟ್ ಮೇಲೆ ಕೇಳಿಬಂದ ಹಣಕಾಸು ವ್ಯವಹಾರ ಆರೋಪದ ಬೆನ್ನಲ್ಲೇ ಕೇಂದ್ರ ಸರ್ಕಾರ ತನಿಖೆಗೆ ಸಮಿತಿ ರಚಿಸಿದೆ. ಇದೀಗ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ರಾಜಕೀದಾಟಕ್ಕೆ ವೇದಿಕೆ ಕಲ್ಪಿಸಿದೆ. ಇದೀಗ ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ, ಮೋದಿ ಸರ್ಕಾರದ ವಿರುದ್ಧ ಕಡಿ ಕಾರಿದ್ದಾರೆ. ಬಿಜೆಪಿ ಸರ್ಕಾರದ ಯಾವುದೇ ಬೆದರಿಕೆಗೆ ಜಗ್ಗುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಸೋನಿಯಾ ಕುಟುಂಬದ ಟ್ರಸ್ಟ್ನಲ್ಲಿ ವಿದೇಶಿ ಹಣ..? ತನಿಖೆಗೆ ಸಚಿವರ ತಂಡ ರೆಡಿ.
ರಾಜೀವ್ ಗಾಂಧಿ ಫೌಂಡೇಶನ್, ರಾಜೀವ್ ಗಾಂಧಿ ಟಾರಿಟೇಬಲ್ ಟ್ರಸ್ಟ್ ಹಾಗೂ ಇಂದಿರಾ ಗಾಂಧಿ ಮೆಮೋರಿಯಲ್ ಟ್ರಸ್ಟ್ ಮೇಲೆ ಬಿಜೆಪಿ ಆರೋಪ ಮಾಡಿತ್ತು. ವಿದೇಶಿ ಅಕ್ರಮ ಹಣ, ಅಕ್ರಮ ಹಣ ವರ್ಗಾವಣೆ, ವಿದೇಶಿ ದೇಣಿ ಸಂಗ್ರಹ ಹಾಗೂ ತೆರಿಗೆ ವಂಚನೆ ಸೇರಿದಂತೆ ಹಣಕಾಸು ಅವ್ಯವಹಾರ ನಡೆಸಿದೆ ಎಂದು ಆರೋಪಿಸಲಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಸಮಿತಿ ಸಚಿಸಿ ತನಿಖೆಗೆ ಆದೇಶಿಸಿದೆ. ಗಾಂಧಿ ಕುಟುಂಬದ ಟ್ರಸ್ಟ್ ಹಾಗೂ ಕಾಂಗ್ರೆಸ್ ಯಾವುದೇ ಸವಾಲು ಎದುರಿಸಲು ಸಿದ್ದ ಎಂದು ಚಿದಂಬರಂ ಹೇಳಿದ್ದಾರೆ.
ಇಂದಿರಾ ಗಾಂಧಿ, ರಾಜೀವ್ ಗಾಂಧಿ ನಿರ್ಭೀತಿಯಿಂದ ಆಡಳಿತ ನಡೆಸಿದ್ದಾರೆ. ಸಾವಿಗೂ ಹೆದರದೆ ಜೀವನ ನಡೆಸಿದ್ದಾರೆ. ಅವರ ಆದರ್ಶಗಳು ನಮಗೆ ಸ್ಪೂರ್ತಿಯಾಗಿದೆ. ನಿರ್ಭೀತತೆಯನ್ನು ಕಲಿತಿರುವ ನಮಗೆ ಮೋದಿ ಸರ್ಕಾರದ ಬೆದರಿಕೆ ಸವಾಲುಗಳಿಗೆ ಹೆದರುವುದಿಲ್ಲ ಎಂದು ಪಿ. ಚಿದಂಬರಂ ಹೇಳಿದ್ದಾರೆ.
ಗಾಂಧಿ ಕುಟುಂಬದ 3 ಟ್ರಸ್ಟ್ಗಳಿಗೆ ಸೋನಿಯಾ ಗಾಂಧಿ ಅಧ್ಯಕ್ಷರಾಗಿದ್ದಾರೆ. ಗಾಂಧಿ ಕುಟುಂಬದ ಟ್ರಸ್ಟ್ಗಳಿಗೆ ಚೀನಾದಿಂದ ಅಕ್ರಮವಾಗಿ ಹಣ ಹರಿದುಬಂದಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡ ಹಾಗೂ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಆರೋಪಿಸಿದ್ದರು.