ನಂದಿನಿ ಮತ್ತು ಅಮುಲ್‌ ಸಂಸ್ಥೆಗಳನ್ನು ವಿಲೀನ ಮಾಡಲಾಗುತ್ತದೆ ಎಂದು ರಾಜ್ಯದಲ್ಲಿ ಉಂಟಾಗಿರುವ ವಿವಾದವನ್ನು ಈ ಚುನಾವಣೆಯಲ್ಲಿ ಬಿಜೆಪಿ ವಿರುದ್ಧವಾಗಿ ಬಳಕೆ ಮಾಡಿಕೊಳ್ಳಲು ಕಾಂಗ್ರೆಸ್‌ ಸಂಪೂರ್ಣ ಯೋಜನೆಗಳನ್ನು ರೂಪಿಸುತ್ತಿದೆ.

ನವದೆಹಲಿ(ಏ.13): ಕರ್ನಾಟಕದಲ್ಲಿ ನಂದಿನಿ ಮತ್ತು ಅಮುಲ್‌ ಹಾಲಿನ ವಿವಾದ ಉಂಟಾಗಿರುವ ಬೆನ್ನಲ್ಲೇ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌, ಒಂದು ವೇಳೆ ಬಿಜೆಪಿ ‘ಒಂದು ದೇಶ, ಒಂದು ಹಾಲು’ ಎಂಬ ಘೋಷಣೆ ಮಾಡಲು ಮುಂದಾದರೆ ಕಾಂಗ್ರೆಸ್‌ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

ರೈತರ ನಿಯಂತ್ರಣದಲ್ಲಿರುವ ಸಹಕಾರ ಸಂಸ್ಥೆಗಳನ್ನು ಕೇಂದ್ರೀಕರಣ ಮಾಡಲು ಬಿಜೆಪಿ ಮಾಡುತ್ತಿರುವ ಪ್ರಯತ್ನವನ್ನು ಕಾಂಗ್ರೆಸ್‌ ಬಲವಾಗಿ ವಿರೋಧಿಸುತ್ತದೆ. ಕರ್ನಾಟಕದಲ್ಲಿ ಪಕ್ಷ ನಡೆಸುತ್ತಿರುವ ಚುನಾವಣಾ ಪ್ರಚಾರದ ವೇಳೆ ಮತ್ತು ರಾಜಕೀಯ ಚಟುವಟಿಕೆಗಳಲ್ಲಿ ಇದನ್ನು ಜನರಿಗೆ ಅರ್ಥ ಮಾಡಿಸಲಿದೆ. ಕೇಂದ್ರ ಗೃಹ ಸಚಿವರಾದ ಅಮಿತ್‌ ಶಾ ಅವರು ಸಂವಿಧಾನವನ್ನೇ ಮರೆತಂತಿದೆ. ಸಂವಿಧಾನದ ಪ್ರಕಾರ ಯಾವುದೇ ಸಹಕಾರ ಸಂಘಗಳು ರಾಜ್ಯಗಳಿಗೆ ಸೇರಿದವುಗಳಾಗಿವೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಂಡ್ಯದಲ್ಲಿ ಮಾತನಾಡುವ ವೇಳೆ ನಂದಿನಿ ಮತ್ತು ಅಮುಲ್‌ ಸೇರಿ ದೇಶದಲ್ಲಿ ಅಧ್ಭುತವನ್ನು ಸೃಷ್ಟಿಸಲಿವೆ ಎಂದು ಹೇಳಿದ್ದರು. ನಂದಿನಿ ಮತ್ತು ಅಮುಲ್‌ ವಿಲೀನ ಮಾಡುವುದು ಕೇಂದ್ರ ಸರ್ಕಾರದ ನಾಚಿಗೆಗೆಟ್ಟ ನಿರ್ಧಾರವಾಗಿದೆ ಎಂದು ಅವರು ಕಿಡಿಕಾರಿದರು.

ಅಮುಲ್‌ನಂಥ 10 ಸಂಸ್ಥೆಗಳು ಬಂದ್ರೂ ಕೆಎಂಎಫ್‌ಗೆ ಪೈಪೋಟಿ ಸಾಧ್ಯವಿಲ್ಲ: ಬಾಲಚಂದ್ರ ಜಾರಕಿಹೊಳಿ

ನಂದಿನಿ ಮತ್ತು ಅಮುಲ್‌ ಸಂಸ್ಥೆಗಳನ್ನು ವಿಲೀನ ಮಾಡಲಾಗುತ್ತದೆ ಎಂದು ರಾಜ್ಯದಲ್ಲಿ ಉಂಟಾಗಿರುವ ವಿವಾದವನ್ನು ಈ ಚುನಾವಣೆಯಲ್ಲಿ ಬಿಜೆಪಿ ವಿರುದ್ಧವಾಗಿ ಬಳಕೆ ಮಾಡಿಕೊಳ್ಳಲು ಕಾಂಗ್ರೆಸ್‌ ಸಂಪೂರ್ಣ ಯೋಜನೆಗಳನ್ನು ರೂಪಿಸುತ್ತಿದೆ.